Puneeth Rajkumar Gandhadagudi: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದಗುಡಿಗೆ ಕೋಟೆನಾಡಿನಲ್ಲಿ ಅದ್ದೂರಿ ವೆಲ್‌ಕಮ್ ಸಿಕ್ಕಿದೆ 

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್‌

Add Asianetnews Kannada as a Preferred SourcegooglePreferred

ಚಿತ್ರದುರ್ಗ (ಅ. 28): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಕಟ್ಟ ಕಡೆಯ ಸಿನಿಮಾ ಗಂಧದಗುಡಿಗೆ (Gandhadagudi) ಕೋಟೆನಾಡಿನಲ್ಲಿ ಅದ್ದೂರಿ ವೆಲ್‌ಕಮ್ ಸಿಕ್ಕಿದೆ. ಚಿತ್ರದುರ್ಗ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ತೆರೆಕಂಡ ಸಿನಿಮಾದ ಮೊದಲ ಪ್ರದರ್ಶನ ಬೆಳಗ್ಗೆ 7ಗಂಟೆಗೆ ಶುರುವಾಗಿದ್ದು ಅಪ್ಪು ಫ್ಯಾನ್ಸ್ ಸಾಗರೋಪಾದಿಯಲ್ಲಿ ಆಗಮಿಸಿ ಅಪ್ಪುವಿನ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡರು. ಸಿನಿಮಾ ರಿಲೀಸ್ ಮುನ್ನವೇ ಪುನೀತ್ ಕಟೌಟ್‌ಗಳು ಎಲ್ಲರ ಗಮನ ಸೆಳೆದವು. ಥಿಯೇಟರ್ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಂತೆ ತಮಟೆ, ಡೊಳ್ಳು ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಂಜಿಸಿದರು. 

ಹಬ್ಬದ ವಾತಾವರಣ: ನಂತರ ಅಪ್ಪು ಅಭಿಮಾನಿಗಳ ಸಂಘದ ಅಧ್ಯಕ್ಷ ಕಿಟ್ಟಪ್ಪ, ಉಪಾಧ್ಯಕ್ಷ ಮೋಹನ್ ಸೇರಿದಂತೆ ಇನ್ನಿತರ ಅಭಿಮಾನಿಗಳು ಅಪ್ಪು ಬೃಹತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದರು‌. ಪುನೀತ್ ಕಟೌಟ್ ಎದುರು ಅಪ್ಪು ಪೋಟೋ ಇಟ್ಟು ಪೂಜೆ ಮಾಡುವ ಮೂಲಕ ಅಭಿಮಾನಿ ದೇವರುಗಳು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ಬಳಿಕ ಸಿನಿಮಾ ರಿಲೀಸ್ ಗೆ ಕ್ಷಣಗಣನೇ ಶುರುವಾಗ್ತಿದ್ದಂತೆ, ಸರಗಟ್ಟಲೇ ಪಟಾಕಿಗಳನ್ನು ಹಚ್ಚಿ ಭರ್ಜರಿಯಾಗಿ ಸಂಭ್ರಮಿಸಿದರು. ಅಲ್ಲಿಯೇ ನೆರೆದಿದ್ದ ನೂರಾರು ಅಭಿಮಾನಿಗಳಿಗೆ ಸಿಹಿ ಹಂಚಿ, ಕೇಕ್ ವಿತರಿಸುವ ಮೂಲಕ ಗಂಧದಗುಡಿ ಸಿನಿಮಾವನ್ನು ವೆಲ್‌ಕಮ್‌ ಮಾಡಿಕೊಂಡರು.

ಥಿಯೇಟರ್ ಮುಂಭಾಗ ಪುಟ್ಟ ಅಭಿಮಾನಿಯಿಂದ ಸ್ಟಂಟ್: ಗಂಧದಗುಡಿ ಸಿನಿಮಾ ರಿಲೀಸ್‌ಗೂ ಮುನ್ನ ಕೇವಲ ಐದು ವರ್ಷದ ಬಾಲಕನೋರ್ವ ಆಗಮಿಸಿ ನಾನು ಕೂಡ ಅಪ್ಪು ಅಭಿಮಾನಿ ಎಂದು ಹೇಳಿದ್ದು ಅಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಇನ್ನಷ್ಟು ಜೋಶ್ ಹೆಚ್ಚಿಸಿತು. ನಂತರ ಆ ಬಾಲಕ 5 ನಿಮಿಷಗಳ ಕಾಲ ಫ್ರಂಟ್ ಅಂಡ್ ಬ್ಯಾಕ್ ಪಲ್ಟಿ ಹೊಡೆಯುವ ಮೂಲಕ ಅಲ್ಲಿ ನೆರೆದಿದ್ದ ಅಪ್ಪು ಫ್ಯಾನ್ಸ್ ಗಮನ ಸೆಳೆದನು. 

ಇದನ್ನೂ ಓದಿ:Gandhada Gudi ಅಭಿಮಾನಿ ಕೈ ಮೇಲೆ ಅಪ್ಪು ಟ್ಯಾಟು: ಭಾವುಕರಾಗಿ ಅಪ್ಪಿಕೊಂಡ ಅಶ್ವಿನಿ ಪುನೀತ್

ಸ್ಕ್ರೀನ್ ಮೇಲೆ ಅಪ್ಪು ಕಂಡ ಕೂಡಲೇ ಕಣ್ಣೀರು ಹಾಕಿದ ಅಭಿಮಾನಿ: ಇನ್ನೂ ಸಿನಿಮಾ ಶುರುವಾದ ಕೂಡಲೇ ಮೊದಲಿಗೆ ಅಪ್ಪು ಅಭಿಮಾನಿಗಳು ವಿಶೇಷವಾಗಿ ಪೂಜೆ ಸಲ್ಲಿಸಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಬರಮಾಡಿಕೊಂಡರು. ನಂತರ ಬಾಸ್‌ಗೆ ಕಂಬಳಕಾಯಿಯಿಂದ ದೃಷ್ಟಿ ತೆಗೆಯುವ ಮೂಲಕ ಸಿನಿಮಾ ಶುರುವಾಗಲು ಅನುವು ಮಾಡಿಕೊಟ್ಟರು. ಇನ್ನೂ ಇದೆ ವೇಳೆ ಅಪ್ಪು ಅವರನ್ನು ಸ್ಕ್ರೀನ್ ಮೇಲೆ ಕಂಡ ಕೂಡಲೇ ಅಭಿಮಾನಿಯೋರ್ವ ಕಣ್ಣೀರು ಹಾಕುವ ಮೂಲಕ ಪುನೀತ್ ಅವರ ಅಗಲಿಕೆಯನ್ನು ನೆನಪು ಮಾಡಿಕೊಂಡರು. ನಮ್ಮ ಬಾಸ್ ಇನ್ನೂ ಸ್ವಲ್ಪ ವರ್ಷಗಳ ಕಾಲ ಇರಬೇಕಿತ್ತು ಎಂದು ಹೇಳುತ್ತಲೇ ಗಳಗಳಲೇ ಕಣ್ಣೀರು ಹಾಕಿದರು. ಒಟ್ಟಾರೆ ಸಿನಿಮಾ ವೀಕ್ಷಿಸಿ ಹೊರ ಬಂದ ಅಭಿಮಾನಿಗಳು ಅಪ್ಪು ಅಜರಾಮರ ಎಂದು ಭಾವುಕರಾಗಿದ್ದು ವಿಶೇಷ.