ದಲಿತರು ಸಿಎಂ ಯಾಕಾಗಬಾರದು: ಡಿ.ಕೆ.ಶಿವಕುಮಾರ್ ಪ್ರಶ್ನೆ
ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಆಗಲು ಅವಕಾಶವಿದೆ. ಅವರಿಗೆ ಅರ್ಹತೆ, ಹಿರಿತನ ಎರಡೂ ಇದೆ. ಪಕ್ಷಕ್ಕೆ ಶ್ರಮಿಸಿದ್ದಾರೆ. ಹೀಗಾಗಿ ದಲಿತರು ಯಾಕಾಗಬಾರದು?: ಡಿಕೆಶಿ
ಬೆಂಗಳೂರು(ಡಿ.10): ‘ಕಾಂಗ್ರೆಸ್ ಪಕ್ಷ ನಮ್ಮ ಮನೆ ಆಸ್ತಿಯಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಹೀಗಾಗಿ ದಲಿತರು ಮುಖ್ಯಮಂತ್ರಿ ಯಾಕಾಗಬಾರದು? ದಲಿತರಲ್ಲಿ ಹಿಂದುಳಿದವರಿಲ್ಲವೇ ಅಥವಾ ಹಿರಿಯ ನಾಯಕರಿಲ್ಲವೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ತನ್ಮೂಲಕ ದಲಿತ ಮುಖ್ಯಮಂತ್ರಿ ಕೂಗನ್ನು ಸಮರ್ಥಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿತ್ರದುರ್ಗದಲ್ಲಿ ಕಾಂಗ್ರೆಸ್ ದಲಿತ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದ್ದು, ದಲಿತ ಮುಖ್ಯಮಂತ್ರಿ ಕುರಿತೂ ಚರ್ಚೆಯಾಗುತ್ತಿದೆ’ ಎಂದು ಪ್ರತಿಕ್ರಿಯೆ ನೀಡಿದರು.
‘ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ನಾನು ಬೇರೆಯವರಂತೆ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇವೆ, ದಲಿತರನ್ನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಆಗಲು ಅವಕಾಶವಿದೆ. ಅವರಿಗೆ ಅರ್ಹತೆ, ಹಿರಿತನ ಎರಡೂ ಇದೆ. ಪಕ್ಷಕ್ಕೆ ಶ್ರಮಿಸಿದ್ದಾರೆ. ಹೀಗಾಗಿ ದಲಿತರು ಯಾಕಾಗಬಾರದು?’ ಎಂದು ಮರು ಪ್ರಶ್ನೆ ಮಾಡಿದರು.
ದಲಿತರನ್ನು ಸಿಎಂ ಮಾಡಲು ಕಾಂಗ್ರೆಸ್ಗೆ ಮಾತ್ರ ಸಾಧ್ಯ: ಸಂಸದ ಸುರೇಶ್
ಕಾಂಗ್ರೆಸ್ ಪಕ್ಷ ನಮ್ಮ ಮನೆ ಆಸ್ತಿ ಅಲ್ಲ. ಇದು ಎಲ್ಲ ವರ್ಗದವರಿಗೂ ಸೇರಿರುವ ಪಕ್ಷ. ಇದೇ ನಮ್ಮ ಪಕ್ಷದ ಶಕ್ತಿ. ಎಂ.ವೀರಪ್ಪ ಮೋಯ್ಲಿ, ಧರಂಸಿಂಗ್, ಬಂಗಾರಪ್ಪನವರ ಸಮಾಜ ಎಷ್ಟುಸಂಖ್ಯೆಯಲ್ಲಿತ್ತು? ಹಿಂದುಳಿದ ವರ್ಗದ ಸಮುದಾಯದವರು ಕಾಂಗ್ರೆಸ್ನಿಂದ ಮುಖ್ಯಮಂತ್ರಿಗಳಾಗಿಲ್ಲವೇ? ಗುಂಡೂರಾವ್ ಅವರು ಆಗಿಲ್ಲವೇ? ಹೀಗಾಗಿ ಕಾಂಗ್ರೆಸ್ನಲ್ಲಿ ಎಲ್ಲರಿಗೂ ಅವಕಾಶಗಳಿವೆ ಎಂದರು.
ನಮ್ಮಲ್ಲಿ ಅನೇಕರು ಸಮರ್ಥರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರು ನಮ್ಮ ಪಕ್ಷವನ್ನ ಕಷ್ಟದ ಸಮಯದಲ್ಲಿ ಮುನ್ನಡೆಸಿದ್ದಾರೆ. ಖರ್ಗೆ ಅವರು ದಲಿತರು ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆತಿಲ್ಲ. ಅತ್ಯಂತ ಹಿರಿಯ ಹಾಗೂ ಅನುಭವಿ ನಾಯಕರು ಎಂಬ ಕಾರಣಕ್ಕೆ ಅರ್ಹತೆಗೆ ತಕ್ಕ ಹುದ್ದೆ ದೊರೆತಿದೆ. 371ಜೆ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾಂದಿ ಹಾಡಿದ್ದು ಖರ್ಗೆ ಅವರ ಸಾಧನೆಗೆ ಸಾಕ್ಷಿ. ಅವರ ಕೆಲಸಗಳು ಕೇವಲ ದಲಿತರಿಗೆ ನೆರವಾಗುವುದಿಲ್ಲ ಎಂದು ಹೇಳಿದರು.