ಅಂಧರ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು
ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಟಿ20 ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ರೋಚಕ ಪಂದ್ಯದ ವಿವರ ಇಲ್ಲಿದೆ.
ಕೊಲಂಬೊ(ಜು.25): ಇಲ್ಲಿ ಮಂಗಳವಾರ ಮುಕ್ತಾಯವಾದ ಅಂಧರ ಟಿ20 ಕ್ರಿಕೆಟ್ ಟೂರ್ನಿಯ 5ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿದ ಭಾರತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಇದರೊಂದಿಗೆ ಭಾರತ 4-1 ಅಂತರದಿಂದ ಸರಣಿ ಜಯಿಸಿದೆ. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 5 ವಿಕೆಟ್ಗೆ 189 ರನ್ಗಳಿಸಿತು. ಇದಕ್ಕುತ್ತರವಾಗಿ ಭಾರತ ಸುನಿಲ್ ರಮೇಶ್ (103) ಶತಕದ ನೆರವಿನಿಂದ 16 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 190 ರನ್ಗಳಿಸಿ ಜಯಗಳಿಸಿತು. ಕಾರಣಾಂತರಗಳಿಂದ ಮಂಗಳವಾರವೇ ನಡೆದ 4ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತ 8 ವಿಕೆಟ್ಗಳ ಜಯ ಪಡೆಯಿತು.
ಟಿ20 ಸರಣಿಗೂ ಮೊದಲು ಶ್ರೀಲಂಕಾ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತ್ತು. 3 ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತ್ತು. ಇದೀಗ ಏಕದಿನ ಸರಣಿ ಸೋಲಿಗೆ ಭಾರತ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡಿದೆ.