ಬೆಂಗಳೂರಿನ ಕೊತ್ತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸ್ಯಾಂಡಲ್‌ವುಡ್‌ ನಿರ್ಮಾಪಕರು ಹಾಗೂ ಭಾರೀ ಉದ್ಯಮಿಯೂ ಆಗಿದ್ದ ಮಂಜುನಾಥ್‌ ಭಟ್‌ ಎಂಬುವವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ... ಹೀಗೊಂದು ಸಾಲುಗಳೊಂದಿಗೆ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ ‘ಅರಿಷಡ್ವರ್ಗ’ ಚಿತ್ರದ ಟ್ರೇಲರ್‌. 

ಅರವಿಂದ್‌ ಕಾಮತ್‌ ನಿರ್ದೇಶನದ ಈ ಚಿತ್ರದಲ್ಲಿ ಅವಿನಾಶ್‌, ನಂದಗೋಪಾಲ…, ಸಂಯುಕ್ತ ಹೊರನಾಡು, ಅಂಜು ಆಳ್ವ ನೈಕ್‌, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್‌ ಕುಪ್ಲಿಕರ್‌, ಶ್ರೀಪತಿ ಮಂಜನಬೈಲು ನಟಿಸಿದ್ದಾರೆ.

ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ಅರಿಷಡ್ವರ್ಗ' ಪ್ರದರ್ಶನ!

ಇದೊಂದು ಒಂದು ಮಿಸ್ಟರಿ ಥ್ರಿಲ್ಲರ್‌ ಸಿನಿಮಾ. ನಟನಾಗೋ ಕನಸು ಹೊತ್ತು, ಹೊಟ್ಟೆಪಾಡಿಗೆ ಜಿಗಲೋ(ಗಂಡುವೇಶ್ಯೆ) ಆಗಿ ಕೆಲಸ ಮಾಡುವವನೊಂದಿಗೆ ಆರಂಭವಾಗುವ ಕತೆ. ಅಪರಿಚಿತ ಮಹಿಳೆಯೊಬ್ಬಳನ್ನು ಹುಡುಕಿ ಹೋದವನಿಗೆ ಉಡುಗೊರೆಯಾಗಿ ಸಿಗುವುದು ಒಂದು ಕೊಲೆ ಮತ್ತು ಅದಕ್ಕೊಂದು ಸಾಕ್ಷಿ. ಕೊಲೆಯ ಬಲೆಯೊಳಗಿನಿಂದ ಹೊರಗೆ ಬರಲು ಅವನು ಈಗ ಸಾಕ್ಷಿಯನ್ನೇ ಕೊಲ್ಲಬೇಕು. ಇದು ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಗಳ ಒಟ್ಟು ಮಿಶ್ರಣದ ಸಿನಿಮಾ ಎನ್ನಬಹುದು.

ರಂಗಕರ್ಮಿ ಅರವಿಂದ್‌ ಕಾಮತ್‌ ಚೊಚ್ಚಲ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಬಿಡುಗಡೆ ಇತ್ತೀಚೆಗೆ ನಡೆಯಿತು. ನವೆಂಬರ್‌ ತಿಂಗಳ 27ರಂದು ಈ ಸಿನಿಮಾ ಚಿತ್ರಮಂದಿರಗಳಿಗೆ ಬರುತ್ತಿದೆ. ಚಿತ್ರದ ಬಿಡುಗಡೆಗೆ ಬಾಮಾ ಹರೀಶ್‌ ಸಹಕಾರ ನೀಡುತ್ತಿದ್ದಾರೆ. ಬೋಲ್ಡ್‌ ಪಾತ್ರಗಳ ಮೂಲಕ ಕತೆಯನ್ನು ಹೇಳಿದ್ದು, ನೋಡುಗರಿಗೆ ಈ ಸಿನಿಮಾ ಮೆಚ್ಚುಗೆ ಆಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ. ನಟ ಬಾಲಾಜಿ ಮನೋಹರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ.

ಚಿತ್ರದ ಟ್ರೇಲರ್‌ ಅನ್ನು ಮೊದಲು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದು ನಟ ಸುದೀಪ್‌. 2019ರಲ್ಲಿ ಲಂಡನ್‌ ವಲ್ಡ…ರ್‍ ಪ್ರೀಮಿಯರ್‌ ಹಾಗೂ ಸಿಂಗಾಪುರದಲ್ಲಿ ನಡೆದ ಸೌತ್‌ಏಷ್ಯನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿದೆ. ಕನಸು ಟಾಕೀಸ್‌ ಈ ಚಿತ್ರವನ್ನು ನಿರ್ಮಿಸಿದೆ.