ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು!
ನಮ್ಮನ್ನು ಡಿಎಂಕೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ: ಅಳಗಿರಿ| ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು| ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್ ಅಳಗಿರಿ
ಚೆನ್ನೈ(ಮಾ.07): ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸಲ ಎಐಎಡಿಎಂಕೆ ಸರ್ಕಾರವನ್ನು ಹೊರದಬ್ಬಿ ಆಡಳಿತದ ಚುಕ್ಕಾಣಿ ಹಿಡಿಯಲು ಕನಸು ಕಾಣುತ್ತಿರುವ ಡಿಎಂಕೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಡಿಎಂಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್ ಅಳಗಿರಿ ಅವರು, ‘ಸೀಟು ಹಂಚಿಕೆ ಬಗ್ಗೆ ಮಾತುಕತೆಗೆ ಹೋದಾಗ ಕಾಂಗ್ರೆಸ್ ನಿಯೋಗವನ್ನು ಡಿಎಂಕೆ ನಡೆಸಿಕೊಂಡ ಬಗ್ಗೆ ಭಾರೀ ಘಾಸಿಗೊಳಿಸಿದೆ. ನಮಗೆ ಇಂತಿಷ್ಟುಸೀಟು ಅನ್ನುವುದಕ್ಕಿಂತ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರನ್ನು ನಡೆಸಿಕೊಂಡ ರೀತಿ ನೋವು ತರಿಸಿದೆ’ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.
ಅಳಗಿರಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ‘ಪಕ್ಷಕ್ಕೆ ಸರಿಯಾದ ಸೀಟು ಪಡೆಯುವ ಮೂಲಕ ಡಿಎಂಕೆ ಜೊತೆಗಿನ ಮೈತ್ರಿಯನ್ನು ಉಳಿಸಬೇಕು’ ಎಂದು ಸೂಚಿಸಿದ್ದಾರೆ.
ಡಿಎಂಕೆ ಈಗಾಗಲೇ ವಿಸಿಕೆ, ಸಿಪಿಐ, ಐಯುಎಂಎಲ್, ವೈಕೋ ಅವರ ಎಂಡಿಎಂಕೆ ಹಾಗೂ ಎಂಎಂಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಕಾಂಗ್ರೆಸ್ ಜತೆಗಿನ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.