ನನ್ನ ಬಗ್ಗೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನ ಹತ್ತಿರ ಇರುವ ದಾಖಲೆಗಳನ್ನು ತೆಗೆದರೆ ಈ ವ್ಯಕ್ತಿ ಮಾಡಿರುವ ಅವ್ಯವಹಾರದ ಸಂಪುಟವನ್ನೇ ಮಾಡಬಹುದು. ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ನನ್ನನ್ನು ಗುಣಗಾನ ಮಾಡಿಕೊಂಡು ಕೂತಿದ್ದಾರೆ. ಹುಚ್ಚರಂತೆ ಪದಬಳಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ  

ಚನ್ನಪಟ್ಟಣ(ಆ.06): ಅನ್ಯಾಯವಾಗಿ ಕಂಡವರ ಆಸ್ತಿಯನ್ನು ಸರಣಿಯಾಗಿ ಕಬಳಿಸುತ್ತಿರುವ ವ್ಯಕ್ತಿಯೊಬ್ಬ ನನ್ನ, ನನ್ನ ತಂದೆ ಯವರ ಆಸ್ತಿ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಬಗ್ಗೆ ಮಾತ ನಾಡುವ ಮೊದಲು ಅವರು ಚಾಮುಂಡೇಶ್ವರಿ ಅಥವಾ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೆ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು

Add Asianetnews Kannada as a Preferred SourcegooglePreferred

ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹಾಗೂ ಸುದ್ದಿಗಾರರ ಜತೆಗೆ ಸೋಮವಾರ ಮಾತನಾಡಿ ಡಿ.ಕೆ.ಶಿವಕುಮಾರ್ ಅವರ ಗೊಡ್ಡು ಬೆದರಿಕೆಗಳಿಗೆಲ್ಲ ನಾನು ಬಗ್ಗುವುದಿಲ್ಲ. ನನ್ನ ಬಗ್ಗೆ ಅದೇನು ಬಿಚ್ಚಿಡುತ್ತೀರೋ ಬಿಚ್ಚಿಡಿ ಎಂದು ಕಿಡಿಕಾರಿದರು.

ಸಿದ್ದು ತಪ್ಪು ಮಾಡದಿದ್ರೆ ದೆಹಲಿ ನಾಯಕರ ಸಪೋರ್ಟ್ ಏಕೆ ಬೇಕು?. ಹಣ ಕೊಟ್ಟು ಅವರನ್ನು ಏಕೆ ಕರೆಸಿದ್ದೀರಿ?: ಅಶೋಕ್

ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ಬಲವಂತವಾಗಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಂಡು ಪೂರ್ಣ ಹಣ ಕೊಟ್ಟಿಲ್ಲ. ಮೊದಲು ಆ ತಾಯಂದಿರ ಬಳಿ ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಒಂದು ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯಪ್ರವೇಶಿಸುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಮಹಿಳೆಯರನ್ನು ಕರೆಸಿ ಗನ್ ತೋರಿಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂಥ ವ್ಯಕ್ತಿ ಈಗ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ ಎಂದು ಶಿವಕುಮಾರ್ ವಿರುದ್ದ ಗುಡುಗಿದರು.

ಅನ್ಯಾಯವಾಗಿ ಇನ್ನೊಬ್ಬರ ಆಸ್ತಿ ಕಬಳಿಸುವ ಕೆಟ್ಟ ಹಿನ್ನೆಲೆಯ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ಬನ್ನಿ ಅಜ್ಜಯನ ಮುಂದೆ ಯಾಗಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆಯಾಗಲಿ ಪ್ರಮಾಣ ಮಾಡೋಣ. ಆಸ್ತಿ ವಿಚಾ ರದ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದರಲ್ವಾ? ಅಲ್ಲಿಗೂ ಬರಲು ನಾನು ಸಿದ್ದ. ಬನ್ನಿ ಆಸ್ತಿ ವಿಚಾರ ಚರ್ಚೆ ಮಾಡೋಣ ಎಂದರು.

ನಮ್ಮ ಹೋರಾಟದಿಂದ ಕಾಂಗ್ರೆಸ್‌ ಹೈಕಮಾಂಡ್‌ ಬೆಂಗ್ಳೂರಿಗೆ ಓಡಿಬಂದಿದೆ: ವಿಜಯೇಂದ್ರ

ಈಗ ಚನ್ನಪಟ್ಟಣಕ್ಕೆ ಬಂದು ಏನೋ ಉದ್ದಾರ ಮಾಡುತ್ತೇವೆಂದು ಅಣ್ಣ-ತಮ್ಮ (ಡಿಕೆಶಿ ಸೋದರರು) ಬಂದಿದ್ದಾರೆ. ನೀವು ಚನ್ನ ಪಟ್ಟಣವನ್ನು ಉದ್ಧಾರ ಮಾಡಿರೋದು ಇಲ್ಲಿನ ಜನರಿಗೆ ಚೆನ್ನಾಗಿ ಗೊತ್ತಿದೆ. ಇಲ್ಲಿನ ಮತ್ತಿಕೆರೆ ಬಳಿ ಕಲ್ಲು ಗೋಡೌನ್ ಇದೆ. ಅಲ್ಲಿ ಎಷ್ಟು ಕಲ್ಲುಗಳನ್ನು ತಂದು ಇಲ್ಲಿ ಗುಡ್ಡೆ ಹಾಕ್ತಿದ್ದೀರಿ? ಅದನ್ನು ಎಲ್ಲೆಲ್ಲಿಗೆ ಸಾಗಿಸುತ್ತಿದ್ದೀರಿ ಎಂಬುದೆಲ್ಲ ನನಗೆ ಗೊತ್ತಿಲ್ಲದ ವಿಷಯವೇ? ಎಂದ ಕುಮಾರಸ್ವಾಮಿ, ಬಹಿರಂಗ ಸಭೆಯಲ್ಲಿ ಆ ಕಲ್ಲು ಗೋದಾಮುಗಳ ಪೋಟೋ ತೋರಿಸಿ ಇದಕ್ಕೆ ಉತ್ತರ ಕೊಡಪ್ಪಾ? ಎಂದು ಶಿವಕುಮಾರ್‌ರನ್ನು ಪ್ರಶ್ನಿಸಿದರು.

ಏನೇ ಬಿಚ್ಚಿಡುತ್ತಾರೋ ಬಿಚ್ಚಿಡಲಿ: 

ನನ್ನ ಬಗ್ಗೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನ ಹತ್ತಿರ ಇರುವ ದಾಖಲೆಗಳನ್ನು ತೆಗೆದರೆ ಈ ವ್ಯಕ್ತಿ ಮಾಡಿರುವ ಅವ್ಯವಹಾರದ ಸಂಪುಟವನ್ನೇ ಮಾಡಬಹುದು. ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ನನ್ನನ್ನು ಗುಣಗಾನ ಮಾಡಿಕೊಂಡು ಕೂತಿದ್ದಾರೆ. ಹುಚ್ಚರಂತೆ ಪದಬಳಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದರು.