ಕಾಡುಗೊಲ್ಲ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡದ ಬಗ್ಗೆ ಹಾಗೂ ಎಸ್.ಟಿ.ಮೀಸಲಾತಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ವಿಧಾನಸಭೆ (ಮಾ.07): ಕಾಡುಗೊಲ್ಲ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡದ ಬಗ್ಗೆ ಹಾಗೂ ಎಸ್.ಟಿ.ಮೀಸಲಾತಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಚರ್ಚೆ ಬಳಿಕ ಕಾಡು ಗೊಲ್ಲ ಸಮುದಾಯದವರಿಗೆ ರಾಜ್ಯದಲ್ಲಿ ಸೂಕ್ತ ಜಾತಿ ಪ್ರಮಾಣಪತ್ರ ನೀಡಲು ತಕ್ಷಣ ಆದೇಶ ನೀಡಲಾಗುವುದು. ಜತೆಗೆ ಎಸ್.ಟಿ. ಮೀಸಲಾತಿಗೆ ಸೇರಿಸುವ ಕುರಿತು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, ನಮ್ಮ ಕ್ಷೇತ್ರದಲ್ಲಿ 52 ಗ್ರಾಮಗಳಲ್ಲಿ ಕಾಡು ಗೊಲ್ಲರಿದ್ದಾರೆ.
ಅವರಿಗೆ ಜಾತಿ ಪ್ರಮಾಣಪತ್ರ ದೊರೆಯುತ್ತಿಲ್ಲ. ಹೀಗಾಗಿ ಯಾವುದೇ ಸೌಲಭ್ಯಗಳು ದೊರೆಯದಂತಾಗಿದೆ. ಕಾಡುಗೊಲ್ಲ ಅಭಿವೃದ್ದಿ ನಿಗಮ ಮಾಡಿಯೂ ವ್ಯರ್ಥ ಎಂಬಂತಾಗಿದೆ ಎಂದು ಹೇಳಿದರು. ಈ ವೇಳೆ ಬಿಜೆಪಿ ಧೀರಜ್ ಮುನಿರಾಜು, ಕಾಡುಗೊಲ್ಲ ಸಮುದಾಯಕ್ಕೆ ಎಸ್.ಟಿ.ಮೀಸಲಾತಿಗೆ ಕೇಂದ್ರದ ಬಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರವು ಬುಡಕಟ್ಟು ಸಮುದಾಯ ಎಂದು ಸಾಬೀತುಪಡಿಸಲು ಕೆಲ ಅಂಶಗಳನ್ನು ಕೇಳಿದೆ. ಇದಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಕುಲ ಶಾಸ್ತ್ರೀಯ ಅಧ್ಯಯನ ನಡೆಸುತ್ತಿದ್ದು, ಕೂಡಲೇ ವರದಿ ಪಡೆದು ಕೇಂದ್ರಕ್ಕೆ ಕಳುಹಿಸಬೇಕು. ಜತೆಗೆ ಚಿತ್ರದುರ್ಗ, ತುಮಕೂರು ಮಾದರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕಾಡು ಗೊಲ್ಲ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಸಚಿವರು ತಪ್ಪು ಮಾಹಿತಿ ನೀಡಬೇಡಿ: ಎಸ್.ಟಿ. ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಗೊಲ್ಲರನ್ನು ಎಸ್ಟಿಗೆ ಸೇರಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಕಾಡು ಗೊಲ್ಲರ ಹೆಸರು ಕಳಿಸಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಟಿ.ಬಿ.ಜಯಚಂದ್ರ, ನಾನು ಕಾನೂನು ಸಚಿವನಾಗಿದ್ದಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಸದನದಲ್ಲಿ ತಪ್ಪು ಮಾಹಿತಿ ನೀಡಬೇಡಿ ಎಂದು ಹೇಳಿದರು. ಬಳಿಕ ಮಾಹಿತಿ ಸರಿಪಡಿಸಿಕೊಂಡ ಸಚಿವರು, ಕಾಡುಗೊಲ್ಲ ಸಮುದಾಯವನ್ನು ಎಸ್.ಟಿ.ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಅನುಮತಿ ನೀಡಿದರೆ ಅದರ ಆಧಾರದ ಮೇಲೆ ಗೊಲ್ಲ ಸಮುದಾಯಕ್ಕೂ ಎಸ್.ಟಿ.ಮೀಸಲಾತಿ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು.
ದೇವರ ವಿಷಯದಲ್ಲಿ ಬಿಜೆಪಿ ರಾಜಕೀಯ: ಸಚಿವ ಶಿವರಾಜ ತಂಗಡಗಿ
ಶಿವಾಜಿ ಹೆಸರಲ್ಲಿ ಕೇಸರಿಕರಣ ಸಲ್ಲ: ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಸೀಮಿತವಲ್ಲ. ಅವರ ಹೆಸರನ್ನು ಕೇಸರಿಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಬೇಸರ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಸಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿ, ಶಿವಾಜಿ ಮಹಾರಾಜರ ಆಡಳಿತ ಅವಧಿಯಲ್ಲಿ ಎಲ್ಲಾ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯ ಇತ್ತು. ಸರ್ವ-ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಇಂದು ಅವರ ಹೆಸರನ್ನು ಕೇಸರಿಕರಣಗೊಳಿಸುತ್ತಿರುವುದು ಸರಿಯಲ್ಲ. ಹೀಗಾಗಿ ಪ್ರತಿಯೊಬ್ಬರು ಶಿವಾಜಿ ಅವರ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
