ಆಧುನಿಕ ಅಭಿವೃದ್ಧಿಯೊಂದಿಗೆ ಕಾರ್ಮಿಕರ, ರೈತರ ಧಮನಿತರ ಹಿತ ಕಾಯುವುದೇ ಕಾಂಗ್ರೆಸ್‌ ಪಕ್ಷದ ಧ್ಯೇಯ ಎಂದು ಮಾಜಿ ಸಚಿವ ಎಚ್‌.ವೈ.ಮೇಟಿ ಹೇಳಿದರು.  

ಬಾಗಲಕೋಟೆ (ಏ.01): ಆಧುನಿಕ ಅಭಿವೃದ್ಧಿಯೊಂದಿಗೆ ಕಾರ್ಮಿಕರ, ರೈತರ ಧಮನಿತರ ಹಿತ ಕಾಯುವುದೇ ಕಾಂಗ್ರೆಸ್‌ ಪಕ್ಷದ ಧ್ಯೇಯ ಎಂದು ಮಾಜಿ ಸಚಿವ ಎಚ್‌.ವೈ.ಮೇಟಿ ಹೇಳಿದರು. ಅವರು ನವನಗರದ ಜಿಲ್ಲಾ ಕಾಂಗ್ರೆಸ್‌ ಸಭಾಭವನದಲ್ಲಿ ಶುಕ್ರವಾರ ಇಂಡಿಯನ್‌ ನ್ಯಾಶನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಹಾಗೂ ಕಾರ್ಮಿಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಕಾರ್ಮಿಕರಿಗೆ ಸಾಕಷ್ಟುಯೋಜನೆಗಳನ್ನು ಹಮ್ಮಿಕೊಂಡಿತ್ತು. ಆದರೆ ಬಿಜೆಪಿ ಸರ್ಕಾರ ಕಾರ್ಮಿಕರ ಹೆಸರಿನಲ್ಲಿ ಕಮಿಷನ್‌ ದಂಧೆ ನಡೆಸಿ ಸಿಕ್ಕು ಬಿದ್ದಿದ್ದಾರೆ. 

Add Asianetnews Kannada as a Preferred SourcegooglePreferred

ಇಂಥವರನ್ನು ಕಿತ್ತು ಹಾಕಿ ಕಾರ್ಮಿಕ ಬಂಧುಗಳು ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌ ಜಿ ನಂಜಯ್ಯನ ಮಠ ಮಾತನಾಡಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಕಾರ್ಮಿಕರ ಹಿತಕ್ಕೆ ಧಕ್ಕೆ ತರುವಂತ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ದೇಶದ ದೊಡ್ಡ ದೊಡ್ಡ ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಹಣವನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರ ಬಡವರ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ಇವರ ಆಡಳಿತದ ವೈಖರಿ ತೋರಿಸುತ್ತದೆ ಎಂದರು.

ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಸಿಎಂ ಬೊಮ್ಮಾಯಿ ವಿಶ್ವಾಸ

ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ವಿಭಾಗದ ಅಧ್ಯಕ್ಷ ರಾಜು ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕ ಸಂಘಟನೆಗಳು ಕಾಂಗ್ರೆಸ್‌ ಪಕ್ಷದ ಬೆನ್ನೆಲುಬು. ಅದಕ್ಕಾಗಿ ಎಲ್ಲರೂ ಗಟ್ಟಿಯಾಗಿ ಕಾಂಗ್ರೆಸ್‌ ಪಕ್ಷವನ್ನ ಬೆಂಬಲಿಸುವಂತೆ ಮಾಡಬೇಕು. ಇದಕ್ಕಾಗಿ ತಾವೆಲ್ಲರೂ ಶ್ರಮಿಸಿ ಮುಂದೆ ಒಳ್ಳೆಯ ದಿನಗಳು ನಮ್ಮನ್ನು ಕಾದಿವೆ ಎಂದರು. ಕಾಂಗ್ರೆಸ್‌ ಮುಖಂಡ ಆನಂದ ಜಿಗಜಿನ್ನಿ ಮಾತನಾಡಿ, ರಾಷ್ಟ್ರ, ರಾಜ್ಯದಲ್ಲಿ ಕಾರ್ಮಿಕರ ರೈತರ ಧಮನಿತರ ಹಿಂದುಳಿದವರ ಹಿತ ಕಾಯುವುದು ಕೇವಲ ಕಾಂಗ್ರೆಸ್‌ ಪಕ್ಷ. ಭಾರತೀಯ ಜನತಾ ಪಕ್ಷ ಕೇವಲ ಉಳ್ಳವರ ಪಕ್ಷವಾಗಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಜನಹಿತ ಕಲ್ಯಾಣ ಸಾಧ್ಯ ಎಂದರು.

ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ: ಜಗದೀಶ್‌ ಶೆಟ್ಟರ್‌ ಅಭಿಮತ

ಜಿಲ್ಲಾ ಅಧ್ಯಕ್ಷನಾಗಿ ಕಾಮೇಶ್‌ ಭೋವಿ ಹಾಗೂ ಪದಾಧಿಕಾರಿಗಳು ಪದಗ್ರಹಣ ಮಾಡಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡರುಗಳಾದ ದ್ಯಾಮಣ್ಣ ಗಾಳಿ, ಅಭಿಷೇಕ್‌ ತಳ್ಳಿಕೇರಿ, ಎಸ್‌.ಎನ್‌ ರಾಂಪುರ, ಸುರೇಶ ಜಿಂಗಾಡಿ, ಮಂಜುಳಾ ಭೂಸಾರೆ,ವೀರಣ್ಣ ಹುಂಡೆಕಾರ, ಜಯಶ್ರೀ ಗೋಳಬಾಳ, ಡಾ.ನದಾಫ, ಕಿರಣ ಚಂದುಕರ, ಹಣಮಂತ ಭಜಂತ್ರಿ ಉಪಸ್ಥಿತರಿದ್ದರು. ಆರಂಭದಲ್ಲಿ ಧರ್ಮು ಶಿರೊರ ಸ್ವಾಗತಿಸಿ ವಂದಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.