ಪುಲ್ಲೇಲ ಗೋಪಿಚಂದ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬ್ಯಾಡ್ಮಿಂಟನ್ ತಾರೆ ಅಪರ್ಣ
ಪುಲ್ಲೇಲ ಗೋಪಿಚಂದ್..ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರವನ್ನ ವಿಶ್ವಮಟ್ಟದಲ್ಲಿ ಗುರುತಿಸಿದ ದಿಗ್ಗಜ. ಪಿವಿ ಸಿಂಧೂ, ಸೈನಾ ನೆಹ್ವಾಲ್ ಸೇರಿದಂತೆ ಹಲವು ಭಾರತೀಯ ಬ್ಯಾಡ್ಮಿಂಟನ್ ಸ್ಟಾರ್ಗಳನ್ನ ಬೆಳೆಸಿದ ಪುಲ್ಲೇಲ ಗೋಪಿಚಂದ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟಕ್ಕು ನಡೆದಿದ್ದಾದರು ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಕೊಚ್ಚಿ(ಜು.03): ಸೈನಾ ನೆಹ್ವಾಲ್, ಪಿವಿ ಸಿಂಧೂ, ಕಿಡಂಬಿ ಶ್ರೀಕಾಂತ್ ಸೇರಿದಂತೆ ಭಾರತ ಸ್ಟಾರ್ ಬ್ಯಾಡ್ಮಿಂಟನ್ ತಾರೆಗಳ ಕೋಚ್ ಪುಲ್ಲೇಲ ಗೋಪಿಚಂದ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಪಕ್ಷಪಾತವಾಗಿದೆ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್ ಗೋಪಿಚಂದ್ ಹಾಗೂ ಭಾರತೋ ಬ್ಯಾಡ್ಮಿಂಟನ್ ಅಸೋಸಿಯೇಶನ್ ವಿರುದ್ಧ ದೂರು ದಾಖಲಾಗಿದೆ.
ಜಕರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಪ್ರತಿನಿಧಿಸಲಿರುವ ಭಾರತದ ಬ್ಯಾಡ್ಮಿಂಟನ್ ತಂಡಕ್ಕೆ ತನ್ನನ್ನು ಆಯ್ಕೆ ಮಾಡಿಲ್ಲ ಎಂದು ಕೇರಳಾ ಮೂಲಕ ಅಪರ್ಣ ಬಾಲನ್ ಇದೀಗ ಕೇರಳಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಆಗಸ್ಟ್ 18ರಿಂದ ಜಕರ್ತಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೆ ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಶನ್ ಹಾಗೂ ಪುಲ್ಲೇಲ ಗೋಪಿಚಂದ್ ತಂಡವನ್ನ ಆಯ್ಕೆ ಮಾಡಿದೆ. ಆದರೆ ಗೋಪಿಚಂದ್ ತನ್ನ ಪುತ್ರಿ ಗಾಯತ್ರಿ ಗೋಪಿಚಂದ್ಗೆ ಅವಕಾಶ ಮಾಡಿಕೊಡೋ ನಿಟ್ಟಿನಲ್ಲಿ, ತನ್ನನ್ನ ಕಡೆಗಣಿಸಿದ್ದಾರೆ. ಇದಕ್ಕೆ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕೂಡ ಸಾಥ್ ನೀಡಿದೆ ಎಂದು ಅಪರ್ಣ ಬಾಲನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
9 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರೋ ಅಪರ್ಣಾ ಬಾಲನ್, ಭಾರತೀಯ ಬ್ಯಾಡ್ಮಿಂಟನ್ ಏಷ್ಯನ್ ಗೇಮ್ಸ್ಗಾಗಿ ನಡೆಸಿದ ಟ್ರಯಲ್ನಲ್ಲಿ ಅಪರ್ಣಾ ಹಾಗೂ ಆಕೆಯ ಜೊತೆಗಾರ್ತಿ ಹೈದರಾಬಾದ್ನಲ್ಲಿ ಚಾಂಪಿಯನ್ ಪ್ರಶಸ್ತಿ ಹಾಗೂ ಬೆಂಗಳೂರಿನಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಷ್ಟಾದರೂ ಏಷ್ಯನ್ ಗೇಮ್ಸ್ ಪ್ರತಿನಿಧಿಸಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಅಪರ್ಣ ಬಾಲನ್ ಆಕ್ರೋಷ ಹೊರಹಾಕಿದ್ದಾರೆ.
Won Women Doubles Title at All India Senior Ranking Badminton Tournament, Hyderabad #hardworkpaysoff #superhappy pic.twitter.com/PUrIro0yhv
— Aparna Balan (@aparna_leo) June 24, 2018
ಸೆಲೆಕ್ಷನ್ ಟ್ರಯಲ್ನಲ್ಲಿ ಗೋಪಿಚಂದ್ ಪುತ್ರಿ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ. ಆದರೆ ನಾವು ಚಾಂಪಿಯನ್ ಪಟ್ಟ ಅಲಂಕರಿಸಿದರೂ, ತಂಡಕ್ಕೆ ಆಯ್ಕೆಯಾಗಿಲ್ಲ. ಈ ಕುರಿತು ನ್ಯಾಯ ದೊರಕಿಸಿಕೊಡಬೇಕೆಂದು ಅಪರ್ಣಾ ಕೇರಳಾ ಹೈಕೋರ್ಟ್ ಮೊರೆ ಹೋಗಿದ್ದಾರೆ.