Asianet Suvarna News Asianet Suvarna News

ಅಪ್ಪಟ ಹಿಂದು ಎನ್ನುವ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಆರ್ಭಟಿಸಿದ್ದೇಕೆ: ಕೋಟ

ಮಾಜಿ ಸಿಎಂ ಸಿದ್ದರಾಮಯ್ಯ ತಾವು ಅಪ್ಪಟ ಹಿಂದೂ ಅಂತ ಕರೆದುಕೊಳ್ತಾರೆ. ಮತಾಂತರ ಕಾಯಿದೆ ಜಾರಿಗೆ ತಂದಾಗ ಏಕೆ ವಿರೋಧ ಮಾಡಿದ್ದೀರಿ ಎನ್ನುವುದನ್ನು ಸ್ಪಷ್ಟಪಡಿಸಿ, ಗೋ ಹತ್ಯೆ ನಿಷೇಧ ಕಾಯಿದೆ ತಂದಾಗ ಏಕೆ ಆರ್ಭಟ ಮಾಡಿದ್ದೀರಿ ಎನ್ನುವುದನ್ನು ಹೇಳಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲೆಸೆದರು.

Why did Siddaramaiah protest when the Cow Slaughter Prohibition Act Kota question rav
Author
First Published Jan 27, 2023, 7:55 AM IST

ಕಾರವಾರ (ಜ.27) : ಮಾಜಿ ಸಿಎಂ ಸಿದ್ದರಾಮಯ್ಯ ತಾವು ಅಪ್ಪಟ ಹಿಂದೂ ಅಂತ ಕರೆದುಕೊಳ್ತಾರೆ. ಮತಾಂತರ ಕಾಯಿದೆ ಜಾರಿಗೆ ತಂದಾಗ ಏಕೆ ವಿರೋಧ ಮಾಡಿದ್ದೀರಿ ಎನ್ನುವುದನ್ನು ಸ್ಪಷ್ಟಪಡಿಸಿ, ಗೋ ಹತ್ಯೆ ನಿಷೇಧ ಕಾಯಿದೆ ತಂದಾಗ ಏಕೆ ಆರ್ಭಟ ಮಾಡಿದ್ದೀರಿ ಎನ್ನುವುದನ್ನು ಹೇಳಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸವಾಲೆಸೆದರು.

ವಿದ್ಯುತ್‌, ಪರಿಹಾರದ ಬಗ್ಗೆ ಕಾಂಗ್ರೆಸ್‌ ಹೇಳಿದ ಸುಳ್ಳು ಘೋಷಣೆಗಳನ್ನು ಜನರು ನಂಬುವುದಿಲ್ಲ. ರಾಜಸ್ಥಾನದಲ್ಲಿ ರಾಹುಲ್‌ ಗಾಂಧಿ ಅಧಿಕಾರಕ್ಕೆ ಬಂದು 10 ದಿನದಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅದು ಆಗಿದೆಯೇ? ಬಿಜೆಪಿಗೆ ಜನರು ಬಹುಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ಸಂದರ್ಭದಲ್ಲಿ .3ಸಾವಿರ ಕೋಟಿ ಹಗರಣ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ ಎನ್ನುವ ಪ್ರಶ್ನೆಗೆ, ಸಿದ್ದರಾಮಯ್ಯ ಆರೋಪ ಮಾಡುವುದೇ ಜವಾಬ್ದಾರಿ ಎಂದುಕೊಂಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಟೀಕೆಗಳು ಹೆಚ್ಚು ಬರುತ್ತದೆ. ಸಚಿವ ಡಾ. ಸುಧಾಕರ ಅಲ್ಲಗಳೆದಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಕಿವಿಹಿಂಡುವ ಮಾತು ಹೇಳಿದರೆ ಆರೋಗ್ಯಕರ ವಾತಾವಣವಾಗುತ್ತದೆ ಎಂದರು.

ಮತ್ತೊಂದು ಹಂತದಲ್ಲಿ ಖುಲಾಸೆ ಆಗಲಿದೆ:

ಪರೇಶ ಮೇಸ್ತ ಪ್ರಕರಣದ ಕುರಿತು ಪ್ರಶ್ನಿಸಿದಾಗ, ಆರೋಪಿತರ ಮೇಲೆ ಪ್ರಕರಣ ದಾಖಲಾದಾಗ ಹಿಂಪಡೆಯಲು ಪೊಲೀಸ್‌ ಇಲಾಖೆ ವರದಿ ನೀಡುತ್ತದೆ. ಈಗಾಗಲೇ ಒಂದು ಹಂತದ ಪ್ರಕರಣ ಖುಲಾಸೆಯಾಗಿದ್ದು, ಮತ್ತೊಂದು ಹಂತದಲ್ಲೂ ಆಗುತ್ತದೆ. ಕುಮಟಾ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಶಾಸಕರು ಮುಖ್ಯಮಂತ್ರಿ, ಗೃಹಸಚಿವರ ಬಳಿ ಮಾತನಾಡಿದ್ದಾರೆ. ವರದಿ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

ಎಂ-ಸ್ಯಾಂಡ್‌ ಉತ್ಪಾದನೆಗೆ ಉತ್ತೇಜನ ಅಗತ್ಯ

ಪ್ರಸ್ತುತ ಜಿಲ್ಲೆಯಲ್ಲಿ ಎಂ-ಸ್ಯಾಂಡ್‌ ಉತ್ಪಾದನೆ ಕಡಿಮೆ ಇದ್ದು ಕ್ರಷರ್‌ ಘಟಕಗಳಿಂದ ಎಂ-ಸ್ಯಾಂಡ್‌ ಉತ್ಪಾದನೆಗೆ ಉತ್ತೇಜನ ನೀಡಿ ಮರಳಿನ ಪೂರೈಕೆ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಸಾರ್ವಜನಿಕ ಮತ್ತು ಸರ್ಕಾರಿ ಕಾಮಗಾರಿಗಳಿಗೆ ನದಿ ಮರಳಿಗೆ ಪರ್ಯಾಯವಾಗಿ ಎಂ-ಸ್ಯಾಂಡ್‌ ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿದರು.

ಹಸಿರು ಪೀಠದ ಆದೇಶದಂತೆ ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್‌) ಮರಳು ದಿಬ್ಬ ತೆರವುಗೊಳಸುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮರಳನ್ನು ತೆರವುಗೊಳಿಸಲು ಅನುಮತಿಯ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಮರಳಿನ ಪೂರೈಕೆ ಇಲ್ಲದಿರುವುದರಿಂದ ಹೊಸ ಮರಳು ನೀತಿ-2020ರಲ್ಲಿ ನೀಡಿರುವ ಅವಕಾಶಗಳ ಅನುಸಾರ ಸಾರ್ವಜನಿಕ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಮರಳು ಒದಗಿಸುವ ದೃಷ್ಟಿಯಿಂದ ಅಣೆಕಟ್ಟು, ಜಲಾಶಯ, ಹಿನ್ನೀರಿನ ನದಿ ಪಾತ್ರದ ಪ್ರದೇಶಗಳಲ್ಲಿರುವ ಹೂಳಿನಲ್ಲಿ ದೊರೆಯಬಹುದಾದ ಮರಳನ್ನು ತೆರವುಗೊಳಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಜಲಾಶಯಗಳಲ್ಲಿ ಶೇಖರಣೆಯಾಗಿರುವ ಮರಳು ಪ್ರಮಾಣದ ಮಾಹಿತಿಯನ್ನು ಕೆಪಿಸಿ ಇಲಾಖೆ ತುರ್ತಾಗಿ ಪಡೆದು ಜಿಲ್ಲಾಡಳಿತಕ್ಕೆ ಒದಗಿಸಬೇಕು. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ಕೈಗೊಂಡು ಹೂಳು ತೆರವುಗೊಳಿಸುವ ಸಾಧಕ-ಬಾಧಕಗಳ ಕುರಿತು ಪರಿಶೀಲನೆ ನಡೆಸಿ ತುರ್ತಾಗಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಯಾವ ಮುಖವಿಟ್ಟುಕೊಂಡು ಮೋದಿ ಬರ್ತಿದ್ದಾರೆ ಎಂಬ ಸಿದ್ದು ಟ್ವೀಟ್‌ಗೆ ಪೂಜಾರಿ ಗುದ್ದು

ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿ ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕಿನ 1, 2 ಮತ್ತು 3ನೇ ಶ್ರೇಣಿಯಲ್ಲಿನ ಕೆರೆ, ಹಳ್ಳ, ಕೊಳ್ಳಗಳಲ್ಲಿ ದೊರೆಯಬಹುದಾದ ಮರಳು ನಿಕ್ಷೇಪಗಳನ್ನು ಗುರುತಿಸಲು ಸಂಬಂಧಿಸಿದ ಪಂಚಾಯಿತಿಯ ಕಾರ್ಯ ನಿರ್ವಹಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗ್ರಾಪಂ ವ್ಯಾಪ್ತಿಯಲ್ಲಿ ದೊರೆಯಬಹುದಾದ ಮರಳು ನಿಕ್ಷೇಪಗಳ ಬಗ್ಗೆ ಪಿಡಿಒಗಳಿಂದ ಮಾಹಿತಿ ಪಡೆದು ಮರಳು ಬ್ಲಾಕ್‌ಗಳನ್ನು ಗುರುತಿಸಿ ವಿಲೇವಾರಿಗೆ ಕ್ರಮ ವಹಿಸುವಂತೆ ಹಾಗೂ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ತಾಲೂಕಿನ 4, 5 ಮತ್ತು 6ನೇ ಶ್ರೇಣಿಯಲ್ಲಿನ ನದಿ ಪಾತ್ರದಲ್ಲಿ ದೊರೆಯಬಹುದಾದ ಮರಳು ನಿಕ್ಷೇಪಗಳನ್ನು ಗುರುತಿಸಿ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಹೇಳಿದರು

Follow Us:
Download App:
  • android
  • ios