Asianet Suvarna News Asianet Suvarna News

ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸೋಮವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

There is no pre election alliance with anyone says hd kumaraswamy gvd
Author
First Published Nov 29, 2022, 3:00 AM IST

ಚಿಕ್ಕಬಳ್ಳಾಪುರ/ ದೇವನಹಳ್ಳಿ (ನ.29): ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಸೋಮವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5 ಸಾವಿರ ರು.ವೃದ್ಧಾಪ್ಯ ವೇತನ ನೀಡಲಾಗುವುದು ಎಂದರು. ಒಕ್ಕಲಿಗರ ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ನಾನು ಜಾತಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. 

ನಾನು ಮುಖ್ಯಮಂತ್ರಿಯಾದರೆ, ಶ್ರೀಮಂತ, ಬಡವ ಎನ್ನುವುದರ ಆಧಾರದ ಮೇಲೆ ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಶಕ್ತಿ ಮೇಲೆ ಮೀಸಲಾತಿ ಒದಗಿಸುವ ಕೆಲಸ ಮಾಡುತ್ತೇನೆ ಎಂದರು. ಇದೇ ವೇಳೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರಕ್ಕೆ ಹಾಲಿ ಶಾಸಕ ಜೆಕೆ ಕೃಷ್ಣಾರೆಡ್ಡಿಯವರೇ ಮುಂದಿನ ಅಭ್ಯರ್ಥಿ ಎಂದು ಘೋಷಿಸಿದರು.

ಜೆಡಿಎಸ್‌ ಸರ್ಕಾರ ರಚನೆಗೆ ಒಂದು ಬಾರಿ ಬಹುಮತ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ನಂದಿಯಲ್ಲಿ ವಾಸ್ತವ್ಯ: ಭಾನುವಾರ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಅವರು ಗ್ರಾಮ ವಾಸ್ತವ್ಯ ಮಾಡಿದರು. ಸೋಮವಾರ ಬೆಳಗ್ಗೆ ನಂದಿಯ ಬೋಗನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ದೇಗುಲದ ಆವರಣದಲ್ಲಿ ಸಪ್ತಪದಿ ತುಳಿದ ನವ ದಂಪತಿಗಳಿಗೆ ಶುಭ ಹಾರೈಸಿದರು. ಬಳಿಕ, ಚಿಕ್ಕಬಳ್ಳಾಪುರ ಹೊರವಲಯದ ನಾಯನಹಳ್ಳಿಯಲ್ಲಿರುವ ಪರಮಶಿವಯ್ಯ ನೀರಾವರಿ ಗ್ರಂಥಾಲಯದ ಆವರಣದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. 

ಬಳಿಕ, ದೇವನಹಳ್ಳಿ ತಾಲೂಕಿನ ವಿವಿಧೆಡೆ ಯಾತ್ರೆಯಲ್ಲಿ ಸಾಗಿದರು. ದೇವನಹಳ್ಳಿಯಾದ್ಯಂತ ಆಯಾ ಭಾಗದಲ್ಲಿ ವಿಶೇಷವಾಗಿರುವ ಹಣ್ಣು-ಹಂಪಲು, ಉತ್ಪನ್ನಗಳಿಂದ ತಯಾರಿಸಿದ ಹಾರಗಳನ್ನು ಹಾಕಿ ಕುಮಾರಸ್ವಾಮಿಗೆ ಸ್ವಾಗತ ಕೋರಲಾಯಿತು. ಆವತಿಯಲ್ಲಿ ಹೂವಿನ ಹಾರ, 400 ಕೆಜಿಯ ಸೇಬಿನ ಹಾರ ಹಾಕಿದರೆ, ಕೋಡಗುರ್ಕಿಯಲ್ಲಿ ಮುಸುಕಿನ ಜೋಳದ ಹಾರ, ದೇವನಹಳ್ಳಿಯಲ್ಲಿ ಚಕ್ಕೋತ ಹಾರ, ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಹಾರ ಹಾಕಿ ಸನ್ಮಾನಿಸಲಾಯಿತು. ಬಳಿಕ, ದೇವನಹಳ್ಳಿಯ ಕೋರಮಂಗಲದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿ, ನಂತರ, ಹಾರೋಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳ ಜತೆ ಮಧ್ಯಾಹ್ನದ ಊಟ ಸೇವಿಸಿದರು. ಯಾತ್ರೆಗೆ ನಿಖಿಲ್‌ ಕುಮಾರಸ್ವಾಮಿ ಸಾಥ್‌ ನೀಡಿದರು. ಮಂಗಳವಾರ ಯಾತ್ರೆ ದೊಡ್ಡಬಳ್ಳಾಪುರ ತಾಲೂಕು ಪ್ರವೇಶಿಸಲಿದೆ.

ಏರಿಸಿರುವ ಮೀಸಲಾತಿ ಅನುಷ್ಠಾನಗೊಳಿಸಿ ಬೆನ್ನು ತಟ್ಟಿಕೊಳ್ಳಿ: ಪರಿಶಿಷ್ಟರ ಮೀಸಲಾತಿ ನಾವೇ ಹೆಚ್ಚಳ ಮಾಡಿದ್ದೇವೆಂದು ಬೆನ್ನು ತಟ್ಟಿಕೊಳ್ಳುತ್ತಿರುವ ಬಿಜೆಪಿ ನಾಯಕರು ಮೊದಲು ಏರಿಸಿರುವ ಮೀಸಲಾತಿಯನ್ನ ಕಾನೂನು ಬದ್ಧವಾಗಿ ಮೊದಲು ಅನುಷ್ಠಾನಗೊಳಿಸಿ ಬಳಿಕ ತಮ್ಮ ಬೆನ್ನು ತಟ್ಟಿಕೊಳ್ಳಿಯೆಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಚಿಕ್ಕಬಳ್ಳಾಪುರ ನಗರದ ಹೊರ ವಲಯದ ನಂದಿ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ 10ನೇ ಗ್ರಾಮ ವಾಸ್ತವ್ಯ ಮುಗಿದ ಬಳಿಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳದಲ್ಲಿ ಬಿಜೆಪಿ ಸರ್ಕಾರ ನಾಟಕ ಮಾಡುತ್ತಿದೆ ಎಂದರು.

ಬಿಜೆಪಿ ಸರ್ಕಾರ ಬಂದಾಗಲೇ ಗಡಿ ಗಲಾಟೆ: ಎಚ್‌.ಡಿ.ಕುಮಾರಸ್ವಾಮಿ

ಕೋಲಾರ ಚಿಕ್ಕಬಳ್ಳಾಪುರ ಭದ್ರಕೊಟೆ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಜೆಡಿಎಸ್‌ ಭದ್ರಕೋಟೆ. ಈ ಹಿಂದೆ ಎರಡು ಜಿಲ್ಲೆಗಳಲ್ಲಿ 11 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿದೆ. ಈ ಬಾರಿಯು ಜನರ ನಾಡಮಿಡಿತ ನಮ್ಮ ಪರವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ 100 ದಿನಗಳ ಪಂಚರತ್ನ ರಥಯಾತ್ರೆಗೆ ಬೇಕಾದ ಮಾನಸಿಕವಾದ ನೈತಿಕ ಸ್ಥೆರ್ಯವನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ 10 ದಿನಗಳ ಪಂಚರತ್ನ ರಥಯಾತ್ರೆಯು ನನಗೆ ಕೊಟ್ಟಿದೆ ಎಂದರು. ನಾನು ಎರಡನೇ ಬಾರಿಗೆ ಸಿಎಂ ಆಗಿದ್ದಾಗಲೇ ಕೆಸಿ ವ್ಯಾಲಿ ಹಾಗೂ ಎಚ್‌ಎನ್‌ ವ್ಯಾಲಿ ನೀರಿನ ಯೋಜನೆಯನ್ನು ಮೂರು ಬಾರಿ ಶುದ್ಧೀಕರಿಸಿ ಹರಿಸುವಂತೆ ಸೂಚಿಸಿದ್ದೆ ಎಂದರು.

Follow Us:
Download App:
  • android
  • ios