ಮೈಸೂರು ಟಿಕೆಟ್ ಯದುವೀರ್ಗೆ: ಪ್ರತಾಪ್ ಸಿಂಹ ಹೇಳುವುದೇನು?
2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಮಹಾರಾಜ ಯದುವೀರ್ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಬಿಜೆಪಿಯಿಂದಲೇ ಮಹಾರಾಜರು ಸ್ಪರ್ಧಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಈಗಿನ ಸಂಸದರಾದ ಪ್ರತಾಪ್ ಸಿಂಹ ಹೇಳುವುದೇನು?
ಮೈಸೂರು: ಮುಂದಿನ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಟಿಕೆಟನ್ನು ಮೈಸೂರು ಮಹಾರಾಜ ಯದುವೀರ್ ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿಯನ್ನು ಸಂಸದ ಪ್ರತಾಪ್ ಸಿಂಹ ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಕೆಲವು ವೆಬ್ಸೈಟ್ ಹಾಗೂ ಇತರೆ ಮಾಧ್ಯಮಗಲ್ಲಿ ಪ್ರಕಟವಾದ ಸುದ್ದಿಯನ್ನು ಖಂಡಿಸಿರುವ ಅವರು, 'ಮನಸ್ಸಲಿರುವ ಕಸವನ್ನು ವೆಬ್ಸೈಟ್ ಹಾಗೂ ಮಾಧ್ಯಮಗಳ ಮೂಲಕ ಹೊರ ಹಾಕಿದ್ದಾರೆ. ಮೈಸೂರು ಅಭಿವೃದ್ಧಿಗೆ ನಾನೂ ಸಾಕಷ್ಟು ಕೆಲಸ ಮಾಡಿದ್ದೇನೆ. 28 ಲೋಕ ಸಭ ಕ್ಷೇತ್ರಗಳಲ್ಲಿ ಆಗದ ಚರ್ಚೆ ಇಲ್ಲಿ ಯಾಕೆ ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ,' ಎಂದಿದ್ದಾರೆ.
'ಮೈಸೂರಿನ ಎಂಪಿಯಾಗಿದ್ದೇನೆ. ಮುಂದೆಯೂ ನಾನೇ ಎಂಪಿಯಾಗಿರುತ್ತೇನೆ. ಮೈಸೂರು ಕೊಡಗಿನ ಜನ ನನ್ನ ಜೊತೆ ಇರುವವರೆಗೆ ನನ್ನ ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರು ನನ್ನ ಜೊತೆ ಇದ್ದಾರೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಮಿಡ್ನೈಟ್ ಮ್ಯಾರಥಾನ್:
'ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದೆ. ಮಂಗಳವಾರ ಸಂಜೆ ಅರಮನೆ ಸುತ್ತ 8 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, 5 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಮೈಸೂರು ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ, ಎಂದು ಪ್ರತಾಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಬಳಿಕ ಮೋದಿ ಜೀವನ ಸಂದೇಶ ಸಾರುವ ಹಮ್ ಜೀತೆಯೇ ಚಿತ್ರ ಪ್ರಸಾರ ಮಾಡಲಾಗುವುದು. ನಂತರ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ರ್ಯಾಪ್ ಸ್ಟಾರ್ ಚಂದನ್ ಶೆಟ್ಟಿಯಿಂದ ಕಾರ್ಯಕ್ರಮ ಇರಲಿದೆ,' ಎಂದು ಹೇಳಿದ್ದಾರೆ.