Asianet Suvarna News Asianet Suvarna News

ಬಿಜೆಪಿಯಲ್ಲಿ ಭುಗಿಲೆದ್ದ ‘ನಿವೃತ್ತಿ’ ವಿವಾದ: ಯಡಿಯೂರಪ್ಪ Vs ಸದಾನಂದಗೌಡ

ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿರುವ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಅವರ ನಡುವೆ ವಾಕ್ಸಮರ ನಡೆದಿದೆ. 

Talks Fight between BS Yediyurappa and DV Sadananda Gowda gvd
Author
First Published Nov 10, 2023, 4:45 AM IST

ಬೆಂಗಳೂರು (ನ.10): ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿರುವ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಅವರ ನಡುವೆ ವಾಕ್ಸಮರ ನಡೆದಿದೆ. ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಸದಾನಂದಗೌಡ ಅವರಿಗೆ ಪಕ್ಷದ ಕೇಂದ್ರ ಘಟಕ ಸೂಚನೆ ನೀಡಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಸದಾನಂದಗೌಡ, ಇದೊಂದು ಅಪ್ಪಟ ಸುಳ್ಳು. ವಯೋಸಹಜ ಕಾರಣದಿಂದ ಯಡಿಯೂರಪ್ಪ ಹಾಗೆ ಹೇಳಿದ್ದಾರೆ ಎಂದು ಹರಿಹಾಯ್ದಿದ್ದಾರೆ. 

ಉಭಯ ನಾಯಕರ ಈ ಹೇಳಿಕೆಗಳಿಂದ ಪಕ್ಷದಲ್ಲಿ ಮತ್ತೊಂದು ಸುತ್ತಿನ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆಗಬಹುದು. ಆಡಳಿತಾರೂಢ ಕಾಂಗ್ರೆಸ್ಸಿನ ಬಾಯಿಗೆ ಆಹಾರವಾಗಬಹುದು ಎಂಬ ಆತಂಕ ಬಿಜೆಪಿ ಪಾಳೆಯದಲ್ಲಿ ವ್ಯಕ್ತವಾಗಿದೆ. ವಿವಿಧ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಹಿರಿಯ ನಾಯಕರು ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು ಎಂಬ ಅಭಿಪ್ರಾಯವೂ ಹೊರಹೊಮ್ಮುತ್ತಿದೆ. ಇದಕ್ಕೆ ಕಾರಣವಾಗಿದ್ದು ಸದಾನಂದಗೌಡರು ಬುಧವಾರ ಹಾಸನದಲ್ಲಿ ತಾವು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ನೀಡಿದ ಹೇಳಿಕೆ. 

ರಾಜ್ಯಕ್ಕೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸ್ಪಂದಿಸಲಿದೆ: ಶಾಸಕ ವಿಜಯೇಂದ್ರ

ಇದಕ್ಕೂ ಮೊದಲೂ ಗೌಡರು ಹಲವು ಬಾರಿ ತಾವು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಆದರೆ, ಪಕ್ಷದ ಕೇಂದ್ರ ನಾಯಕತ್ವದ ಸೂಚನೆ ಇದೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ಹೊಸ ತಿರುವು ನೀಡಿದಂತಾಗಿದೆ. ಸದಾನಂದಗೌಡರ ನಿವೃತ್ತಿ ಹೇಳಿಕೆ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಂದಿನ ಯಾವುದೇ ಚುನಾವಣೆಯಲ್ಲಿ ನಿಲ್ಲದಂತೆ ಸದಾನಂದಗೌಡರಿಗೆ ಪಕ್ಷದ ಕೇಂದ್ರ ಘಟಕ ನೇರವಾಗಿ ಸೂಚನೆ ಕೊಟ್ಟಿದೆ. ಇನ್ನು ಮುಂದೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಅವರಿಗೆ ಹೇಳಿದೆ ಎಂದು ತಿಳಿಸಿದರು. 

ಇದರ ಬೆನ್ನಲ್ಲೇ ಸಂಜೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡರು, ಯಡಿಯೂರಪ್ಪ ಅವರು ಹೇಳಿದ್ದು ಅಪ್ಪಟ ಸುಳ್ಳು. ನನಗೆ ಪಕ್ಷದ ಯಾವುದೇ ರಾಷ್ಟ್ರೀಯ ನಾಯಕರು ಕೂಡ ಈ ಬಗ್ಗೆ ಮಾತನಾಡಿಲ್ಲ. ಯಾವ ಸೂಚನೆಯನ್ನೂ ನೀಡಿಲ್ಲ. ಇದು ಕಪೋಲಕಲ್ಪಿತ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇದಕ್ಕೆ ಯಡಿಯೂರಪ್ಪ ಅವರ ವಯೋಸಹಜತೆ ಕಾರಣ. ಜತೆಗೆ ಅವರಿಗೆ ಹೇಳಿದ್ದನ್ನು ಮತ್ತೊಬ್ಬರಿಗೂ ಹೇಳಿರಬಹುದು ಎಂಬ ಊಹೆಯಿಂದ ಈ ರೀತಿ ಹೇಳಿಕೆ ನೀಡಿರಬಹುದು. ಯಡಿಯೂರಪ್ಪ ಅವರು ಇಷ್ಟು ದೊಡ್ಡ ರಾಜಕಾರಣಿಯಾಗಿ ಇಂಥ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಹರಿಹಾಯ್ದರು. ಈ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಮಾತನಾಡುವಿರಾ ಎಂಬ ಪ್ರಶ್ನೆಗೆ, ಇಲ್ಲ. ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ರಾಜಕೀಯ ನಿವೃತ್ತಿಗೆ ಯಾರ ಒತ್ತಡವೂ ಇಲ್ಲ: ಇದಕ್ಕೂ ಮೊದಲು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ನನಗೆ ಯಾವುದೇ ರಾಜಕೀಯ ಅಧಿಕಾರದ ಆಸೆ ಇಲ್ಲ. ಪಕ್ಷ ಎಲ್ಲವನ್ನೂ ಕೊಟ್ಟಿದೆ. ಯುವಕರಿಗೂ ಅವಕಾಶ ಸಿಗಬೇಕು. ಸಾಯುವಾಗಲೂ ನನ್ನ ಶವಕ್ಕೆ ಬಿಜೆಪಿ ಬಟ್ಟೆ ಹಾಕಬೇಕೆಂಬ ರಾಜನೀತಿಯನ್ನು ನಾನು ಒಪ್ಪುವುದಿಲ್ಲ. ನನ್ನ ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೂವತ್ತು ವರ್ಷದಿಂದ ಪಕ್ಷದೊಳಗೆ ಎಲ್ಲಾ ಸ್ಥಾನ-ಮಾನಗಳನ್ನು ನೋಡಿದ್ದೇನೆ. 

ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರದಲ್ಲಿ ಏಳು ವರ್ಷ ಸಚಿವನಾಗಿ ಪ್ರಧಾನಿ ಮೋದಿ ಜೊತೆ ಕಾರ್ಯನಿರ್ವಹಿಸಿರುವೆ. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೇನೆ. ರಾಜ್ಯಾಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ಇನ್ನೇನು ಬೇಕು. ಮನುಷ್ಯನಾದವನಿಗೆ ಸ್ವಲ್ಪ ಇತಿ-ಮಿತಿ ಇರಬೇಕಲ್ಲವೇ ಎಂದರು. ರಾಜಕಾರಣಕ್ಕೆ ಪ್ರವೇಶಿಸಿದ 25 ವರ್ಷಗಳ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕು ಎಂದುಕೊಂಡಿದ್ದೆ. ಏಕೆಂದರೆ, 40 ವರ್ಷಕ್ಕಿಂತ ಕೆಳಗಿನ ಯುವಜನರು ದೇಶದಲ್ಲಿ ಶೇ.60 ರಷ್ಟಿದ್ದಾರೆ. 

ಅವರಿಗೂ ಎಲ್ಲ ಕ್ಷೇತ್ರದಲ್ಲಿ ಅವಕಾಶ ದೊರಕಬೇಕು. ಸಾಯುವವರೆಗೆ ರಾಜಕಾರಣದಲ್ಲಿರಬೇಕೆಂಬ ಆಸೆ ನನಗಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು. ಪಕ್ಷದ ನಾಯಕರ ಒತ್ತಡವಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ವರ್ಧೆ ಮಾಡಿದ್ದೆ. ಆರು ತಿಂಗಳ ಮೊದಲು ಪ್ರಕಟಿಸಿದರೆ ಪಕ್ಷಕ್ಕೆ ಹೊಸಬರನ್ನು ಹುಡುಕಲು ಅನುಕೂಲ ಆಗಲಿದೆ. ಹಾಗಾಗಿ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದೆ. ಪಕ್ಷ ಚಿರತೆ ಹಿಡಿಯುವ ಕೆಲಸ ಮಾಡು ಎಂದರೂ ನಾನು ಮಾಡಲು ಸಿದ್ಧ ಎಂದು ಸದಾನಂದಗೌಡ ತಿಳಿಸಿದರು.

ಯಡಿಯೂರಪ್ಪ ಹೇಳಿದ್ದೇನು?: ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಪಕ್ಷದ ಕೇಂದ್ರ ಘಟಕ ನೇರವಾಗಿ ಸೂಚನೆ ಕೊಟ್ಟಿದೆ. ಇನ್ನು ಮುಂದೆ ಪಕ್ಷದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಇರಲು ಅವರಿಗೆ ಹೇಳಿದೆ.

ರಾಜ್ಯದಲ್ಲಿರುವುದು ಸಿದ್ದರಾಮಯ್ಯ, ಡಿಕೆಶಿಯವರ ಸಮ್ಮಿಶ್ರ ಸರ್ಕಾರ: ಗೋವಿಂದ ಕಾರಜೋಳ ಲೇವಡಿ

ಡಿವಿಎಸ್‌ ಹೇಳಿದ್ದೇನು?: ಯಡಿಯೂರಪ್ಪ ಹೇಳಿದ್ದು ಅಪ್ಪಟ ಸುಳ್ಳು. ಯಾವುದೇ ರಾಷ್ಟ್ರೀಯ ನಾಯಕರು ಸೂಚನೆ ಕೊಟ್ಟಿಲ್ಲ. ವಯೋಸಹಜತೆಯಿಂದ ಯಡಿಯೂರಪ್ಪ ಆ ರೀತಿ ಹೇಳಿರಬಹುದು. ಇಷ್ಟು ದೊಡ್ಡ ರಾಜಕಾರಣಿಯಾಗಿ ಬಿಎಸ್‌ವೈ ಇಂಥ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!: ಡಿ.ವಿ.ಸದಾನಂದಗೌಡ ಸೇರಿದಂತೆ ರಾಜ್ಯದ 12ಕ್ಕೂ ಹೆಚ್ಚು ಬಿಜೆಪಿ ಸಂಸದರಿಗೆ ಮತ್ತೊಮ್ಮೆ ಸ್ಪರ್ಧಿಸಲು ಟಿಕೆಟ್‌ ಸಿಗುವ ಸಾಧ್ಯತೆ ಇಲ್ಲ ಎಂದು ‘ಕನ್ನಡಪ್ರಭ’ ಜೂನ್‌ 2ರಂದೇ ವರದಿ ಮಾಡಿತ್ತು. 

Follow Us:
Download App:
  • android
  • ios