* ಪ್ರಬಲ ಖಾತೆಯ ಮೇಲೆ ಕಣ್ಣಿಟ್ಟಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್* ಆನಂದ್ ಸಿಂಗ್ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ* ಆನಂದ್‌ ಸಿಂಗ್‌ ಅವರ ಕಾರ್ಯಾಲಯ ಇನ್ನೂ ಕಾರ್ಯಾಚರಣೆ ಪುನಾರಂಭಿಸಿಲ್ಲ

- ಕೃಷ್ಣ ಎನ್‌. ಲಮಾಣಿ, ಕನ್ನಡಪ್ರಭ

Add Asianetnews Kannada as a Preferred SourcegooglePreferred

ಹೊಸಪೇಟೆ(ಆ.13): ಪ್ರಬಲ ಖಾತೆ ಮೇಲೆ ಕಣ್ಣಿಟ್ಟು ಅಸಮಾಧಾನಗೊಂಡಿರುವ ಸಚಿವ ಆನಂದ್‌ ಸಿಂಗ್‌ ಜೊತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನ ಸಭೆ ನಡೆಸಿದರೂ ಮುನಿಸು ಶಮನಗೊಂಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ನಗರದ ರಾಣಿಪೇಟೆಯಲ್ಲಿರುವ ಸಚಿವ ಆನಂದ್‌ ಸಿಂಗ್‌ ಅವರ ಕಚೇರಿಯ ಬೋರ್ಡ್‌ ಅನ್ನು ಆಗಸ್ಟ್ 10ರಂದು ತೆರವುಗೊಳಿಸಿ, ಬಂದ್‌ ಮಾಡಲಾಗಿದೆ. ಅತ್ತ ಸಿಂಗ್‌ ಅವರ ಜತೆಗೆ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಸಿಎಂ ಮತ್ತು ಸಚಿವ ಆರ್‌. ಅಶೋಕ್‌ ಹೇಳಿದರೂ ಹೊಸಪೇಟೆಯಲ್ಲಿ ಚಿತ್ರಣ ಇನ್ನೂ ಬದಲಾಗಿಲ್ಲ. ಬಂಡಾಯ ಶಮನವಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಒಳ ಬೇಗುದಿ ಮಾತ್ರ ಹಾಗೇ ಇದೆ.

ವಿಕಾಸಸೌಧದಲ್ಲಿ ಸಚಿವ ಶಿವರಾಂ ಹೆಬ್ಬಾರ್ ಪೂಜೆ..!

ಆರಂಭಗೊಳ್ಳದ ಕಚೇರಿ: ಇದಕ್ಕೆ ಪುಷ್ಟಿಎಂಬಂತೆ ಆನಂದ್‌ ಸಿಂಗ್‌ ಅವರ ಕಾರ್ಯಾಲಯ ಇನ್ನೂ ಕಾರ್ಯಾಚರಣೆ ಪುನಾರಂಭಿಸಿಲ್ಲ. ಜತೆಗೆ ಜನರ ಭೇಟಿಗೂ ಅವಕಾಶ ನೀಡಲಾಗಿಲ್ಲ. ಸಿಬ್ಬಂದಿಯೂ ಕಚೇರಿಗೆ ಆಗಮಿಸುತ್ತಿಲ್ಲ. ಆ.15ರವರೆಗೆ ಯಾವುದೂ ಗೊತ್ತಾಗುವುದಿಲ್ಲ. ಅವರು ಯಾವ ಖಾತೆ ಬಯಸುತ್ತಿದ್ದಾರೆ, ಅದನ್ನು ಖಂಡಿತ ಪಡೆಯುತ್ತಾರೆ ಎಂಬ ಮಾತುಗಳು ಸಚಿವರ ಆಪ್ತವಲಯದಲ್ಲಿ ಕೇಳಿ ಬರುತ್ತಿದೆ. ಹೊಸಪೇಟೆಯಲ್ಲಿ ಆ.15ರಂದು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆನಂದ್‌ ಸಿಂಗ್‌ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಸುದೀರ್ಘವಾಗಿ ಚರ್ಚಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ವರಿಷ್ಠರ ಭೇಟಿಗೆ ಸಮಯ ಕೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.