Asianet Suvarna News Asianet Suvarna News

ಎರಡು ಬಾರಿ ಸಿಎಂ ಆಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

ನನ್ನ ಎರಡು ಬಾರಿಯ ಮುಖ್ಯಮಂತ್ರಿ ಆಡಳಿತದಲ್ಲಿ ವಿಧಾನಸೌಧದಲ್ಲಿ ಆಡಳಿತ ನಡೆಸುವುದಕ್ಕಿಂತ ಜನರ ಮಧ್ಯೆ ಇದ್ದು ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

Twice as CM I have worked among the people says HD Kumaraswamy gvd
Author
First Published Dec 26, 2022, 8:45 PM IST

ಪಾಂಡವಪುರ (ಡಿ.26): ನನ್ನ ಎರಡು ಬಾರಿಯ ಮುಖ್ಯಮಂತ್ರಿ ಆಡಳಿತದಲ್ಲಿ ವಿಧಾನಸೌಧದಲ್ಲಿ ಆಡಳಿತ ನಡೆಸುವುದಕ್ಕಿಂತ ಜನರ ಮಧ್ಯೆ ಇದ್ದು ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾನು ರಾಜ್ಯದಲ್ಲಿ ಎರಡು ಭಾರಿ ಮುಖ್ಯಮಂತ್ರಿಯಾಗಿ ವಿಧಾನಸೌಧದಲ್ಲಿ ಆಡಳಿತ ನಡೆಸಿದಕ್ಕಿಂತ ಹೆಚ್ಚಾಗಿ ಗ್ರಾಮವಾಸ್ತವ್ಯ ಮಾಡಿ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಸಮಸ್ಯೆ ಆಲಿಸಿದ್ದೇನೆ. ಆ ತಾಯಿಕೊಟ್ಟಅನ್ನತಿಂದು ಜನಸಾಮಾನ್ಯ ಇದ್ದು ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದ್ದೇನೆ ಎಂದರು.

ನಾನು ರೈತರ 26 ಸಾವಿರ ಕೋಟಿ ಕೃಷಿ ಸಾಲವನ್ನು ಮನ್ನಾಮಾಡಿದ್ದೇನೆ. ಆದರೆ, ರೈತರ ಸಾಲಮನ್ನಾ ಮಾಡುವುದರಿಂದ ರೈತರ ಸಮಸ್ಯೆ ಬಗೆಹರಿಯೋದಿಲ್ಲ. ರೈತರು ಬೆಳೆ ತೆಗೆಯಲು ಯಾವುದೇ ನಷ್ಟಅನುಭವಿಸದಂತೆ ಪಂಚರತ್ನ ಯೋಜನೆ ಮೂಲಕ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ ಎಂದು ತಿಳಿಸಿದರು. 2006ರಲ್ಲಿ ಸಿಎಂ ಆಗಿದ್ದ ವೇಳೆ ಆನ್‌ಲೈನ್‌ ಲಾಟರಿ ರದ್ದುಪಡಿಸಿದೆ, ಅಧಿಕಾರಕ್ಕೆ ಬಂದರೆ ಆನ್‌ಲೈನ್‌ ರೆಮ್ಮಿ, ಕ್ರಿಕೆಚ್‌ ಬೆಟ್ಟಿಂಗ್‌ ದಂಧೆಗೂ ಕಠಿವಾಣ ಹಾಕುತ್ತೇನೆ. ಚುನಾವಣೆಯಲ್ಲಿ ಯಾವುದೇ ಜಾತಿ ವ್ಯಾಮೋಹಬಿಟ್ಟು, ಆಮಿಷಗಳಿಗೆ ಬಲಿಯಾಗದೆ, ನಿಮ್ಮ ಮನೆಮಗ, ಮಣ್ಣಿನ ಮಗ ಜನರಪರ, ರೈತರಪರ ಸರಕಾರ ನಡೆಸಲು ಅವಕಾಶ ನೀಡುವಂತೆ ಕೋರಿದರು.

ಅಭಿವೃದ್ಧಿಗಾಗಿ ಅಮಿತ್‌ ಶಾ ಮಂಡ್ಯಕ್ಕೆ ಬರುತ್ತಿಲ್ಲ: ಕುಮಾರಸ್ವಾಮಿ

ರಾಜ್ಯದ ಜನತೆ ಕಾಂಗ್ರೆಸ್‌, ಬಿಜೆಪಿಗೆ ಅಧಿಕಾರಕೊಟ್ಟು ಅವರಿಂದ ಯಾವುದೇ ರೀತಿಯ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದೀರಿ. ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ತರಲು ದಿನದ 20 ಗಂಟೆಗಳ ಕಾಲ ರಥಯಾತ್ರೆ ನಡೆಸುತ್ತಿದ್ದೇನೆ. ಕೇವಲ 3 ಗಂಟೆಗೆ ಮಾತ್ರ ನಿದ್ರೆ ಮಾಡುತ್ತಿದ್ದೇನೆ. ಕಳೆದ 2018ರ ಚುನಾವಣೆಯಲ್ಲಿ ಜಿಲ್ಲೆಯ ಜನ 7ಕ್ಕೆ 7 ಸ್ಥಾನವನ್ನು ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿದರು. ಮತ್ತೊಮ್ಮೆ ಅಧಿಕಾರಕ್ಕೇರಲು ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದರು. ಶಾಸಕ ಸಿ.ಎಸ್‌.ಪುಟ್ಟರಾಜು ಹೃದಯವಂತ ನಾಯಕ. ಕ್ಷೇತ್ರದಲ್ಲಿ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದನೆ ನೀಡಿದ್ದಾರೆ. ಸಣ್ಣನೀರಾವರಿ ಸಚಿವರಾಗಿ ಕ್ಷೇತ್ರದಲ್ಲಿ ಹಲವಾರು ನೀರಾವರಿ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಸಿ.ಎಸ್‌.ಪುಟ್ಟರಾಜು ಮುಂದಿನ ಭಾರಿಯೂ ಸಹ ಮಂತ್ರಿಯಾಗಿ ಕೆಲಸ ಮಾಡಲು ಕ್ಷೇತ್ರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.

ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲ: ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ದೇವೇಗೌಡರ ಕುಟುಂಬದ ಬೆಂಬಲ ಸದಾ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಸೋಮವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಬಿಂಡಿಗನವಿಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಈಗಾಗಲೇ ಒಕ್ಕಲಿಗರ ಮೀಸಲಾತಿ ವಿಚಾರ ಕುರಿತು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ. ಮೀಸಲಾತಿ ವಿಚಾರದಲ್ಲಿ ದೇವೇಗೌಡರ ಕುಟುಂಬ ಮತ್ತು ಜೆಡಿಎಸ್‌ ಪಕ್ಷದ ಹಿಂದೆ ಸರಿಯುವುದಿಲ್ಲ ಎಂದರು.

ಕೋವಿಡ್ ಹೆಸರಲ್ಲಿ ಪಂಚರತ್ನ ತಡೆಯಲು ಯತ್ನ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ಸ್ತ್ರೀಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವ ಜೊತೆಗೆ ಆನ್‌ಲೈನ್‌ ರಮ್ಮಿ ಹಾಗೂ ಕ್ರಿಕೆಟ್‌ ದಂಧೆ ನಿಷೇಧಿಸುತ್ತೇನೆ ಎಂದರು. ರಸಗೊಬ್ಬರ ಸೇರಿದಂತೆ ರೈತರ ಕೃಷಿ ಪರಿಕರಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ಕೊಬ್ಬರಿ ಮತ್ತು ಅಡಿಕೆ ಬೆಲೆ ತೀವ್ರ ಕುಸಿತಗೊಂಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಕೊಡದಿದ್ದರೂ ಸಹ ನಾವು ಕೊಬ್ಬರಿ, ಅಡಿಕೆ ಸೇರಿದಂತೆ ರೈತರ ಎಲ್ಲ ಬೆಲೆಗಳಿಗೆ ನ್ಯಾಯಸಮ್ಮತ ಬೆಲೆ ಕೊಡಿಸುವುದಾಗಿ ತಿಳಿಸಿದರು.

Follow Us:
Download App:
  • android
  • ios