ಸಿಂಧನೂರಿನ ಭಾರತ ಗ್ಯಾಸ್‌ ಏಜೇನ್ಸಿಯವರು ಹಟ್ಟಿ ಪಟ್ಟಣದಲ್ಲಿ ಅನಧಿಕೃತವಾಗಿ ಸಿಲಿಂಡರ್ ಮಾರಾಟ ಮಾಡುತ್ತಿದೆ| ಪ್ರತಿ ಫಲನುಭವಿಗಳಿಂದ 1750 ರು.ನಿಂದ 2100 ರವರೆಗೆ ಹೆಚ್ಚುವರಿ ಹಣ ಪಡೆದು ಯಾವುದೇ ಅಧಿಕೃತ ರಸೀದಿ ನೀಡದೆ ಯೊಜನೆಯ ಫಲಾನುಭವಿಗಳಿಗೆ ವಿತರಣೆ| ಅಧಿಕೃತವಾಗಿ ನಾಮಫಲಕ ಹಾಕದೆ ರಾತ್ರೋ-ರಾತ್ರಿ ಮಾರಾಟ ಮಾಡುತ್ತಿರುವ ಮಧ್ಯವರ್ತಿ| ವಿತರಕರಿಗೆ ಒಂದು ರಿಫಿಲ್‌ ಸಿಲಿಂಡರಿಗೆ 75 ರಿಂದ ರೂ. 100 ಹೆಚ್ಚುವರಿ ಹಣ ಪಡೆದು ಸಿಲಿಂಡರ್‌ ವಿತರಣೆ| 

ಲಿಂಗಸುಗೂರು(ಅ.14): ಸಿಂಧನೂರಿನ ಭಾರತ ಗ್ಯಾಸ್‌ ಏಜೇನ್ಸಿಯವರು ಹಟ್ಟಿ ಪಟ್ಟಣದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವುದು ಅವ್ಯಾಹತವಾಗಿ ನಡೆದಿದೆ. ಸಿಂಧನೂರಿನ ಅಂಭಾದೇವಿ ಭಾರತ್‌ ಗ್ಯಾಸ್‌ ಗ್ರಾಮ ವಿತರಕರವರು ಹಟ್ಟಿಯಲ್ಲಿ ವಾಸ ಮಾಡುವ ಮಧ್ಯವರ್ತಿವೊಬ್ಬರ ಮೂಲಕ ಅಕ್ರಮವಾಗಿ ಗ್ಯಾಸ್‌ ಸಂಪರ್ಕವನ್ನು ಕಲ್ಪಿಸುತ್ತಿದ್ದಾರೆ.

ಪ್ರತಿ ಫಲನುಭವಿಗಳಿಂದ 1750 ರು.ನಿಂದ 2100 ರವರೆಗೆ ಹೆಚ್ಚುವರಿ ಹಣ ಪಡೆದು ಯಾವುದೇ ಅಧಿಕೃತ ರಸೀದಿ ನೀಡದೆ ಯೊಜನೆಯ ಫಲಾನುಭವಿಗಳಿಗೆ ವಿತರಣೆ ಮಾಡಿರುತ್ತಾರೆ. ಅಧಿಕೃತವಾಗಿ ನಾಮಫಲಕ ಹಾಕದೆ ರಾತ್ರೋ-ರಾತ್ರಿ ಮಾರಾಟ ಮಾಡುತ್ತಿರುವ ಮಧ್ಯವರ್ತಿಯು ವಿತರಕರಿಗೆ ಒಂದು ರಿಫಿಲ್‌ ಸಿಲಿಂಡರಿಗೆ 75 ರಿಂದ ರೂ. 100 ಹೆಚ್ಚುವರಿ ಹಣ ಪಡೆದು ಸಿಲಿಂಡರ್‌ ನೀಡುತ್ತಾನೆ. ಇದರ ಬಗ್ಗೆಯು ಆಹಾರ ನಿರಿಕ್ಷೕಕರಿಗೆ ದೂರವಾಣಿಯ ಮೂಲಕ ತಿಳಿಸಿದರು ಇಲ್ಲಿಯವರೆಗೆ ಯಾವುದೆ ಕ್ರಮವನ್ನು ಕೈಗೊಂಡಿರುವದಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಟ್ಟಿ-ರಾಯಚೂರು ಮುಖ್ಯ ರಸ್ತೆಯ ಖಾಸಗಿ ಮಳಿಗೆಯೊಂದರಲ್ಲಿ 150 ರಿಂದ 200 ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಮಳಿಗೆ ಹಿಂದುಗಡೆಯೆ ಜೆಸ್ಕಾಂನ ವಿದ್ಯುತ್‌ ಪರಿವರ್ತಕವನ್ನು ಹಾಗೂ ಏರಟೆಲ್‌ ಕಂಪನಿಯ ಟವರ್‌ ಅನ್ನು ಅಳವಡಿಸಲಾಗಿದ್ದು, ಏನಾದರು ಅವಘಡ ಸಂಭವಿಸಿದರೆ ಏನಾಗುತ್ತದೆ ಎಂದು ನಿವಾಸಿಗಳು ಭೀತಿಯಲ್ಲಿದ್ದಾರೆ. ಪ್ರತ್ಯೇಕ ಗೋದಾಮಿನಲ್ಲಾದರು ಸಂಗ್ರಹಿಸಿಡಬೇಕು. ಇಲ್ಲವಾದರೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಕ್ರಮ ಸಿಲಿಂಡರ್‌ ಮಾರಾಟ ಮಾಡುತ್ತಿರುವಾರಾದ ಶರಣಬಸವ ಅವರು, ನಾವು ಮಟ್ಕಾ, ಇಸ್ಪಿಟ್‌ ದಂಧೆ ನಡೆಸುತ್ತಿಲ್ಲ. ಹೊಟ್ಟೆ ಬದುಕಲು ಸಿಲಿಂಡರ್‌ ಮಾರಾಟ ಮಾಡುತ್ತೇವೆ. ನಮ್ಮ ಹತ್ತಿರ ಯಾವ ಅಧಿಕಾರಿಗಳು ಬಂದು ದಾಳಿ ಮಾಡುವದಿಲ್ಲ. ನೀವು ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಅಂಬಾದೇವಿ ಸಿಲಿಂಡರ್‌ ಏಜೇನ್ಸಿ ಹಟ್ಟಿಯಲ್ಲಿಲ್ಲ, ಅದು ಸಿಂಧನೂರಿನಲ್ಲಿದೆ. ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವ ಕುರಿತು ನೀವು ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬೇಕು ಎಂದು ಧಾರವಾಡದ ಭಾರತ ಗ್ಯಾಸ್‌ ಮುಖ್ಯಸ್ಥೆ ಶಿಲ್ಪಾ ಅವರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಲಿಂಗಸ್ಗೂರು ತಹಸೀಲ್ದಾರ ಚಾಮರಾಜ ಪಾಟೀಲ್‌ ಅವರು, ಅಕ್ರಮ ಗ್ರಾಸ್‌ ಮಾರಾಟ ಮಾಡುತ್ತಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ತಕ್ಷಣವೆ ಆಹಾರ ನಿರೀಕ್ಷಕರಿಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ. 

ಹಟ್ಟಿಯಲ್ಲಿ ಅಕ್ರಮವಾಗಿ ನಡೆಸುತ್ತಿರುವ ಗ್ಯಾಸ್‌ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳಲು ನನಗೆ ತಹಶೀಲ್ದಾರರು ಸೂಚಿಸಿಲ್ಲ. ಸೂಚಿಸಿದರೆ ನೋಡುತ್ತೇನೆ. ನಮ್ಮ ಇಲಾಖೆಗೆ ಯಾವುದೇ ದೂರು ಬಂದಿಲ್ಲ ಒಂದು ವೇಳೆ ದೂರು ಬಂದರೆ ಪರಿಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆಹಾರ ನಿರೀಕ್ಷಕ ತಿಪ್ಪಣ್ಣ ಅವರು ಹೇಳಿದ್ದಾರೆ.