ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುವಲ್ಲಿ ನೂರಕ್ಕೆ ನೂರರಷ್ಟು ವಿಫಲವಾಗಿದೆ. ಗ್ರೇಸ್ ಮಾರ್ಕ್ಸ್ ನೀಡಿದರೂ ಕಾಂಗ್ರೆಸ್ ಪಾಸಾಗಲ್ಲ ಎಂದು ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶೇಶ್ವರ ಹೆಗ್ಡೆ ಕಾಗೇರಿ ಲೇವಡಿ ಮಾಡಿದರು. 

ಚನ್ನಮ್ಮನ ಕಿತ್ತೂರು (ಮೇ.21): ಬರಗಾಲದ ಅರಿವು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಇಲ್ಲಿಯವರೆಗೂ ಸುಸೂತ್ರವಾಗಿ ಒಂದು ಗ್ಯಾರಂಟಿ ಅನುಷ್ಠಾನಗೊಂಡಿಲ್ಲ. ಈ ಸರ್ಕಾರದಲ್ಲಿ ಯಾರೊಬ್ಬರ ಜೀವಕ್ಕೂ ಗ್ಯಾರಂಟಿ ಇಲ್ಲ. ಈ ರಾಜ್ಯ ಸರ್ಕಾರಕ್ಕೆ ಗ್ರೇಸ್ ಮಾರ್ಕ್ಸ್‌ ನೀಡಿದರೂ ಕಾಂಗ್ರೆಸ್ ಸರ್ಕಾರ ಪಾಸಾಗಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮ ಮಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಗೃಹ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುವಲ್ಲಿ ನೂರಕ್ಕೆ ನೂರರಷ್ಟು ವಿಫಲ. ನೇಹಾ, ಅಂಜಲಿ ಹತ್ಯೆ ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಹಾಗೂ ಅಪರಾಧಗಳು ಕಾನೂನು ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ ಎಂದರು.ಅಪರಾಧ ಕೃತ್ಯಗಳನ್ನು ಎಸಗುವವರಿಗೆ ಅಧಿಕಾರಕ್ಕೆ ನಮ್ಮ ಸರ್ಕಾರ ಬಂದಿದೆಂಬ ಮನೋಭಾವನೆ ಮೂಡುತ್ತಿದೆ. ಇದಕ್ಕೆ ಪೂರಕವಾಗುವಂತೆ ರಾಜ್ಯ ಸರ್ಕಾರವು ನಡೆದುಕೊಳ್ಳುತ್ತಿದ್ದು ಕೆಜೆ ಹಳ್ಳಿ, ಡಿಜೆ ಹಳ್ಳಿಯ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಇಂತಹ ಅಪರಾಧ ಕೃತ್ಯವೆಸಗುವ ಮನೋಭಾವನೆ ಹೊಂದಿದವರಿಗೆ ಪುಷ್ಟಿ ನೀಡುವಂತೆ ರಾಜ್ಯ ಸರ್ಕಾರದ ವರ್ತನೆಯಾಗಿದೆ ಎಂದು ಹರಿಹಾಯ್ದರು.ಗ್ಯಾರಂಟಿಗಳಿಂದ ಬೆಲೆ ಏರಿಕೆಯ ಬಿಸಿ ಜನಸಾಮನ್ಯರನ್ನು ಬೇಯಿಸುತ್ತಿದೆ. ಅಲ್ಲದೇ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿಯೂ ಗೊಂದಲ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದರೇ ಅದನ್ನು ವಿರೋಧಿಸಿವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. ಇದರ ಕೆಟ್ಟ ಪರಿಣಾಮ ಮುಂದಿನ ಹತ್ತು-ಹನ್ನೆರಡು ವರ್ಷಗಳಲ್ಲಿ ಅನುಭವಕ್ಕೆ ಬರುತ್ತದೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ರಾಜ್ಯದ ವಿದ್ಯಾರ್ಥಿಗಳು ಹಿಂದುಳಿಯುವ ಸಂದರ್ಭ ಬಂದೊದಗುತ್ತದೆ. ಇದು ಈ ಹಿಂದೆ ಶಿಕ್ಷಣ ಸಚಿವರಾಗಿ ಆಡಳಿತ ನಡೆಸಿದ ಅನುಭವದ ಮೇಲೆ ಹೇಳುತ್ತಿದ್ದೇನೆ ಎಂದು ತಿಳಿಸಿದರು.ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ಜಿಲ್ಲಾ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಗ್ರಾಮಾಂತರ ಜಿಲ್ಲಾ ಸಹ ವಕ್ತಾರ ಬಸವರಾಜ ಮಾತನವರ ಸೇರಿದಂತೆ ಇತರರು ಇದ್ದರು.

Uttara Kannada Elections 2024: ರಾಜಕೀಯ ಸಂಬಂಧಿತ ಯಾವುದೇ ಪ್ರಶ್ನೆಗೆ ಉತ್ತರಿಸದೆ ತೆರಳಿದ ಅನಂತ್ ಕುಮಾರ್

ನರೇಂದ್ರ ಮೋದಿಯವರ ಅಂಡರ ಕರೆಂಟ್‌ನಿಂದ ರಾಜ್ಯದಲ್ಲಿ 28 ಕ್ಷೇತ್ರಗಳು ಬಿಜೆಪಿ ತೆಕ್ಕೆ ಸೇರಲಿವೆ. ಉತ್ತರ ಕನ್ನಡ ಕ್ಷೇತ್ರದಲ್ಲಿ 2.5 ಲಕ್ಷದ ಅಂತರದಿಂದ ಬಿಜೆಪಿ ಗೆಲವು ಸಾಧಿಸಲಿದೆ. ಅಲ್ಲದೇ ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣೆ ಹಿಡಿಯಲಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ.