ಮೂರನೇ ಟೆಸ್ಟ್’ಗೆ ಈ ಮೂವರಿಗೆ ಗೇಟ್’ಪಾಸ್ ಕೊಡೋದೇ ಬೆಸ್ಟ್..!
ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ಭಾರತ ಇನ್ನಿಂಗ್ಸ್ ಹಾಗೂ 159 ರನ್’ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ನೇರ ಕಾರಣ ಭಾರತೀಯ ಬ್ಯಾಟ್ಸ್’ಮನ್’ಗಳ ಕೆಟ್ಟ ಪ್ರದರ್ಶನ. ಇನ್ನುಳಿದ ಮೂರು ಟೆಸ್ಟ್’ಗಳಲ್ಲಿ ತಂಡ ಗೌರವಾನ್ವಿತ ಪ್ರದರ್ಶನ ತೋರಬೇಕಾದರೆ ವಿರಾಟ್ ಪಡೆಯಲ್ಲಿ ಮೇಜರ್ ಸರ್ಜರಿ ಮಾಡಲೇಬೇಕಿದೆ.
ಬೆಂಗಳೂರು[ಆ.13]: ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ಭಾರತ ಇನ್ನಿಂಗ್ಸ್ ಹಾಗೂ 159 ರನ್’ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ನೇರ ಕಾರಣ ಭಾರತೀಯ ಬ್ಯಾಟ್ಸ್’ಮನ್’ಗಳ ಕೆಟ್ಟ ಪ್ರದರ್ಶನ. ಇನ್ನುಳಿದ ಮೂರು ಟೆಸ್ಟ್’ಗಳಲ್ಲಿ ತಂಡ ಗೌರವಾನ್ವಿತ ಪ್ರದರ್ಶನ ತೋರಬೇಕಾದರೆ ವಿರಾಟ್ ಪಡೆಯಲ್ಲಿ ಮೇಜರ್ ಸರ್ಜರಿ ಮಾಡಲೇಬೇಕಿದೆ. ಹೀಗಾಗಿ ತಂಡದ ಹಿತದೃಷ್ಟಿಯಿಂದ ಭಾರತದ ಈ ಮೂವರು ಕ್ರಿಕೆಟಿಗರನ್ನು ತಂಡದಿಂದ ಕೈಬಿಡುವುದೇ ಉತ್ತಮ ಎನ್ನಬಹುದು. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..
1. ದಿನೇಶ್ ಕಾರ್ತಿಕ್:
ವೃದ್ದಿಮಾನ್ ಸಾಹ ಗಾಯಗೊಂಡಿದ್ದರಿಂದ ಟೆಸ್ಟ್ ತಂಡದಲ್ಲಿ ಸ್ಥಾನಪಡೆದ ದಿನೇಶ್ ಕಾರ್ತಿಕ್ ಸಿಕ್ಕ ಅವಕಾಶವನ್ನು ಹಾಳುಮಾಡಿಕೊಂಡರು. ಅನುಭವಿ ಆಟಗಾರ ಹಾಗೂ ನಿದಾಸ್ ಟ್ರೋಫಿಯ ಹೀರೋ ಆಗಿ ಮಿಂಚಿದ್ದ ಕಾರ್ತಿಕ್ ಅವರ ಮೇಲೆ ಆಯ್ಕೆ ವಿಶ್ವಾಸವಿಟ್ಟಿತ್ತು. ಆದರೆ ಎರಡು ಟೆಸ್ಟ್’ನಲ್ಲಿ ಕಾರ್ತಿಕ್ ಬಾರಿಸಿದ್ದು ಕೇವಲ 21 ರನ್ ಮಾತ್ರ. ಮೊದಲ ಟೆಸ್ಟ್’ನಲ್ಲಿ 0 ಹಾಗೂ 20 ರನ್ ಬಾರಿಸಿದರೆ, ಎರಡನೇ ಟೆಸ್ಟ್’ನಲ್ಲಿ ಒಂದು ಹಾಗೂ ಶೂನ್ಯ[21] ಸುತ್ತಿ ಟೀಂ ಇಂಡಿಯಾ ಸೋಲಿಗೆ ಮಹತ್ವದ ಕೊಡುಗೆ ನೀಡಿದರು. ಮೂರನೇ ಟೆಸ್ಟ್’ನಲ್ಲಿ ಕಾರ್ತಿಕ್’ಗೆ ಗೇಟ್’ಪಾಸ್ ನೀಡಿ ಯುವ ಪ್ರತಿಭೆ ರಿಶಭ್ ಪಂತ್’ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
2. ಮುರಳಿ ವಿಜಯ್:
ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್’ಮನ್ ಮುರಳಿ ವಿಜಯ್ ಕೂಡಾ ನಿರಾಸೆ ಮೂಡಿಸಿದರು. ಆಡಿದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ವಿಜಯ್ ಬಾರಿಸಿದ್ದು ಕೇವಲ 48 ರನ್’ಗಳು ಮಾತ್ರ. ಮೊದಲ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ 20 ರನ್ ಬಾರಿಸಿದ್ದೇ ವಿಜಯ್ ಅವರ ಗರಿಷ್ಠ ಸಾಧನೆ.
ಜೇಮ್ಸ್ ಆ್ಯಂಡರ್’ಸನ್ ಎದುರು ತಡಬಡಾಯಿಸುವ ವಿಜಯ್ ಅವರಿಗೆ ಸ್ವಲ್ಪ ರೆಸ್ಟ್ ಕೊಡೋದು ಬೆಸ್ಟ್.
3. ಕೆ.ಎಲ್ ರಾಹುಲ್:
ಟೀಂ ಇಂಡಿಯಾ ಆಯ್ಕೆ ಸಮಿತಿ ಮೊದಲ ಟೆಸ್ಟ್ ಪಂದ್ಯದ ವೇಳೆ ಟೆಸ್ಟ್ ಪರಿಣಿತ ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟು ಕೆ.ಎಲ್ ರಾಹುಲ್ ಅವರನ್ನು ಆಡಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿತ್ತು. ಆದರೆ ರಾಹುಲ್ ಎರಡು ಟೆಸ್ಟ್’ನಲ್ಲಿ ಬಾರಿಸಿದ್ದು ಕೇವಲ 35 ರನ್ ಮಾತ್ರ. ಮೊದಲ ಟೆಸ್ಟ್’ನಲ್ಲಿ 17 ರನ್ ಬಾರಿಸಿದರೆ, ಎರಡನೇ ಟೆಸ್ಟ್’ನಲ್ಲಿ ಗಳಿಸಿದ್ದು 18 ರನ್ ಮಾತ್ರ. ಸಿಕ್ಕ ಅವಕಾಶದಲ್ಲಿ ಜವಾಬ್ದಾರಿ ಅರಿತು ಆಡದ ರಾಹುಲ್ ಅವರನ್ನು ತಂಡದಿಂದ ಕೈಬಿಡವ ಸಾಧ್ಯತೆ ಹೆಚ್ಚು.
ರಾಹುಲ್ ಬದಲಿಗೆ ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ ಕರುಣ್ ನಾಯರ್’ಗೆ ಅವಕಾಶ ಸಿಕ್ಕರೆ ಅಚ್ಚರಿಪಡಬೇಕಿಲ್ಲ.