ಚುನಾವಣೆ ಸಮೀಪಿಸುತ್ತಿದ್ದಂತೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಪರಸ್ಪರ ವಾಗ್ವಾದ ನಡೆದು, ಇಬ್ಬರೂ ಶುಕ್ರವಾರ ಪೊಲೀಸ್‌ ದೂರು ನೀಡಿದ್ದಾರೆ. ಪಿಡಿಒ ಒಬ್ಬರ ವರ್ಗಾವಣೆ ಕುರಿತು ಮಾಜಿ ಶಾಸಕ ಸತೀಶ ಸೈಲ್‌ ಜಿಪಂ ಸಿಇಒ ಕಚೇರಿಗೆ ಬಂದಾಗ ಅಲ್ಲಿಯೇ ಇದ್ದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸೈಲ್‌ ನಡುವೆ ವಾಕ್ಸಮರ ನಡೆದಿದೆ.

ಕಾರವಾರ (ಮಾ.4) : ಚುನಾವಣೆ ಸಮೀಪಿಸುತ್ತಿದ್ದಂತೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಪರಸ್ಪರ ವಾಗ್ವಾದ ನಡೆದು, ಇಬ್ಬರೂ ಶುಕ್ರವಾರ ಪೊಲೀಸ್‌ ದೂರು ನೀಡಿದ್ದಾರೆ.

ಪಿಡಿಒ ಒಬ್ಬರ ವರ್ಗಾವಣೆ ಕುರಿತು ಮಾಜಿ ಶಾಸಕ ಸತೀಶ ಸೈಲ್‌ ಜಿಪಂ ಸಿಇಒ ಕಚೇರಿಗೆ ಬಂದಾಗ ಅಲ್ಲಿಯೇ ಇದ್ದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸೈಲ್‌ ನಡುವೆ ವಾಕ್ಸಮರ ನಡೆದಿದೆ.

ಈ ನಡುವೆ ಕಾಂಗ್ರೆಸ್‌ ವಕ್ತಾರ ಶಂಭು ಶೆಟ್ಟಿ, ಮಾಜಿ ಶಾಸಕರು ಮದ್ಯ ಸೇವಿಸಿ ಬಂದಿದ್ದಾರೆ ಎಂದು ಶಾಸಕರು ಅಪಹಾಸ್ಯ ಮಾಡಿದ್ದಾರೆ. ಈ ವೇಳೆ ಕುಡಿಯಲು ನಿಮ್ಮ ತಂದೆ ಹಣ ಕೊಡುತ್ತಾರೆಯೇ ಎಂದು ಸೈಲ್‌ ಕೇಳಿದರು. ಶಾಸಕರು ಪೇಪರ್‌ವೇಟ್‌ ಹಿಡಿದು ಮುಂದೆ ಬಂದಿದ್ದರು. ನಂತರ ಅವರ ಸಂಗಡಿಗರು ತಡೆದರು ಎಂದು ಸುದ್ದಿಗೋಷ್ಠಿ ನಡೆಸಿ ಆಪಾದಿಸಿದರು.

ಇತಿಹಾಸದಲ್ಲೇ ಆಗದ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗುತ್ತಿದೆ: ರೂಪಾಲಿ ನಾಯ್ಕ್

ಶಾಸಕಿ ರೂಪಾಲಿ ನಾಯ್ಕ ಪ್ರತಿಕ್ರಿಯಿಸಿ, ಜಿಪಂ ಸಿಇಒ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್‌ ಅವರೇ ದರ್ಪ ಮೆರೆದಿದ್ದಾರೆ. ಚುನಾವಣೆಯಲ್ಲಿ ಸೋತ ನಂತರವೂ ಅವರು ಅಧಿಕಾರದಲ್ಲಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಅವರು ನಮ್ಮ ತಂದೆಯ ಹೆಸರನ್ನು ಹೇಳಿ ತಮ್ಮನ್ನು ನಿಂದಿಸಿದ್ದಾರೆ. ಹೆಣ್ಣು ಮಕ್ಕಳನ್ನು ನಿಂದಿಸುವುದು ಯಾರಿಗೂ ಶೋಭೆ ತರುವುದಿಲ್ಲ. ಇನ್ನು ಮುಂದೆ ಯಾರಿಗೂ ಹೀಗಾಗಬಾರದು. ಅವರು ದರ್ಪದಿಂದ ಮಾತನಾಡಿರುವುದು ಕಾಂಗ್ರೆಸ್‌ ಸಂಸ್ಕೃತಿಯನ್ನು ಬಿಂಬಿಸಿದೆ ಎಂದರು.

ಕಾರವಾರದಲ್ಲಿ ಹಾಲಿ-ಮಾಜಿ ಶಾಸಕರ ಜಟಾಪಟಿ, ರೂಪಾಲಿ ವಿರುದ್ಧ ಸತೀಶ್ ಸೈಲ್ ಹಲ್ಲೆ ಆರೋಪ

ಈ ನಡುವೆ ಘಟನೆಯ ಕುರಿತು ನಗರ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ನೀಡಲಾಗಿದೆ. ದೂರು ನೀಡುವಾಗಲೂ ಇತ್ತಂಡದವರೂ ಒಟ್ಟಿಗೇ ಬಂದರು. ದೂರು ಸ್ವೀಕರಿಸುವಂತೆ ಸೈಲ್‌ ಪಟ್ಟು ಹಿಡಿದು ತಮ್ಮ ಮೇಲೆ ಶಾಸಕರು ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಿದರೆ, ಸೈಲ್‌ ತಮ್ಮನ್ನು ಅವಾಚ್ಯವಾಗಿ ನಿಂದಿಸಿದರು ಎಂದು ರೂಪಾಲಿ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.