ಮುಂದಿನ ದಿನಗಳಲ್ಲಿ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ. ಇಲ್ಲ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಸಿಗಬಹುದು ಎಂದು ಕೇಂದ್ರ ಸಚಿವರೊಬ್ಬರು ಭವಿಷ್ಯ ನುಡಿದಿದ್ದಾರೆ.

ಮೈಸೂರು, (ನ.13): ಕೆ.ಆರ್.ಪೇಟೆ ಹಾಗೂ ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ಪ್ರಮುಖ ಪಾತ್ರವಹಿಸಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಉಪಚುನಾವಣೆಯ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿಯಾಗಿರುವ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಮಹತ್ವದ ಹುದ್ದೆಗೇರಲಿದ್ದಾರೆ ಎನ್ನುವುದು ಎಲ್ಲರ ಬಾಯಲ್ಲಿ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಮಧ್ಯೆ ಈಗ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ, ಮುಂದೆ ಅಧ್ಯಕ್ಷರಾಗಬಹುದು. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಸಿಗಬಹುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ್ರ ಅವರು ತಿಳಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಕಾಲಿಟ್ಟಲ್ಲಿ ಗೆಲುವು ನಿಶ್ಚಿತ: ಹೀಗೊಂದು ಭವಿಷ್ಯ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಯುವಕರೇ ಭವಿಷ್ಯದ ನಾಯಕರು. 46ವರ್ಷದ ಒಳಗಿನ ಯುವಕರಿಗೆ ಆದ್ಯತೆ ಜಾಸ್ತಿಯಾಗಿರೋದು ಪಕ್ಷವನ್ನು ಬಲಪಡಿಸುವ ಬಿಜೆಪಿಯ ರಾಷ್ಟ್ರೀಯ ನೀತಿ, ಇದು ಆಗಲೇಬೇಕು. ಯುವಕರನ್ನು ಮುಂದೆ ತರದೆ ಪ್ರಾಯದವರನ್ನ ಇಟ್ಟುಕೊಳ್ಳೋಕೆ ಆಗುತ್ತಾ..? ನಮ್ಮ ಯಡಿಯೂರಪ್ಪನವರಿಗೆ 77 ವರ್ಷ ಆಯ್ತು, ನಾವು ಆಡಳಿತದಲ್ಲಿ 75 ವರ್ಷ ಅಂತ ನಿಶ್ಚಯ ಮಾಡಿದ್ದೆವು. ಇನ್ನೊಂದು ಎರಡು ಮೂರು ವರ್ಷ ಅವರು ಇರ್ತಾರೆ. ಇನ್ನು ವಿಜಯೇಂದ್ರರೂ ಭವಿಷ್ಯದ ನಾಯಕ. ಈಗ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಮುಂದೆ ಅಧ್ಯಕ್ಷರಾಗಬಹುದು. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಸಿಗಬಹುದು. ಇದನ್ನೆಲ್ಲಾ ತೀರ್ಮಾನ ಮಾಡೋರು ಪಕ್ಷದ ಹಿರಿಯರು ಎಂದರು.

ಇಡೀ ದೇಶದಲ್ಲಿ ಶೇ60ಕ್ಕೂ ಹೆಚ್ಚು ಯುವಕರು ಇದ್ದಾರೆ. ಯುವಕರಿಗೆ ಮುಂದೆ ಜವಾಬ್ದಾರಿ ಕೊಡಬೇಕು ಅಂತ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ಕೊಟ್ಟಿದ್ದೇವೆ. ನಮ್ಮದು ಸಾಮೂಹಿಕ ನಾಯಕತ್ವ, ವ್ಯಕ್ತಗತ ನಾಯಕತ್ವವಲ್ಲ ಎಂದು ಸ್ಪಷ್ಟಪಡಿಸಿದರು.

ಹಿರಿಯ ನಾಯಕರಾದ ಜಗದೀಶ್​​ ಶೆಟ್ಟರ್​ರಿಗೆ ಕೇವಲ ಸಚಿವ ಸ್ಥಾನದ ವಿಚಾರವಾಗಿ ಮಾತಾನಾಡಿದ ಅವರು ಎಲ್ಲರಿಗೂ ಮುಖ್ಯಮಂತ್ರಿ ಸ್ಥಾನ ಕೊಡೋಕೆ ಆಗುತ್ತಾ.. ? ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಆದ್ದರಿಂದ ಒಂದು ಹೋಗುತ್ತೆ, ಮತ್ತೊಂದು ಬರುತ್ತೆ. ನಮ್ಮ ಪಕ್ಷದಲ್ಲಿ ಸಂಘಟನೆಗಾಗಿ ವಿಶೇಷವಾದ ಯಶಸ್ವಿ ನಾಯಕರು ಬರುತ್ತಿದ್ದಾರೆ. ಹಿಂದೆಲ್ಲಾ‌ ನಮ್ಮಲ್ಲಿ ನೋಡಿಲ್ವ ಒಬ್ಬರು ಹೋದ ಮೇಲೆ ಮತ್ತೊಬ್ಬರು ಬರ್ತಾರೆ ಎಂದು ಹೇಳಿದರು.