*  ಕತ್ತಲಿನತ್ತ ಕರ್ನಾಟಕ ಆರಂಭವಾಗುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು*  ಕುಮಾರಸ್ವಾಮಿ ಅವರದ್ದು ಡಕೋಟಾ ಸರ್ಕಾರ*  ಕೋವಿಡ್‌ ವೇಳೆ ಹಸಿವಿನಿಂದ ಯಾರೂ ಮೃತಪಟ್ಟಿಲ್ಲ

ಹಾನಗಲ್ಲ(ಅ.25): ಕತ್ತಲಿನತ್ತ ಕರ್ನಾಟಕವಲ್ಲ, ಕಾಂಗ್ರೆಸ್‌ಗೆ ಕತ್ತಲು ಕವಿಯಲಿದೆ ಎನ್ನುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(DK Shivakumar) ಅವರಿಗೆ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದವರು ಕಲ್ಲಿದ್ದಲು(Coal) ಸಚಿವರಿದ್ದಾಗಲೂ ರಾಜ್ಯ ಕತ್ತಲಿನತ್ತ ಕರ್ನಾಟಕ(Karnataka) ಆರಂಭವಾಗುತ್ತಿದೆ ಎಂಬ ಡಿ.ಕೆ. ಶಿವಕುಮಾರ ಹೇಳಿಕೆಗೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು. ಜನ ಎಲ್ಲವನ್ನು ಮರೆತು ಹೋಗಿರುತ್ತಾರೆ ಎಂದುಕೊಂಡಿದ್ದಾರೆ ಡಿ.ಕೆ. ಶಿವಕುಮಾರ. ಕಾಂಗ್ರೆಸ್‌(Congress) ಕಾಲದಲ್ಲಿ ಸರ್ಕಾರದ ಅವಧಿಯಲ್ಲಿ ಶೇ. 12.13ರಷ್ಟು ವಿದ್ಯುತ್‌(Electricity) ಕೊರತೆ ಇತ್ತು. ಆದರೆ ಈಗ ಆ ಸಮಸ್ಯೆ ಇಲ್ಲ. ಅವರು ಶೇ. 25ರಷ್ಟು ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿದ್ದರು. ನಾವು ಅದನ್ನು ಶೇ. 10, 12ಕ್ಕೆ ತಂದಿದ್ದೇವೆ. ಆತ್ಮನಿರ್ಭರ ಭಾರತದಡಿ ನಾವು ಹೆಚ್ಚಿನ ಕಲ್ಲಿದ್ದಲು ಉತ್ಪಾದನೆ ಮಾಡುತ್ತಿದ್ದೇವೆ. ಕತ್ತಲಿನತ್ತ ಕರ್ನಾಟಕ ಆರಂಭವಾಗಲು ಸಾಧ್ಯವೇ ಇಲ್ಲ. ಆದರೆ, ಕಾಂಗ್ರೆಸ್‌ಗೆ ಕತ್ತಲು ಕವಿಯಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ ಸರ್ಕಾರ ಇರುವ ಪಂಜಾಬ್‌(Punjab), ಮಹಾರಾಷ್ಟ್ರ(Maharashtra), ರಾಜಸ್ಥಾನ(Rajasthan) ಸರ್ಕಾರಗಳಿಗೆ ಮಳೆಗಾಲದಲ್ಲಿ ಕಲ್ಲಿದ್ದಲು ಸಾಗಣೆ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳುವಂತೆ ಹತ್ತಾರು ಬಾರಿ ಸೂಚನೆ ಕೊಟ್ಟಿದ್ದೇವೆ. ಆದರೆ, ಅವರು ನಮ್ಮ ಮಾತು ಕೇಳಲಿಲ್ಲ. ಹೀಗಾಗಿ ಆ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಇದೀಗ ಕೇವಲ ನಾಲ್ಕು ದಿನಗಳ ದಾಸ್ತಾನು ಇದೆ ಎಂದು ಸುಳ್ಳು ಹೇಳುವ ಮೂಲಕ ಅನಗತ್ಯ ಗೊಂದಲ ಮಾಡಲಾಗುತ್ತಿದೆ. ಅ. 23ರಿಂದ ನಾವು 2.2 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ಪೂರೈಕೆ ಮಾಡುತ್ತಿದ್ದೇವೆ. ಇದು ಈ ವರೆಗಿನ ಅತಿ ಹೆಚ್ಚು ಕಲ್ಲಿದ್ದಲು ಪೂರೈಕೆಯಾಗಿದೆ ಎಂದರು.

ಹಾನಗಲ್‌ ಬೈಎಲೆಕ್ಷನ್‌ ಅಖಾಡ: ಜಾತಿ ಲೆಕ್ಕಾಚಾರದ ಮೇಲೆ ಭರ್ಜರಿ ಕ್ಯಾಂಪೇನ್‌

ಪುಟವನ್ನೇ ಮಾರ್ಜಿನ್‌ ಎಂದು ಬಿಡುವ ವ್ಯಕ್ತಿ ರಾಹುಲ್‌ ಗಾಂಧಿ(Rahul Gandhi). ಅಂಥವರ ಬಗ್ಗೆ ನಾನು ಮಾತನಾಡಲ್ಲ. ಸಿದ್ದರಾಮಯ್ಯ ಅವರು ಮೋದಿ(Narendra Modi) ಅವರನ್ನು ವಿರೋಧಿಸುವ ಭರದಲ್ಲಿ ದೇಶವನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ? ಸಿದ್ದರಾಮಯ್ಯ(Siddaramaiah) ದೇಶದ ವಿರೋಧಿಯೇ ? ಎಂದು ಪ್ರಶ್ನಿಸಿದರು. ಮೋದಿ ವಿರೋಧಿಸುವ ಸಲುವಾಗಿ ದೇಶವನ್ನು ವಿರೋಧ ಮಾಡಲು ಹೇಸದಿರುವ ಜನ ಇವರು ಎಂದು ಜೋಶಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಸ್ಪಾನಿಷ್‌ ಫ್ಲ್ಯೂ(Spanish Flu) ಬಂದಾಗ ಭಾರತದಲ್ಲಿ(India) 2.50 ಕೋಟಿ ಜನರು ಸತ್ತಿದ್ದರು. ಕೋಟ್ಯಂತರ ಜನ ಹಸಿವಿನಿಂದಲೇ ಅಸುನೀಗಿದ್ದರು. ಕೋವಿಡ್‌(Covid19) ವೇಳೆ ಹಸಿವಿನಿಂದ ಯಾರೂ ಮೃತಪಟ್ಟಿಲ್ಲ. ದೇಶದ ಸಾಧನೆಯನ್ನು ಯಾಕೆ ಅಲ್ಲೆಗಳೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು.ಕಾಂಗ್ರೆಸ್‌ನಲ್ಲಿ ಅಧ್ಯಕ್ಷರನ್ನು ನೇಮಿಸಿ ಎಂದಿದ್ದಕ್ಕೆ ಗುಲಾಂ ನಬಿ ಆಜಾದ್‌ ಅವರು ಸೇರಿ ಇತರರನ್ನು ಪಕ್ಷದಿಂದ ಹೊರಗೆ ಹಾಕಲಾಗಿದೆ. ಇನ್ನೂ ಇಂಥವರ ಪಕ್ಷದಿಂದ ಅಭಿವೃದ್ಧಿ ಸಾಧ್ಯವೇ ಎಂದರು.

ಡಿಕೆಶಿ ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು(Vote) ಎಂಬ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಕಾಂಗ್ರೆಸ್‌ ಪಕ್ಷದವರೇ ಆದ ಸಲೀಂ, ಉಗ್ರಪ್ಪ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಮೊದಲು ಉತ್ತರ ನೀಡಲಿ ಎಂದರು.
ಕುಮಾರಸ್ವಾಮಿ ಅವರದ್ದು ಡಕೋಟಾ ಸರ್ಕಾರ. ಲಾಟರಿ ಹೊಡೆದು ಯಾವಾಗ್ಯಾವಾಗ ಮುಖ್ಯಮಂತ್ರಿ ಆಗಿದ್ದಾರೋ ಅಗೆಲ್ಲ ಡಕೋಟಾ ರೀತಿಯಲ್ಲಿ ಸರ್ಕಾರ ನಡೆಸಿದ್ದಾರೆ. ಅವರ ಭಾವಕ್ಕೆ ಎಲ್ಲವೂ ಡಕೋಟಾ ರೀತಿಯಲ್ಲಿಯೇ ಕಾಣುತ್ತದೆ ಎಂದರು.

ಆರೋಗ್ಯ ಸಚಿವ ಡಾ. ಸುಧಾಕರ, ಸಚಿವ ಮುನಿರತ್ನ, ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಎನ್‌. ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಶಾಸಕರಾದ ರಾಜುಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.