ಸಂವಿಧಾನ ಬದಲಾಯಿಸುವ ಅಗತ್ಯವಿದೆ ಎಂದ ತೆಲಂಗಾಣ ಮುಖ್ಯಮಂತ್ರಿನೀವು ಆಡಿದ ಮಾತನ್ನು ವಾಪಸ್ ತೆಗೆದುಕೊಳ್ಳಿ ವಿಪಕ್ಷಗಳ ಎಚ್ಚರಿಕೆಕೆಸಿ ಚಂದ್ರಶೇಖರ್ ರಾವ್ ಮಾತಿಗೆ ವ್ಯಾಪಕ ಖಂಡನೆ
ಹೈದರಾಬಾದ್ (ಫೆ. 4): ಹಿಂದೊಮ್ಮೆ ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಆಡಿದ ಯಾವುದೋ ಮಾತಿನಲ್ಲಿ ಸಂವಿಧಾನಕ್ಕೆ ಬದಲಾವಣೆ ತರುತ್ತೇವೆ ಎನ್ನುವ ಸಾರಾಂಶ ಇದ್ದ ಕಾರಣಕ್ಕಾಗಿ ಇಡೀ ದೇಶದಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಅವರ ಪ್ರತಿಕೃತಿ ದಹನ, ದಲಿತ ಸಂಘಟನೆಗಳ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು ಮಾತ್ರವಲ್ಲದೆ ಅವರ ಮಾತುಗಳ ಬಗ್ಗೆ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. ಆದರೆ, ದೇಶದ ಸಂವಿಧಾನ ಬಳಸಿಕೊಂಡೇ ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ವ್ಯಕ್ತಿ ನೇರವಾಗಿ ಪತ್ರಿಕಾಗೋಷ್ಠಿಯಲ್ಲಿಯೇ ಭಾರತದ ಸಂವಿಧಾನ (Indian Constitution )ಬದಲಾಗಬೇಕು ಎನ್ನುವ ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಭಟನೆಯಾಗಲಿ, ರಾಷ್ಟ್ರನಾಯಕರ ಖಂಡನೆಯಾಗಲಿ ಈವರೆಗೂ ವ್ಯಕ್ತವಾಗಿಲ್ಲ.
ಫೆಬ್ರವರಿ 1 ರಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ (Telangana Chief Minister K Chandrasekhar Rao ), ಭಾರತವು ಜನರ ನಿರೀಕ್ಷೆಗಳನ್ನು ಪೂರೈಸಲು ಮತ್ತು ದೇಶವು ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಗತಿ ಸಾಧಿಸಲು ತನ್ನ ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎಂದು ಹೇಳಿದರು. ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ದಯನೀಯವಾಗಿ ವಿಫಲವಾಗಿವೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಗುಣಾತ್ಮಕ ಬದಲಾವಣೆಗೆ ಕರೆ ನೀಡಿದರು ಮತ್ತು ಬದಲಾವಣೆಯನ್ನು ತರಲು ಸಾಧ್ಯವಿರುವ ರೀತಿಯಲ್ಲಿ ಕೊಡುಗೆ ನೀಡುವುದಾಗಿ ಘೋಷಿಸಿದರು.
ನೀವು ಹೇಳಿದ "ಬದಲಾವಣೆ" ಪದದ ಅರ್ಥ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಎನ್ನುವ ಪ್ರಶ್ನೆಗೆ ವಿವರಣೆ ನೀಡಿದ ಕೆಸಿಆರ್ (KCR), "ಈಗಿನ ಈ ವ್ಯವಸ್ಥೆಯಲ್ಲಿ ಏನೂ ಬದಲಾಗೋದಿಲ್ಲ. ಭಾರತದ ಹೊಸ ಸಂವಿಧಾನವನ್ನು ನಾವು ರಚಿಸಬೇಕಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ತಮಗೆ ಅಗತ್ಯವಿದೆ ಎಂದಾಗ ಹೊಸ ಸಂವಿಧಾನವನ್ನು ಸಂಪೂರ್ಣವಾಗ ರಚನೆ ಮಾಡಿ, ಹೊಸ ಸಂವಿಧಾನವನ್ನು ಪಾಲಿಸಿಕೊಂಡು ಬಂದಿವೆ. ಈಗ ನಮ್ಮ ದೇಶಕ್ಕೆ ಇರುವ ಅಗತ್ಯವೇನೆಂದರೆ ಅದು ಹೊಸ ಸಂವಿಧಾನ, ಹೊಸ ಚಿಂತನೆ, ಹೊಸ ದಿಕ್ಕು, ಹೊಸ ಸಂವಿಧಾನ ಇದೇ ನಮ್ಮ ಘೋಷಣೆ. ನೀವು ಕಾದು ನೋಡ್ತೀರಿ" ಎಂದು ಹೇಳುವ ಮೂಲಕ 70 ವರ್ಷದ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ (Baba Saheb Ambedkar)ತಮ್ಮ ಶ್ರಮದಿಂದ ಸಿದ್ಧಮಾಡಿದ ಭಾರತೀಯ ಸಂವಿಧಾನವನ್ನು ಬದಲಾವಣೆ ಮಾಡುವ ಮಾತನಾಡಿದ್ದಾರೆ.
"ಭಾರತ ಕೂಡ ತನ್ನ ಸಂವಿಧಾನವನ್ನು 80ಕ್ಕೂ ಅಧಿಕ ಬಾರಿ ತಿದ್ದುಪಡಿ ಮಾಡಿದೆ. ಇಷ್ಟೆಲ್ಲಾ ಆಗಿದ್ದರೂ ಕುಡಿಯುವ ನೀರು, ನೀರಾವರಿ ವಿದ್ಯುತ್ ಸೇರಿದಂತೆ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ಇನ್ನೆಷ್ಟು ದಿನ ಮುಂದುವರಿಯಬೇಕು' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
'ಸಂವಿಧಾನವನ್ನು ರದ್ದು ಮಾಡಲು ಕೈ ಹಾಕಿದ್ರೆ ರಕ್ತಪಾತ ಆಗುತ್ತೆ, ಹುಷಾರ್'!
ಭಾರತವನ್ನು ಶಕ್ತಿಶಾಲಿಯಾಗಿಸಲು ಇದೊಂದೇ ದಾರಿ ಎಂದು ಹೇಳಿದ ಅವರು, ಈ ಅಂಶದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು. “ನಾನು 50 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಶಾಸಕ, ಸಂಸದ ಮತ್ತು ಸಿಎಂ ಆಗಿರುವುದು ಪ್ರಸ್ತುತ ಭಾರತದ ಸಂವಿಧಾನದಿಂದ ಮಾತ್ರ. ಆದರೂ, ದೇಶದಲ್ಲಿ ಗುಣಾತ್ಮಕ ಬದಲಾವಣೆ ತರಲು ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎಂದು ನಾನು ಬಲವಾಗಿ ಸಲಹೆ ನೀಡುತ್ತೇನೆ" ಎಂದು ಅವರು ಹೇಳಿದರು.
Kalaburagi: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನಕ್ಕೆ ಆಪತ್ತು: ಖರ್ಗೆ ಆತಂಕ
ತೆಲಂಗಾಣದಲ್ಲಿ ಟೀಕೆ: ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತು ಸಂಸದ ಎ ರೇವಂತ್ ರೆಡ್ಡಿ ಅವರು ಕೆಸಿಆರ್ ಅವರ ಹೇಳಿಕೆಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ದೃಷ್ಟಿಕೋನಗಳ ಪ್ರತಿಬಿಂಬವಾಗಿದೆ ಎಂದು ಅವರು ಆರೋಪಿಸಿದರು, ಅವರು ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಇತರ ಸೌಲಭ್ಯಗಳನ್ನು ಕಸಿದುಕೊಳ್ಳಲು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ತೆಲಂಗಾಣ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಅವರು ಕೆಸಿಆರ್ ಅವರ ಹೇಳಿಕೆಗಳು ತಮ್ಮದೇ ಆದ ಸಂವಿಧಾನವನ್ನು ಪರಿಚಯಿಸುವ ಅವರ ಕ್ರೂರ ಉದ್ದೇಶವನ್ನು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ. "ಕೆಸಿಆರ್ ಅವರು ಬೇಷರತ್ ಕ್ಷಮೆಯಾಚಿಸಬೇಕು ಮತ್ತು ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು" ಎಂದು ದಲಿತ ಸಂಘಟನೆ ತೆಲಂಗಾಣ ಭೀಮ್ ಆರ್ಮಿ ರಾಜ್ಯ ಕಾರ್ಯದರ್ಶಿ ವಾಸಲಾ ಶ್ರೀನಿವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
