ಕರ್ನಾಟಕದಲ್ಲಿ ಆಡಿಯೋ ಪಾಲಿಟಿಕ್ಸ್ ಕ್ಷಣ ಕ್ಷಣ್ಕಕೂ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಬಿ ಎಸ್ ಯಡಿಯೂರಪ್ಪ ತಾನು ಶರಣುಗೌಡನನ್ನು ಭೇಟಿಯಾಗಿದ್ದು ನಿಜ ಎಂದಿದ್ದು, ಅವರು ರಾಜಕೀಯ ನಿವೃತ್ತಿ ಪಡೆಯಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಹೀಗಿರುವಾಗ ಬಿಎಸ್‌ವೈ ಸ್ಪಷ್ಟನೆ ನೀಡಿದ್ದು, ತಾನು ರಾಜಕೀಯ ನಿವೃತ್ತಿ ನೀಡುತ್ತೇನೆ ಆದರೆ.... ಎಂದು ಆಡಿಯೋಗೆ ಸಂಬಂಧಿಸಿದಂತೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಹೇಳಿದ್ದೇನು?

ಹುಬ್ಬಳ್ಳಿ[ಫೆ.10]: ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳಾಗುತ್ತಿದ್ದು, ಆಪರೇಷನ್ ಕಮಲ ಆಡಿಯೋ ವಿಚಾರ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ. ಈಗಾಗಲೇ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ಅನ್ವಯ ತಾನು ಶರಣುಗೌಡನೊಂದಿಗೆ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನೀಡಿದ ಮಾತಿನಂತೆ ರಾಜಕೀಯ ನಿವೃತ್ತಿ ಪಡೆಯಿರಿ ಎಂಬ ಒತ್ತಡ ಹೆಚ್ಚಾಗಿದೆ. ಹೀಗಿರುವಾಗ ಯಡಿಯೂರಪ್ಪ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ಈ ಆಡಿಯೋ ವಿಚಾರವಾಗಿ ಮತ್ತಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಹೌದು ಹುಬ್ಬಳ್ಳಿಯಲ್ಲಿ ಆಡಿಯೋ ಕುರಿತಾಗಿ ಮತ್ತಷ್ಟು ಸ್ಪಷ್ಟನೆ ನೀಡಿರುವ ಬಿ. ಎಸ್ ಯಡಿಯೂರಪ್ಪ 'ಶರಣಗೌಡ ರಾತ್ರಿ ಹನ್ನೆರಡೂವರೆ ಗಂಟೆಗೆ ನನ್ನನ್ನು ಭೇಟಿಯಾಗಿದ್ದು ನಿಜ. ಇದು ಸಿಎಂ ಕುಮಾರಸ್ವಾಮಿ ಮಾಡಿರುವ ಷಡ್ಯಂತ್ರ. ಸಂಭಾಷಣೆಯಲ್ಲಿ ಅರ್ಧ ಸತ್ಯ ಅರ್ಧ ಸುಳ್ಳು ಇದೆ. ಯಕೆಂದರೆ ಸ್ಪೀಕರ್‌ಗೆ ನಾನು ಹಣ ಕೊಡುವುದಾಗಿ ಹೇಳಿದ್ದು ಸುಳ್ಳು. ಇದನ್ನು ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ’ ಎಂದಿದ್ದಾರೆ.

ಅಲ್ಲದೇ 'ಸೂಕ್ತ ತನಿಖೆ ಮಾಡಿದ್ರೆ ಸತ್ಯ ಬಹಿರಂಗವಾಗುತ್ತೆ. ಕುಮಾರಸ್ವಾಮಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ತಾವೇ ಶರಣಗೌಡನನ್ನು ಕಳಿಸಿ ರೆಕಾರ್ಡ್ ಮಾಡಿಸಿದ್ದಾರೆ. ನಮ್ಮ ಬಳಿಯೂ ಆಡಿಯೋ, ವಿಡಿಯೋ ಇದೆ. ಕುಮಾರಸ್ವಾಮಿಯವರು‌ ಬಿಜೆಪಿ ಶಾಸಕರಿಗೆ ಆಮಿಷದ ಒಡ್ಡಿರುವ ಆಡಿಯೋ ನಮ್ಮ ಬಳಿಯೂ ಇದೆ' ಎಂದಿದ್ದಾರೆ.

ಒಟ್ಟಾರೆಯಾಗಿ ಆಪರೇಷನ್ ಕಮಲದ ಈ ಆಡಿಯೋ ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನೇ ಹುಟ್ಟಿಸಿದೆ. ಆಡಿಯೋದಲ್ಲಿರುವಂತೆ ನಿಜಕ್ಕೂ ಯಡಿಯೂರಪ್ಪ ಸ್ಪೀಕರ್ ಗೆ ಹಣದ ಆಮಿಷ ಒಡ್ಡಿದ ವಿಚಾರವನ್ನು ಮಾತನಾಡಿದ್ದರಾ ಅಥವಾ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆಯಾ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.