‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಶಾಸಕರು ಹಾಗೂ ಜನರ ನಡುವೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಇದರ ನಿಯಂತ್ರಣಕ್ಕೂ ಕ್ರಮವಾಗಬೇಕು’ ಎಂದು ಬಿಜೆಪಿ ಸದಸ್ಯ ವಿ.ಸುನೀಲ್‌ ಕುಮಾರ್‌ ಆಗ್ರಹಿಸಿದರು.

ವಿಧಾನಸಭೆ (ಡಿ.10): ‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಶಾಸಕರು ಹಾಗೂ ಜನರ ನಡುವೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ. ಇದರ ನಿಯಂತ್ರಣಕ್ಕೂ ಕ್ರಮವಾಗಬೇಕು’ ಎಂದು ಬಿಜೆಪಿ ಸದಸ್ಯ ವಿ.ಸುನೀಲ್‌ ಕುಮಾರ್‌ ಆಗ್ರಹಿಸಿದರು. ವಿಧಾನಸಭೆಯಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಆನ್‌ಲೈನ್‌ ವಂಚನೆ ಕುರಿತ ಬಿಜೆಪಿಯ ಸಿಮೆಂಟ್‌ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘ಎಲ್ಲ ಕಡೆ ಬೆಟ್ಟಿಂಗ್‌ ಜೋರಾಗಿದೆ’ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿಯ ವಿ. ಸುನೀಲ್ ಕುಮಾರ್, ‘ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆಯೂ ಶಾಸಕರು, ಜನರ ನಡುವೆ ಬೆಟ್ಟಿಂಗ್ ಜೋರಾಗಿ ನಡೆದಿದ್ದು, ಇದರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ನಗುತ್ತಾ ಹೇಳಿದರು. ಈ ಸಂದರ್ಭದಲ್ಲಿ ಸದನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ಆದರೆ ನಸುನಕ್ಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುನೀಲ್ ಕುಮಾರ್ ಅವರ ಕಡೆ ಕೈ ತೋರಿಸಿ ಹುಸಿ ಕೋಪ ತೋರಿಸಿ ನಕ್ಕರು.

ಚನ್ನರಾಜ ಹಟ್ಟಿಕೊಳ್ಳಿ ಟ್ವೀಟ್‌ ಪ್ರಸ್ತಾಪ: ಇದಕ್ಕೂ ಮೊದಲು ಬಿಜೆಪಿಯ ಅರವಿಂದ ಬೆಲ್ಲದ್ ಅವರು, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಂದು ಟ್ವೀಟ್‌ ಮಾಡಿದ್ದಾರೆ. ಅಸಲಿಗೆ ಮುಖ್ಯಮಂತ್ರಿ ಯಾರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್‌ ಯು.ಟಿ. ಖಾದರ್, ನಿಮಗೆ ಉತ್ತರ ಕರ್ನಾಟಕ ಕುರಿತು ಚರ್ಚೆ ಆಗಬೇಕಾ? ಬೇಡವಾ ಎಂದು ಪ್ರಶ್ನಿಸಿ ಬೆಲ್ಲದ್ ಮಾತಿಗೆ ತೆರೆ ಎಳೆದರು.

ಪ್ರಶ್ನೋತ್ತರ ಬದಿಗೊತ್ತಿ ಉ.ಕ. ಚರ್ಚೆಗೆ ಸ್ಪೀಕರ್‌ ನಿರಾಕರಣೆ

ವಿಧಾನಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ಬದಿಗೊತ್ತಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದ ಘಟನೆ ಮಂಗಳವಾರ ವಿಧಾನಸಭೆಯಲ್ಲಿ ನಡೆಯಿತು. ಕಲಾಪ ಸಲಹಾ ಸಮಿತಿ ನಿರ್ಧಾರದಂತೆ ಮಂಗಳವಾರದಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ನೀಡುವುದಾಗಿ ಸ್ಪೀಕರ್‌ ಅವರು ಪ್ರಕಟಿಸಿದ್ದರು. ಕಲಾಪ ಶುರುವಾಗುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಮೊದಲು ಉ-ಕ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.

ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಸರ್ಕಾರವೇ ಉ-ಕ ಸಮಸ್ಯೆಗಳ ಚರ್ಚೆಗೆ ಪ್ರಸ್ತಾಪ ಮಾಡಿದೆ. ಇದನ್ನು ಕಲಾಪ ಸಲಹಾ ಸಮಿತಿ ಸಭೆಯಲ್ಲೂ ನಿರ್ಧರಿಸಲಾಗಿದೆ. ಈಗ ಪ್ರಶ್ನೋತ್ತರ ಬದಿಗೊತ್ತಿ ಉ-ಕ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಿ ಎಂದು ಕೇಳುತ್ತಿರುವುದು ಏಕೆ?. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಸರ್ಕಾರ ಈ ಬಗ್ಗೆ ಚರ್ಚೆಗೆ ಸಿದ್ಧವಿದೆ ಎಂದರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ತಕ್ಷಣವೇ ಉ.ಕ. ಸಮಸ್ಯೆಗಳ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಕೆ.ಪಾಟೀಲ್‌ ಅವರು, ಪ್ರಶ್ನೋತ್ತರ ಬದಿಗೊತ್ತಿ ಉ-ಕ ಚರ್ಚೆ ಕೈಗೆತ್ತಿಕೊಳ್ಳಲು ಸರ್ಕಾರದ ಸಹಮತಿ ಇದೆ. ಅಂತಿಮ ನಿರ್ಧಾರ ಸ್ಪೀಕರ್‌ಗೆ ಬಿಟ್ಟದ್ದು ಎಂದರು. ಈ ವೇಳೆ, ಸ್ಪೀಕರ್‌ ಖಾದರ್‌ ಅವರು, ಪ್ರಶ್ನೋತ್ತರ ಅವಧಿ ಮುಗಿದ ಬಳಿಕವೇ ಉ-ಕ ಚರ್ಚೆ ನಡೆಸುವುದಾಗಿ ರೂಲಿಂಗ್ ನೀಡಿದರು.