ತಳಮಟ್ಟದ ಕಾರ್ಯಕರ್ತರಿಗೆ ಮನ್ನಣೆ ನೀಡುವುದು ಹೇಗೆಂದು ಆರ್‌ಎಸ್‌ಎಸ್-ಬಿಜೆಪಿ ಅನ್ನು ನೋಡಿ ಕಲಿಯಬೇಕು ಎಂದು ಗಾಂಧಿಗಳತ್ತ ಚಾಟಿ ಬೀಸಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನದ ವೇಳೆ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರು.

ನವದೆಹಲಿ: ತಳಮಟ್ಟದ ಕಾರ್ಯಕರ್ತರಿಗೆ ಮನ್ನಣೆ ನೀಡುವುದು ಹೇಗೆಂದು ಆರ್‌ಎಸ್‌ಎಸ್-ಬಿಜೆಪಿ ಅನ್ನು ನೋಡಿ ಕಲಿಯಬೇಕು ಎಂದು ಗಾಂಧಿಗಳತ್ತ ಚಾಟಿ ಬೀಸಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್ ಅವರು ಕಾಂಗ್ರೆಸ್ ಸಂಸ್ಥಾಪನಾ ದಿನದ ವೇಳೆ, ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರು.

Add Asianetnews Kannada as a Preferred SourcegooglePreferred

ರಾಹುಲ್ ಗಾಂಧಿ ಅವರು ದಿಗ್ವಿಜಯ ಜತೆ ಕೈಕುಲುಕುತ್ತಾ ತಮಾಷೆ

ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ದಿಗ್ವಿಜಯ ಜತೆ ಕೈಕುಲುಕುತ್ತಾ ತಮಾಷೆಯಾಗಿ, ‘ನೀವು ನಿನ್ನೆ ಅನುಚಿತವಾಗಿ ವರ್ತಿಸಿದ್ದೀರಿ!’ ಎಂದು ಹೇಳಿದಾಗ, ಸೋನಿಯಾ ಗಾಂಧಿ ಸೇರಿದಂತೆ ಸುತ್ತಲೂ ನಿಂತಿದ್ದ ನಾಯಕರು ನಗೆಗಡಲಲ್ಲಿ ತೇಲಿದರು.

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ನಂತರ, ಪಕ್ಷದ ಪ್ರಧಾನ ಕಚೇರಿಯಲ್ಲಿ ನಾಯಕರಿಗೆ ಚಹಾ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಈ ಸಮಯದಲ್ಲಿ ತಮಾಷೆಯಾಗೇ ರಾಹುಲ್‌-ದಿಗ್ವಿ ಮಾತನಾಡಿದ್ದು ವಿಶೇಷವಾಗಿತ್ತು.

ಗೋಡ್ಸೆ ಬೆಂಬಲಿಗರಿಂದ ಕಲಿಯಬೇಕಿಲ್ಲ : ದಿಗ್ವಿ ಯು-ಟರ್ನ್‌

ನವದೆಹಲಿ: ಆರೆಸ್ಸೆಸ್‌ ಹಾಗೂ ಬಿಜೆಪಿ ಬಗ್ಗೆ ಶನಿವಾರ ಹೊಗಳಿದ್ದ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ ಸಿಂಗ್‌ ಭಾನುವಾರ ಯು-ಟರ್ನ್‌ ಹೊಡೆದಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾಥುರಾಮ್ ಗೋಡ್ಸೆಯಂತಹ ಹಂತಕರಿಂದ ಕಾಂಗ್ರೆಸ್ ಏನನ್ನೂ ಕಲಿಯಬೇಕಾಗಿಲ್ಲ’ ಎಂದು ಹೇಳಿದರು. ಆದಾಗ್ಯೂ, ಪ್ರತಿಯೊಂದು ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದರು.

‘ನಾನು ಏನು ಹೇಳಬೇಕೆಂದಿದ್ದೆನೋ ಅದನ್ನು ನಾನು ಈಗಾಗಲೇ ಹೇಳಿದ್ದೇನೆ. ದಯವಿಟ್ಟು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ನಾನು 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಮತ್ತು ನಾನು ಈ ಕೋಮುವಾದಿ ಶಕ್ತಿಗಳ ವಿರುದ್ಧ ವಿಧಾನಸಭೆ, ಸಂಸತ್ತು ಮತ್ತು ಸಂಘಟನೆಯಲ್ಲಿ ಹೋರಾಡಿದ್ದೇನೆ. ನಾನು ಯಾವಾಗಲೂ ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತ ವಿರೋಧಿಸುತ್ತೇನೆ ಮತ್ತು ನಾನು ಅವರ ವಿರುದ್ಧ ಹೋರಾಡುತ್ತಲೇ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.