ಮಂಡ್ಯದಲ್ಲಿ ಸುಮಲತಾ ಹವಾ ಎದ್ದಿದ್ದು ಹೇಗೆ? ಇಲ್ಲಿದೆ ಕುತೂಹಲದ ಸಂಗತಿ
ಖ್ಯಾತ ನಟ ದಿ.ಅಂಬರೀಷ್ ಪತ್ನಿ ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರ ಹಿಂದಿದೆ ಕುತೂಹಲದ ಸಂಗತಿ. ಅದೇನು? ಇಲ್ಲಿದೆ ಮಾಹಿತಿ
ಬೆಂಗಳೂರು[ಫೆ.03]: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ರೆಬೆಲ್ ಸ್ಟಾರ್ ದಿ. ಅಂಬರೀಷ್ ಪತ್ನಿ ಸುಮಲತಾ ಅವರ ಹೆಸರನ್ನು ತೇಲಿಬಿಡಲಾಗಿರುವುದು ಏಕೆ?
ಇದು ಕಾಂಗ್ರೆಸ್ನ ಹಾಲಿ ಸಂಸದರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಅನ್ನು ಕಟ್ಟಿಹಾಕುವ ಕಾಂಗ್ರೆಸ್ನ ತಂತ್ರವೋ ಅಥವಾ ಮಂಡ್ಯ ಜಿಲ್ಲೆಗೆ ಪ್ರವೇಶ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ರನ್ನು ತಡೆಯುವ ಯತ್ನವೋ?
ಮಂಡ್ಯದಿಂದ ರಾಜಕೀಯ ಪ್ರವೇಶ ಮಾಡುವ ಇಂಗಿತವನ್ನು ಸುಮಲತಾ ವ್ಯಕ್ತಪಡಿಸುತ್ತಿದ್ದಂತೆಯೇ ರಾಜ್ಯ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿರುವ ಪ್ರಶ್ನೆಗಳಿವು. ವಾಸ್ತವವಾಗಿ ಸುಮಲತಾ ಅವರಿಗೆ ಚುನಾವಣಾ ರಾಜಕಾರಣದಲ್ಲಿ ಆಸಕ್ತಿಯಿದೆ. ಮಂಡ್ಯದಲ್ಲಿ ಅಂಬರೀಷ್ ನಿಧನದ ನಂತರ ಸಹಜವಾಗಿಯೇ ಅವರ ಕುಟುಂಬದ ಪರ ಅನುಕಂಪದ ಅಲೆ ಭರ್ಜರಿಯಾಗಿದೆ. ಹೀಗಾಗಿ ಸುಮಲತಾರನ್ನು ಕಾಂಗ್ರೆಸ್ನಿಂದ ಕಣಕ್ಕೆ ಇಳಿಸಿದರೆ ಗೆಲುವು ಸುಲಭ ಎಂಬುದು ನಿರ್ವಿವಾದ. ಸುಮಲತಾ ಇಲ್ಲದಿದ್ದರೆ ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರುತ್ತಲೇ ಇರಲಿಲ್ಲ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಜನಬೆಂಬಲ ಹೊಂದಿರುವ ಅಂಬರೀಷ್ ಪತ್ನಿಯನ್ನು ಕಣಕ್ಕೆ ಇಳಿಸಬಾರದು ಎಂದು ಗಟ್ಟಿಯಾಗಿ ಹೇಳುವ ಸ್ಥಿತಿಯಲ್ಲಿ ಜೆಡಿಎಸ್ ಕೂಡ ಇಲ್ಲ.
ಹೀಗಾಗಿಯೇ ಈ ಸಂದರ್ಭದ ಲಾಭವನ್ನು ಪಡೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಜೆಡಿಎಸ್ಸನ್ನು ಎರಡು ರೀತಿಯಿಂದ ಕಟ್ಟಿಹಾಕುವ ಪ್ರಯತಕ್ಕೆ ಮುಂದಾಗಿದ್ದಾರೆ.
1. ಜೆಡಿಎಸ್ ನಾಯಕರು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಲಿ ಸಂಸದರನ್ನು ಹೊಂದಿರುವ ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ. ಈ ಕ್ಷೇತ್ರಗಳು ಒಕ್ಕಲಿಗ ಪ್ರಾಧಾನ್ಯತೆ ಹೊಂದಿರುವ ಕಾರಣ ನೇರಾನೇರ ಜೆಡಿಎಸ್ನ ಈ ಬೇಡಿಕೆಯನ್ನು ತಳ್ಳಿಹಾಕುವ ಸ್ಥಿತಿಯಲ್ಲೂ ಕಾಂಗ್ರೆಸ್ ಇರಲಿಲ್ಲ. ಜೆಡಿಎಸ್ನ ಇಂತಹ ಆಗ್ರಹಕ್ಕೆ ಕಡಿವಾಣ ಹಾಕಲು ಸುಮಲತಾ ರಾಜಕೀಯ ಪ್ರವೇಶ ಕಾಂಗ್ರೆಸ್ಗೆ ಉತ್ತಮ ಅಸ್ತ್ರವಾಗಿ ದೊರಕಿದೆ. ಗೆಲ್ಲುವ ಮಾನದಂಡವೇ ಮುಖ್ಯವಾದರೆ ಸುಮಲತಾ ಅವರು ಜೆಡಿಎಸ್ನ ಭದ್ರಕೋಟೆಯೆನಿಸಿದ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ನಿಂದಲೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕು ಎಂದು ವಾದಿಸಲು ಕಾಂಗ್ರೆಸ್ಗೆ ಅವಕಾಶ ದೊರಕಿದೆ. ಜೆಡಿಎಸ್ ಮಂಡ್ಯ ತನಗೆ ಬೇಕೇಬೇಕು ಎಂದು ಹಟಕ್ಕೆ ಬಿದ್ದರೆ ಆಗ ಕಾಂಗ್ರೆಸ್ನ ಹಾಲಿ ಸಂಸದರ ಕ್ಷೇತ್ರಗಳನ್ನು ಗಟ್ಟಿಧ್ವನಿಯಲ್ಲಿ ಕೇಳಲು ಆಗುವುದಿಲ್ಲ.
2. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಮಂಡ್ಯದಿಂದ ಸ್ಪರ್ಧಿಸುವುದನ್ನು ತಪ್ಪಿಸುವ ಪ್ರಯತ್ನ. ಕುತೂಹಲಕಾರಿ ಸಂಗತಿಯೆಂದರೆ, ಜೆಡಿಎಸ್ನ ಮಂಡ್ಯ ಜಿಲ್ಲೆಯ ಪ್ರಮುಖ ನಾಯಕರೇ ಇದಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಬೆಂಬಲ ಇರುವುದರಿಂದಲೇ ಸುಮಲತಾ ಅವರಿಗೂ ಸ್ಪರ್ಧಿಸುವ ಉಮೇದಿ ಬಂದಿದೆ ಎಂಬುದು ಕಾಂಗ್ರೆಸ್ ನಾಯಕರ ಅಂಬೋಣ.
ಅಷ್ಟೇ ಅಲ್ಲ, ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕು ಎಂಬ ನಿರ್ಧಾರವಾದರೂ ಕೂಡ ಸುಮಲತಾ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಪ್ರಯತ್ನ ಸಹ ನಡೆಯಲಿದೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ, ನಿಖಿಲ್ ಮಂಡ್ಯ ಜಿಲ್ಲೆ ರಾಜಕಾರಣ ಪ್ರವೇಶ ಮಾಡುವುದು ಕಾಂಗ್ರೆಸ್ಸಿಗರಿಗಷ್ಟೇ ಅಲ್ಲ ಸ್ಥಳೀಯ ಜೆಡಿಎಸ್ ನಾಯಕರಿಗೂ ಬೇಕಿಲ್ಲ ಎಂದೇ ಹೇಳಲಾಗುತ್ತಿದೆ.
ಹಾಸನ ಮೂಲದ ದೇವೇಗೌಡರ ಕುಟುಂಬ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರವೇಶದಿಂದ ಈಗಾಗಲೇ ರಾಮನಗರ ಜಿಲ್ಲೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈಗ ತರುಣ ನಿಖಿಲ್ ಮಂಡ್ಯ ಜಿಲ್ಲೆಯ ರಾಜಕಾರಣ ಪ್ರವೇಶ ಮಾಡಿದರೆ ಮುಂದಿನ ಮೂರ್ನಾಲ್ಕು ದಶಕಗಳ ಕಾಲ ಸ್ಥಳೀಯ ಜೆಡಿಎಸ್ ನಾಯಕರಿಗೆ ರಾಜಕಾರಣ ಮಾಡಲು ಅವಕಾಶವೇ ಇಲ್ಲದಂತಾಗುತ್ತದೆ. ಹೀಗಾಗಿ ಅವರು ಪರೋಕ್ಷವಾಗಿ ಸುಮಲತಾ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಮೈತ್ರಿಯ ಚೌಕಾಸಿ ನಡೆಯುವಾಗ ಸುಮಲತಾ ವಿಚಾರವನ್ನು ಮುಂದಿಟ್ಟುಕೊಂಡು ಒಂದಷ್ಟುಲಾಭ ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಟಿಕೆಟ್ ಚರ್ಚೆ ಆಗಿಲ್ಲ
ಯಾವ್ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಅದೇ ರೀತಿಯಲ್ಲಿ ಮಂಡ್ಯದಲ್ಲಿ ಲೋಕಸಭಾ ಟಿಕೆಟ್ ವಿಚಾರದ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ್ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬುದನ್ನು ನೋಡಿಕೊಂಡು ಟಿಕೆಟ್ ಹಂಚಿಕೆ ಮಾಡಲಾಗುವುದು.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
-ಎಸ್.ಗಿರೀಶ್ ಬಾಬು