ದೊಡ್ಡಬಳ್ಳಾಪುರದ ಅನಾಥ ವೃದ್ಧ ದಂಪತಿ ಹೊಣೆ ಹೊತ್ತ ಕಿಚ್ಚ ಸುದೀಪ್!
ಸುದೀಪ್ ಚಾರಿಟಿಯಿಂದ ಮತ್ತೊಂದು ಮಾನವೀಯ ಕೆಲಸ. ಕೊನೆ ಕ್ಷಣದವರೆಗೂ ವೃದ್ಧ ದಂಪತಿಗೆ ಆಸರೆಯಾದ ಸುದೀಪ್...
ಕನ್ನಡ ಚಿತ್ರರಂಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಲವು ತಿಂಗಳಿನಿಂದ ತಮ್ಮ ಚಾರಿಟೆಬಲ್ ಸೊಸೈಟಿ ವತಿಯಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಅನೇಕರಿಗೆ ಆಸರೆ ಆಗಿದ್ದಾರೆ. ಈ ತಂಡದಿಂದ ಮತ್ತೊಂದು ಮಾನವೀಯ ಕಾರ್ಯ ಮಾಡಿದ್ದಾರೆ.
ದೊಡ್ಡಬಳ್ಳಾಪುರದದಲ್ಲಿ ವಾಸಿಸುತ್ತಿರುವ 70 ವರ್ಷದ ಕಮಲಮ್ಮಾ ಮತ್ತು 78 ವರ್ಷದ ಶ್ರೀನಿವಾಸ ಅವರಿಗೆ ಸುದೀಪ್ ತಂಡ ಆಸರೆಯಾಗಿದ್ದಾರೆ. ಈ ವೃದ್ಧ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬ ಮಗನಿಗೆ ಕಾಲಿಲ್ಲದ ಕಾರಣ ಪೋಷಕರನ್ನು ನೋಡಿಕೊಳ್ಳಲಾಗುತ್ತಿಲ್ಲ. ಮತ್ತೊಬ್ಬ ಮಗ ಮೈಸೂರಿನಲ್ಲಿ ನೆಲೆಸಿದ್ದು, ಅಮ್ಮ ಅಪ್ಪ ನನ್ನ ಪಾಲಿಗೆ ಇಲ್ಲ ಎಂದು ಹೇಳಿ ಹೋಗಿದ್ದಾನೆ. ಮಕ್ಕಳಿದ್ದರೂ ಇಲ್ಲದಂತೆ ಬದುಕುತ್ತಿರುವ ಇವರಿಗೆ ಸುದೀಪ್ ತಂಡ ಸಹಾಯ ಮಾಡಿದೆ.
ಮಕ್ಕಳ ಆರೋಗ್ಯದ ಕಾಳಜಿ ಜೊತೆಗೆ ಕಂಡೀಷನ್ ಹಾಕಿದ ನಟ ಕಿಚ್ಚ ಸುದೀಪ್!
ಬೆಂಗಳೂರಿನಲ್ಲಿ ಇದ್ದ ಆಸ್ತಿಯನ್ನೆಲ್ಲಾ ಮಾರಿ ದೊಡ್ಡಬಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿರೋ ವೃದ್ಧ ದಂಪತಿ ವಿಚಾರ ತಿಳಿದ ತಕ್ಷಣ ಚಾರಿಟಬಲ್ ಸೊಸೈಟಿ ಸದಸ್ಯರನ್ನು ಸುದೀಪ್ ಕಳುಹಿಸಿಕೊಟ್ಟಿದ್ದಾರೆ. ಕೊನೆಯ ಕ್ಷಣದವರೆಗೂ ಇಬ್ಬರ ಊಟ ಮತ್ತು ಆರೋಗ್ಯದ ಸಂಪೂರ್ಣ ಜವಾಬ್ದಾರಿಯನ್ನು ಸುದೀಪ್ ಚಾರಿಟೆಬಲ್ ಸೊಸೈಟಿ ವಹಿಸಿಕೊಂಡಿದೆ. ಸದ್ಯ ಕಮಲಮ್ಮ ಮಂಡಿ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ನಡೆಯುತ್ತಿದೆ.