‘ಆನಂದ್‌ ಸಿನಿಮಾ ಮುಹೂರ್ತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿತ್ತು. ಅಪ್ಪಾಜಿ, ಅಮ್ಮ, ಉದಯಶಂಕರ್‌, ಇಡೀ ಗಾಂಧೀನಗರ ಅಲ್ಲಿ ನೆರೆದಿತ್ತು. ಲಕ್ಞ್ಮಣ್‌ ರಾವ್‌ ಕ್ಲಾಪ್‌ ಮಾಡಿದ್ರು. ‘ನನ್ಹೆಸ್ರು ಆನಂದ್‌ ಅಂತ’ ಅನ್ನೋದೇ ನನ್ನ ಫಸ್ಟ್‌ ಡೈಲಾಗ್‌. ಯಾಕೋ ಗೊತ್ತಿಲ್ಲ, ಅವತ್ತು ಎಮೋಶನಲ್‌ ಆಗಿ ಬಹಳ ಅತ್ತಿದ್ದೆ.’

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಸಿನಿಮಾ ಜರ್ನಿಗೆ 35 ವರ್ಷ. ಈ ಹಿನ್ನೆಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಮ್ಮ ಮೊದಲ ಸಿನಿಮಾ ‘ಆನಂದ್‌’ನ ನೆನಪುಗಳನ್ನು ಮೆಲುಕು ಹಾಕಿದ್ದು ಹೀಗೆ.

Add Asianetnews Kannada as a Preferred SourcegooglePreferred

35 ವರ್ಷ ಸಿನಿ ಜರ್ನಿ ಪೂರೈಸಿದ ಶಿವಣ್ಣ; ಕೇಕ್‌ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು! 

‘ಆ ಘಟನೆ ಆಗಿ ಇಷ್ಟೆಲ್ಲ ವರ್ಷ ಆಯ್ತು. ವಯಸ್ಸಾಗ್ತಾ ಹೋದಂತೆ ಸೆಲೆಬ್ರೇಶನ್‌, ಕೂಗಾಟ ಹೆಚ್ಚು ಇಷ್ಟಆಗಲ್ಲ. ಆದರೂ ಅಭಿಮಾನಿಗಳ ಪ್ರೀತಿ ದೊಡ್ಡದು. ಜನ ನನ್ನ ಎನರ್ಜಿಯ ರಹಸ್ಯ ಏನು ಅಂತ ಕೇಳ್ತಾರೆ. ಆ ಗುಟ್ಟು ಮತ್ತೇನೂ ಅಲ್ಲ, ಜನರ ಪ್ರೀತಿ ಅಷ್ಟೇ. ಅದು ನಮ್ಮ ಎನರ್ಜಿಯನ್ನು ದುಪ್ಪಟ್ಟು ಮಾಡುತ್ತದೆ. ಆ ವಿಚಾರದಲ್ಲಿ ನಾನು ಪುಣ್ಯ ಮಾಡಿದ್ದೆ. ನನ್ನ ಸಿನಿಮಾಗಳಲ್ಲಿ ಕೆಲವು ಸೋತಿದೆ, ಕೆಲವು ಗೆದ್ದಿದೆ. ಸಿನಿಮಾ ಸೋತಿದೆ ಅಂದ ಮಾತ್ರಕ್ಕೆ ಅದು ಕೆಟ್ಟಸಿನಿಮಾ ಅಲ್ಲ. ಯಾವುದೋ ಕಾರಣಕ್ಕೆ ಜನರ ಗಮನ ಸೆಳೆದಿರೋದಿಲ್ಲ ಅಷ್ಟೇ. ಇದಕ್ಕೆ ಕಾರಣ ನನಗೆ ಗೊತ್ತಿಲ್ಲ. ಅದೆಲ್ಲ ತಿಳ್ಕೊಂಡ್ರೆ ನಾವು ದೇವರಾಗಿ ಬಿಡ್ತೀವಿ, ನಾವು ದೇವರಾಗಬಾರ್ದು’ ಎಂದರು.

"

‘ನಾವು ಅಪ್‌ಡೇಟ್‌ ಆಗ್ತನೇ ಇರಬೇಕಾದ್ದು ಈ ಕಾಲದ ಅನಿವಾರ್ಯತೆ. ನನಗದು ಕಷ್ಟಆಗಲ್ಲ. ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತೇನೆ. ಹೊಸಬರನ್ನು ವಿಶ್ವಾಸದಿಂದ ಕಾಣುತ್ತೇನೆ. ನನ್ನ ಹೊಸ ಸಿನಿಮಾ ಶಿವರಾತ್ರಿಯ ದಿನ ಅನೌನ್ಸ್‌ ಆಗಲಿದೆ’ ಎಂದರು. ‘ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಒಳ್ಳೊಳ್ಳೆ ಸಿನಿಮಾ ಬರ್ತಿವೆ. ಅದ್ರಲ್ಲಿ ನಮ್‌ ಸಿನಿಮಾನೂ ಇದೆ ಅನ್ನೋದಕ್ಕಿಂತ ಬೇರೆ ಖುಷಿ ಬೇಕಾ’ ಎಂದು ಮನಃಪೂರ್ವಕವಾಗಿ ನುಡಿದರು.

ಎಸ್‌ಪಿಎಲ್‌ ಕ್ರಿಕೆಟ್‌ ಹಬ್ಬ

ಶಿವಣ್ಣ ಸಿನಿಯಾತ್ರೆಗೆ 35 ವಸಂತ ತುಂಬಿದ ಹಿನ್ನೆಲೆಯಲ್ಲಿ ಶಿವರಾಜ್‌ ಕುಮಾರ್‌ ಪ್ರೀಮಿಯರ್‌ ಲೀಗ್‌ ಇಂದು (ಫೆ.20) ಹಾಗೂ ನಾಳೆ (ಫೆ.21) ನಡೆಯಲಿದೆ. ಬೆಂಗಳೂರಿನ ವಿಜಯನಗರದಲ್ಲಿ ನಡೆಯುವ ಈ ಮ್ಯಾಚ್‌ಗೆ ಶಿವಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ. ಶಿವಣ್ಣ ಅಭಿಮಾನಿಗಳ 12 ಟೀಮ್‌ಗಳು ಈ ಮ್ಯಾಚ್‌ನಲ್ಲಿ ಸ್ಪರ್ಧಿಸಲಿವೆ.

ಶಿವಣ್ಣ ಸಿನಿ ಜರ್ನಿಗೆ 35 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಮನ್‌ ಡಿಪಿ ಬಿಡುಗಡೆ ಮಾಡಲಾಯ್ತು. ನಿರ್ಮಾಪಕ ಕೆಪಿ ಶ್ರೀಕಾಂತ್‌ ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದರು. ಅಭಿಮಾನಿಗಳು ಶೇರ್‌ ಮಾಡಿದರು.