ಕರ್ನಾಟಕದಿಂದ ಯಾರಿಗೆ ಕೇಂದ್ರ ಸಚಿವ ಸ್ಥಾನದ ಭಾಗ್ಯ?
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ
- ಕರ್ನಾಟಕದಿಂದ ಈ ಬಾರಿ ಯಾರಿಗೆ ಅವಕಾಶ ಲಭಿಸಲಿದೆ ಎಂಬ ಕುತೂಹಲ
- ಇನ್ನೂ ಒಬ್ಬರು ಅಥವಾ ಇಬ್ಬರಿಗೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆ
ಬೆಂಗಳೂರು(ಜು.03): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಕರ್ನಾಟಕದಿಂದ ಈ ಬಾರಿ ಯಾರಿಗೆ ಅವಕಾಶ ಲಭಿಸಲಿದೆ ಎಂಬ ಕುತೂಹಲ ಗರಿಗೆದರಿದೆ.
ಸದ್ಯ ರಾಜ್ಯವನ್ನು ಪ್ರಹ್ಲಾದ್ ಜೋಶಿ ಮತ್ತು ಡಿ.ವಿ.ಸದಾನಂದಗೌಡರು ಪ್ರತಿನಿಧಿಸುತ್ತಿದ್ದು, ಇನ್ನೂ ಒಬ್ಬರು ಅಥವಾ ಇಬ್ಬರಿಗೆ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ.
ಜು.7ರೊಳಗೆ ಪ್ರಧಾನಿ ಮೋದಿ ಸಂಪುಟ ವಿಸ್ತರಣೆ..? ...
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನವಾಗಿ ಒಂದು ವರ್ಷ ಕಳೆದಿದ್ದು, ಇದುವರೆಗೆ ಆ ಸ್ಥಾನವನ್ನು ಯಾರಿಗೂ ನೀಡಿಲ್ಲ. ಮೇಲಾಗಿ ರಾಜ್ಯದಿಂದ ಅತಿಹೆಚ್ಚು ಎಂಬಂತೆ 25 ಸಂಸದರು ಬಿಜೆಪಿಯಿಂದ ಚುನಾಯಿತರಾಗಿದ್ದಾರೆ. ಆ ಲೆಕ್ಕದಲ್ಲಿ ಈಗಿರುವ ಇಬ್ಬರನ್ನು ಹೊರತುಪಡಿಸಿ ಇನ್ನೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರಲ್ಲಿ ನ್ಯಾಯವಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ.
ಜತೆಗೆ ಸಂಪುಟ ವಿಸ್ತರಣೆ ವೇಳೆ ಜಾತಿಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಇನ್ನೂ ಸ್ಪಷ್ಟಮಾಹಿತಿ ಹೊರಬಿದ್ದಿಲ್ಲ. ಸುರೇಶ್ ಅಂಗಡಿ ಅವರಿಂದ ತೆರವಾದ ಸ್ಥಾನಕ್ಕೆ ಲಿಂಗಾಯತ ಸಮುದಾಯದವರನ್ನೇ ಪರಿಗಣಿಸಬೇಕು ಎಂಬ ಬೇಡಿಕೆಯಿದೆ. ಅತಿಹೆಚ್ಚು ಲಿಂಗಾಯತ ಸಂಸದರೂ ಆಯ್ಕೆಯಾಗಿದ್ದಾರೆ. ಹೀಗಾಗಿ, ಲಿಂಗಾಯತ ಸಮುದಾಯಕ್ಕೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಪಕ್ಷದಲ್ಲಿ ಮೂಡಿದೆ.
ಜುಲೈ 19 ರಿಂದ ಆರಂಭಗೊಳ್ಳಲಿದೆ ಸಂಸತ್ ಮುಂಗಾರು ಅಧಿವೇಶನ! ...
ಆದರೆ, ಇದುವರೆಗಿನ ಹಲವು ಪ್ರಮುಖ ತೀರ್ಮಾನಗಳನ್ನು ಪರಿಶೀಲಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಿರೀಕ್ಷೆ ಅಥವಾ ಲೆಕ್ಕಾಚಾರವನ್ನು ಹುಸಿಗೊಳಿಸಿದ್ದು ಕಂಡು ಬಂದಿದೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲೂ ಇದೇ ಪುನರಾವರ್ತನೆಯಾಗಲಿದೆಯೇ ಎಂಬುದು ಕುತೂಹಲಕರವಾಗಿದೆ.