ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್‌ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಈ ಕುರಿತು ಕಾಂಗ್ರೆಸ್‌ ಸ್ಪಷ್ಟನಿಲುವು ಪ್ರಕಟಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. 

ಹುಬ್ಬಳ್ಳಿ (ಸೆ.08): ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್‌ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದು, ಈ ಕುರಿತು ಕಾಂಗ್ರೆಸ್‌ ಸ್ಪಷ್ಟನಿಲುವು ಪ್ರಕಟಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್‌ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಅಚಾನಕ್ಕಾಗಿ ಕೊಟ್ಟ ಹೇಳಿಕೆಯಲ್ಲ. ಸನಾತನ ಧರ್ಮದ ವಿರುದ್ಧವಾಗಿಯೇ ಅಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಈವರೆಗೆ ಕಾಂಗ್ರೆಸ್‌ ಪಕ್ಷ ಇದನ್ನು ಖಂಡಿಸಿಲ್ಲ. 

ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಈ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ ಎಂದ​ರು. ಕಾಂಗ್ರೆಸ್‌ನವರು ಘಮಂಡಿಯಾ ಗಠ​ಬಂಧ​ನ್‌ ಉಳಿಸಿಕೊಳ್ಳುವ ಆತುರದಲ್ಲಿ ಉದಯನಿಧಿ ಹೇಳಿಕೆ ಖಂಡಿಸಿಲ್ಲ. ಈ ಕುರಿತು ರಾಹುಲ್‌ ಗಾಂಧಿ ತಮ್ಮ ನಿಲುವು ಸ್ಪಷ್ಟಪಡಿಸಲಿ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೇವಸ್ಥಾನಕ್ಕೆ ಹೋಗುತ್ತಾರೆ, ಹಾಗಾದರೆ ಅವರ ನಿಲುವೇನು? ಡಿಎಂಕೆ ಹೇಳಿಕೆ ಖಂಡಿಸಲು ಶಕ್ತಿಯಿಲ್ಲವೇ? ದೇಶದ ಸಂಸ್ಕೃತಿ, ನಂಬಿಕೆ, ಸಮಗ್ರತೆ ಏನಾದರೂ ಆಗಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ತುಷ್ಟೀಕರಣಕ್ಕೆ ಮುಂದಾಗಿದೆ ಎಂದರು.

ಮೊಸರಲ್ಲಿ ಕಲ್ಲು ಹುಡುಕುವುದು ಬೇಡ, ಸನಾತನ ಧರ್ಮದ ನನ್ನ ಹೇಳಿಕೆ ತಪ್ಪಲ್ಲ: ಸಚಿವ ಪ್ರಿಯಾಂಕ್‌

ಮೋದಿ ಅವರೇ ಮತ್ತೇ ಪ್ರಧಾನಿ ನಿಶ್ಚಿತ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದ 23ರಿಂದ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ನರೇಂದ್ರ ಮೋದಿ ಅವರೇ ಮೂರನೇ ಸಲ ಪ್ರಧಾನಿಯಾಗಲಿದ್ದಾರೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಶಿ ಭವಿಷ್ಯ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ದಶಕಗಳಲ್ಲಿ ಆಗದ ಅಭಿವೃದ್ಧಿ ಕಾರ್ಯ ಕೇವಲ ಒಂಭತ್ತು ವರ್ಷಗಳಲ್ಲಾಗಿದೆ. ಮೋದಿ ನೇತೃತ್ವ ನಮಗಿದೆ. ಧಾರವಾಡ ಸೇರಿ 23-25 ಕ್ಷೇತ್ರದಲ್ಲಿ ಬಿಜೆಪಿ ಸ್ಪಷ್ಟವಾಗಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ 18-20 ಲೋಕಸಭಾ ಸ್ಥಾನ ಗೆಲ್ಲುತ್ತದೆ ಎಂದು ಕೆಲವರು, 10-12 ಸ್ಥಾನ ಗೆಲ್ಲುವ ವಿಚಾರ ಇನ್ನೊಂದೆಡೆ ಪ್ರಸ್ತಾಪಗೊಂಡಿದೆ. 2014ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದರೂ 25 ಸ್ಥಾನ ಗೆಲುವುದಾಗಿ ಹೇಳಿದ್ದರು. ಆಗ ಬಿಜೆಪಿ 17 ಸ್ಥಾನದಲ್ಲಿ ಗೆಲವು ಸಾಧಿಸಿದ್ದು ಸ್ಮರಿಸಿದರು. ಅಲ್ಲದೇ, ನಂತರ 2019ರ ಚುನಾವಣೆಯಲ್ಲಿ 25 ಕ್ಷೇತ್ರದಲ್ಲಿ ವಿಜಯ ಸಾಧಿಸಿತು. 2024ರ ಚುನಾವಣೆಯಲ್ಲೂ ಬಿಜೆಪಿ 25 ಸ್ಥಾನ ಗೆಲ್ಲುತ್ತದೆ. ಈ ಬಗ್ಗೆ ಯಾವುದೇ ಅನುಮಾನವೇ ಬೇಡ. ಈ ನಿಟ್ಟಿನಲ್ಲಿ ಈಗಾಗಲೇ ತಯಾರಿ ನಡೆಸಿದ್ದಾಗಿಯೂ ಕೂಡ ತಿಳಿಸಿದರು.

ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

ಜಗದೀಶ ಶೆಟ್ಟರ್‌ ಪಕ್ಷ ಬಿಟ್ಟಿದ್ದರಿಂದ ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಜೋಶಿ, ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಆದರೆ, ಧಾರವಾಡ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ಜಯ ಗಳಿಸಿದ್ದಾಗಿಯೂ ಹೇಳಿದರು.