ಭಾರತ-ಅಫ್ಘಾನ್ ಪಂದ್ಯ ಟೈ-ಧೋನಿ ನಾಯಕತ್ವಕ್ಕೆ ಸಿಗಲಿಲ್ಲ ಗೆಲುವು!
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಆರಂಭದಿಂದಲೇ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿತು. ಒಂದೆಡೆ ಎಂ.ಎಸ್ ಧೋನಿ ಮತ್ತೆ ನಾಯಕನಾದರೆ, ಮತ್ತೊಂದೆಡೆ ಆಫ್ಘಾನ್ ಅತ್ಯುತ್ತಮ ಪ್ರದರ್ಶನ ನೀಡಿತು. ಇಲ್ಲಿದೆ ಪಂದ್ಯದ ಹೈಲೈಟ್ಸ್
ದುಬೈ(ಸೆ.25): ಏಷ್ಯಾಕಪ್ ಸೂಪರ್ 4 ಹಂತದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ. ಆದರೆ ಅದ್ಬುತ ಪ್ರದರ್ಶನ ನೀಡಿದ ಅಫ್ಘಾನಿಸ್ತಾನದ ಚಾಂಪಿಯನ್ ಆಟ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆಫ್ಘಾನಿಸ್ತಾನ ನೀಡಿದ 253 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ಅಂಬಾಟಿ ರಾಯುಡು ಡೀಸೆಂಟ್ ಒಪನಿಂಗ್ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 110 ರನ್ ಜೊತೆಯಾಟ ನೀಡಿದರು.
ಕೆಎಲ್ ರಾಹುಲ್ ಹಾಗೂ ಅಂಬಾಟಿ ರಾಯುಡು ಅರ್ಧಶತಕ ಸಿಡಿಸಿ ಮಿಂಚಿದರು. ರಾಯುಡು 57 ರನ್ ಸಿಡಿಸಿ ಔಟಾದರೆ, ರಾಹುಲ್ 60 ರನ್ ಸಿಡಿಸಿ ನಿರ್ಗಮಿಸಿದರು. ನಾಯಕನಾಗಿ ಮತ್ತೆ ಕಣಕ್ಕಿಳಿದ ಎಂ.ಎಸ್ ಧೋನಿ ಕೇವಲ 8 ರನ್ ಸಿಡಿಸಿ ನಿರಾಸೆ ಅನುಭವಿಸಿದರು.
ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಅವಕಾಶ ಪಡೆದ ಮನೀಶ್ ಪಾಂಡೆ ನಿರಾಸೆ ಮೂಡಿಸಿದರು. ಪಾಂಡೆ 8 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ದಿನೇಶ್ ಕಾರ್ತಿಕ್ ಹಾಗೂ ಕೇದಾರ್ ಜಾದವ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು.
ಜಾದವ್ 19 ರನ್ ಸಿಡಿಸಿ ರನೌಟ್ಗೆ ಬಲಿಯಾದರು. ದಿನೇಶ್ ಕಾರ್ತಿಕ್ 44 ರನ್ ಸಿಡಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಜವಾಬ್ದಾರಿಯುತ ಜೊತೆಯಾಟ ನೀಡಿದರು. ಅಂತಿಮ 12 ಎಸೆತದಲ್ಲಿ ಭಾರತದ ಗೆಲುವಿಗೆ 13 ರನ್ ಅವಶ್ಯಕತೆ ಇತ್ತು.
9 ರನ್ ಸಿಡಿಸಿದ ಕುಲ್ದೀಪ್ ರನೌಟ್ಗೆ ಬಲಿಯಾದರೆ, ಸಿದ್ಧಾರ್ಥ್ ಕೌಲ್ ಶೂನ್ಯ ಸುತ್ತಿದರು.
ಆತಂಕಕ್ಕೆ ಸಿಲುಕಿದ ಟೀಂ ಇಂಡಿಯಾಗೆ ಜಡೇಜಾ ಬೌಂಡರಿ ಸಿಡಿಸೋ ಮೂಲಕ ಒತ್ತಡ ಕಡಿಮೆ ಮಾಡಿದರು. ಗೆಲುವಿಗೆ ಇನ್ನೊಂದು ರನ್ ಬಾಕಿ ಇರುವಂತೆ ಜಡೇಜಾ ಔಟಾದರು. ಈ ಮೂಲಕ ಭಾರತ 252 ರನ್ಗೆ ಆಲೌಟ್ ಆಯಿತು. ಇಷ್ಟೇ ಅಲ್ಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.
ರೋಹಿತ್ ಶರ್ಮಾ ವಿಶ್ರಾಂತಿಯಿಂದ ಎಂ.ಎಸ್ ಧೋನಿ ನಾಯಕತ್ವ ವಹಿಸಿಕೊಂಡಿದ್ದರು. ಧೋನಿ ನಾಯಕನಾಗಿ 200ನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಿಗಲಿಲ್ಲ. ಅಫ್ಘಾನ್ ವಿರುದ್ಧ ಭಾರತ ಹೋರಾಟ ನೀಡಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.