ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನ್ನನ್ನು ನೀವು ಈ ಬಾರಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದರೆ ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.

ತಿಪಟೂರು (ಏ.10): ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನ್ನನ್ನು ನೀವು ಈ ಬಾರಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದರೆ ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು. ತಾಲೂಕಿನ ನೊಣವಿನಕೆರೆ ಹೋಬಳಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕಳೆದ ನಲವತ್ತು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ. ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಆಶೀರ್ವಾದ, ಆದಿಚುಂಚನಗಿರಿ ಶ್ರೀ ಸಿದ್ದಗಂಗಾ ಮಠದ ಶ್ರೀಗಳ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. 

Add Asianetnews Kannada as a Preferred SourcegooglePreferred

ಜಿಲ್ಲೆಯಲ್ಲಿ ಕೊಬ್ಬರಿ ಬೆಂಬಲ ಬೆಲೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೆ ನನ್ನಿಂದ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆರ್ಥಿಕ ಕ್ಷೇತ್ರದಲ್ಲಿ ಇತರೆ ದೇಶಕ್ಕಿಂತ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಜನಪರ ಕಾಳಜಿ ಕೆಲಸದಿಂದ ಮೂರನೇ ಬಾರಿಯೂ ಈ ದೇಶದ ಪ್ರಧಾನಿಯಾಗಲಿದ್ದಾರೆ. ನೊಣವಿನಕೆರೆ ಹೋಬಳಿಯ ಅಭಿವೃದ್ಧಿ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಾ ಗಬೇಕು. ಸಂಸದನಾದರೆ ಸ್ಥಳೀಯ ಸಮಸ್ಯೆಗಳು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ತಿಳಿಸಿದರು.

ಬಿಜೆಪಿಯಿಂದ ಶ್ರಮಿಕರು, ರೈತರಿಗೆ ಅನ್ಯಾಯ: ಸಚಿವ ಡಾ.ಜಿ.ಪರಮೇಶ್ವರ್

ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು ಎಲ್ಲರಿಗೂ ಸುಲಭವಾಗಿ ಸಿಗುವ ವ್ಯಕ್ತಿ. ತುಮಕೂರು ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ವಿ.ಸೋಮಣ್ಣನವರು ಗೆಲ್ಲಬೇಕು. ಕಳೆದ 20 ದಿನಗಳಿಂದಲೂ ಜಿಲ್ಲೆ ಯಾದ್ಯಂತ ಪ್ರಚಾರ ಕಾರ್ಯ ಬಿರುಸಾಗಿ ನಡೆಯುತ್ತಿದ್ದು, ನಾವು ಹೋದೆಲ್ಲೆಲ್ಲಾ ಮತದಾರರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷಗಳ ಸಾಧನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವ ಮೂಲಕ ಈ ಬಾರಿ ವಿ. ಸೋಮಣ್ಣ ಗೆಲ್ಲಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡ ಲಿಂಗರಾಜು, ರಾಕೇಶ್, ಮುಖಂಡರುಗಳಾದ ಗಂಗರಾಜು, ರಾಮಕೃಷ್ಣಯ್ಯ, ಜಕ್ಕನಹಳ್ಳಿ ಲಿಂಗರಾಜು, ವಿಶ್ವದೀಪ್, ಹುಣಸೇಘಟ್ಟ ಪ್ರಕಾಶ್ ರೋಹಿತ್, ಮಾರುಗೊಂಡನಹಳ್ಳಿ ಮಂಜು, ಎನ್.ಸಿ. ರಮೇಶ್, ರಾಜು ಕಂಚಘಟ್ಟ ಸೇರಿದಂತೆ ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಾಜ್ಯಕ್ಕೆ ಮೋದಿ ಸರ್ಕಾರ ನೀಡಿದಷ್ಟು ಅನುದಾನವನ್ನು ಯಾವ ಸರ್ಕಾರವೂ ನೀಡಿಲ್ಲ: ಸಿ.ಟಿ.ರವಿ

ಜೆಡಿಎಸ್ ಮುಖಂಡತ್ವ ಬಗ್ಗೆ ಗಲಾಟೆ: ನೊಣವಿನಕೆರೆ ಪ್ರಚಾರ ವೇಳೆ ಜೆಡಿಎಸ್‌ನ ಕೆ.ಟಿ.ಶಾಂತಕುಮಾರ್ ಬಣ ಹಾಗೂ ರಾಕೇಶ್‌ಗೌಡ ಬಣಗಳ ನಡುವೆ ನೊಣವಿನಕೆರೆ ಪ್ರಚಾರದ ಮುಖಂಡತ್ವದ ಬಗ್ಗೆ ಮಾತಿಗೆ ಮಾತು ಬೆಳೆದು ಸಣ್ಣಮಟ್ಟದ ತಳ್ಳಾಟ-ನೂಕಾಟ ನಡೆಯಿತು. ಪರಸ್ಪರ ಮಾತುಗಳ ಭರಾಟೆ ಜೋರಾಗಿಯೇ ನಡೆಯಿತು. ಗಲಾಟೆ ವಿಕೋಪಕ್ಕೆ ಹೋಗಬಾರದೆಂದು ಅಭ್ಯರ್ಥಿ ಸೋಮಣ್ಣ ಮತ್ತಿತರ ಮುಖಂಡರುಗಳು ಜೆಡಿಎಸ್‌ನ ಎರಡೂ ಬಣಗಳನ್ನು ಸಮಾಧಾನಪಡಿಸಿ ಗಲಾಟೆಯನ್ನು ಶಾಂತಗೊಳಿಸಿ ಪ್ರಚಾರ ಕಾರ್ಯವನ್ನು ಮುಂದುವರೆಸಿದರು.