ಶಿವಮೊಗ್ಗ Zooನಲ್ಲಿ ಬ್ಲ್ಯಾಕ್ ಪ್ಯಾಂಥರ್, ಚಿರತೆ ದತ್ತು ಪಡೆದ ನಟ ಧನ್ವೀರ್!
ನಟ ಧನ್ವೀರ್ ಮತ್ತೊಮ್ಮೆ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವುಗಳನ್ನು ಮರೆಯಬಾರದು ಎಂದಿದ್ದಾರೆ.
'ಬಜಾರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಧನ್ವೀರ್ ಈ ವರ್ಷ ಶಿವಮೊಗ್ಗದ ಮೃಗಾಲಯದಲ್ಲಿ ಒಂದು ಚಿರತೆ ಮತ್ತು ಒಂದು ಕಪ್ಪು ಪ್ಯಾಂಥರ್ನನ್ನು ದತ್ತು ತೆಗೆದುಕೊಂಡಿದ್ದಾರೆ. ಧನ್ವೀರ್ ಎಲ್ಲಿಯೂ ಈ ಬಗ್ಗೆ ಪೋಟೋ ಹಂಚಿ ಕೊಂಡಿಲ್ಲವಾದರೂ ಅಭಿಮಾನಿಗಳ ಪೇಜ್ನಲ್ಲಿ ಇದರ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
ಚಿರತೆ ಹೆಸರು ಕೃತಿ, ಬ್ಲ್ಯಾಕ್ ಪ್ಯಾಂಥರ್ ಹೆಸರು ಮಿಂಚು ಎಂದು ತಿಳಿದು ಬಂದಿದೆ. 2020ರ ಸೆಪ್ಟೆಂಬರ್ನಲ್ಲಿ ಮೈಸೂರು ಮೃಗಾಲಯದಲ್ಲಿ ಕಪ್ಪು ಫ್ಯಾಂಥರ್ ದತ್ತು ಪಡೆದುಕೊಂಡಿದ್ದರು ಧನ್ವೀರ್. ಇದು ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಧನ್ವೀರ್ ' ಕೊರೋನಾ ಎರಡನೇ ಅಲೆಯ ಲಾಕ್ಡೌನ್ನಿಂದಾಗಿ ಕರ್ನಾಟಕದಲ್ಲಿರುವ ಮೃಗಾಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಮೃಗಾಲಯ ಬಂದ್ ಆಗಿರುವ ಕಾರಣ ಈಗ ದಾನಿಗಳ ಸಹಾಯ, ಪ್ರಾಣಿ ಪ್ರೀತಿ ಪಾತ್ರರಿಂದ ಮಾತ್ರ ನಡೆಯಬೇಕಿದೆ. ಈ ಕಾರಣಕ್ಕೆ ನಾನು ಚಿರತೆ ಮತ್ತೆ ಪ್ಯಾಂಥರ್ ದತ್ತು ಪಡೆದುಕೊಂಡೆ. ಕರ್ನಾಟಕದಲ್ಲಿರುವ ಎಲ್ಲಾ ಮೃಗಾಲಯಗಳಿಗಿಂತ ಶಿವಮೊಗ್ಗದ ಮೃಗಾಲಯ ಮತ್ತು ಸಫಾರಿ ತುಂಬಾನೇ ಕಷ್ಟದಲ್ಲಿದೆ. ಪ್ರಾಣಿಗಳಿಗೆ ಆಹಾರ ಹಾಕಲೇ ಬೇಕು. ಲಾಕ್ಡೌನ್ ಇರುವ ಕಾರಣದಿಂದ ನಾನು ಅಲ್ಲಿಗೆ ಭೇಟಿ ನೀಡಲು ಆಗಲಿಲ್ಲ, ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಿರುವೆ. ಲಾಕ್ಡೌನ್ ಸಡಿಲಿಕೆ ಆದ ನಂತರ ಭೇಟಿ ನೀಡುವೆ,' ಎಂದು ಧನ್ವೀರ್ ಹೇಳಿದ್ದಾರೆ.
ಧನ್ವೀರ್ ಕಾಂಟ್ರವರ್ಸಿ: ಅಷ್ಟಕ್ಕೂ ಆಗಿದ್ದೇನು..? ಇಲ್ನೋಡಿ ವಿಡಿಯೋ
'ನನಗೆ ಬಾಲ್ಯದಿಂದಲೂ ಪ್ರಾಣಿಗಳೆಂದರೆ ತುಂಬಾ ಇಷ್ಟ. ಬಾಲ್ಯದಲ್ಲಿ ಬಂಡೀಪುರ ಹಾಗೂ ನಾಗರಹೊಳೆ ಸಫಾರಿಗೆ ಹೋಗುತ್ತಿದ್ದೆ. ಕಳೆದ ವರ್ಷವೂ ಹೋಗಿದ್ದೆ,' ಎಂದಿದ್ದಾರೆ.
ನೀವು ಕೂಡ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬಹುದು. ಇಲ್ಲವಾದರೆ ಕನಿಷ್ಠ 50 ರೂ. ದಾನ ಮಾಡಬಹುದು. ಕರ್ನಾಟಕ ಮೃಗಾಲಯ ಕಳೆದ ವರ್ಷ ಜುಲೈನಲ್ಲಿ ಆ್ಯಪ್ ತೆರೆದಿದೆ. ಅದರ ಮೂಲಕವೂ ನೀವು ಕೂಡ ಮೃಗಾಲಯಗಳಿಗೆ ಬೆನ್ನೆಲುಬಾಗಿ ನಿಲ್ಲಬಹುದು. ಹೆಚ್ಚಿನ ಮಾಹಿತಿಗೆ ಕ್ಲಿಕಿಸಿ Zoo Authority of Karnataka