ರಾಹುಲ್‌ ಯಾರು? ಎನ್ನುವುದನ್ನು ತೋರಿಸಿದೆ, ರಾಜ್ಯದಲ್ಲಿ ಪಾದಯಾತ್ರೆ ನಡೆಸಿದ ರಾಹುಲ್‌ಗೆ ಕರ್ನಾಟಕ ಆಭಾರಿ: ಸಿದ್ದರಾಮಯ್ಯ 

ಬೆಂಗಳೂರು(ಅ.24):  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಚಾರಿತ್ರ್ಯಹನನ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದವರಿಗೆ ಭಾರತ ಐಕ್ಯತಾ ಯಾತ್ರೆ ಪಾಠ ಕಲಿಸಿದೆ. ಸುಳ್ಳು, ವ್ಯವಸ್ಥಿತ ಅಪಪ್ರಚಾರ, ನಿಂದನೆಗಳ ಮೂಲಕ ರಾಹುಲ್‌ ಗಾಂಧಿ ಅವರನ್ನು ಟೀಕಿಸುತ್ತಿರುವವರಿಗೆ ರಾಹುಲ್‌ ಗಾಂಧಿ ಎಂದರೆ ಯಾರು? ಏನು? ಎನ್ನುವುದನ್ನು ಐಕ್ಯತಾ ಯಾತ್ರೆ ಪ್ರತ್ಯಕ್ಷವಾಗಿ ತೋರಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜವನ್ನು ಒಡೆಯುವ ಮೂಲಕವೇ ರಾಜಕೀಯ ಗೆಲುವು ಪಡೆಯುತ್ತಾ ಬಂದಿರುವ ಬಿಜೆಪಿಯ ವಿಚ್ಛಿದ್ರಕಾರಿ ಅಜೆಂಡಾಕ್ಕೆ ಪ್ರತಿಯಾಗಿ ಸಮಾಜವನ್ನು ಒಗ್ಗೂಡಿಸಬೇಕು ಎಂಬ ಅಜೆಂಡಾದೊಂದಿಗೆ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಯಾತ್ರೆ ಕೈಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಕರ್ನಾಟಕ ಆಭಾರಿಯಾಗಿದೆ. ರಾಹುಲ್‌ ಗಾಂಧಿ ಹೇಳಿದಂತೆ ಇದು ಪಕ್ಷದ ಕಾರ್ಯಕ್ರಮವಾಗಿರದೆ ಜನರ ಭವಿಷ್ಯದಲ್ಲಿ ಭರವಸೆ ಹುಟ್ಟಿಸುವ ಕಾರ್ಯಕ್ರಮ ಆಗಿದೆ ಎಂದಿದ್ದಾರೆ.

ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್‌

ಜಾತಿ, ಮತ, ಪಂಥ, ಪಕ್ಷಗಳ ಭೇದವನ್ನು ಮರೆತು ನಮ್ಮ ಜತೆ ಹೆಜ್ಜೆ ಹಾಕಿರುವವರಿಗೆ ಧನ್ಯವಾದ. ಪುಟ್ಟಬಾಲಕ-ಬಾಲಕಿಯರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ವೃದ್ಧರು, ಕಾರ್ಮಿಕರು, ರೈತರು, ಕುಶಲಕರ್ಮಿಗಳು, ಸೈನಿಕರು, ಸಾಹಿತಿಗಳು, ಚಿಂತಕರು, ಹೋರಾಟಗಾರರು ಭಾಗವಹಿಸಿ ಭಾರತ ಐಕ್ಯತಾ ಯಾತ್ರೆಯ ಸಂದೇಶವನ್ನು ಅರ್ಥಪೂರ್ಣವಾಗಿಸಿದರು ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಸರ್ವಾಧಿಕಾರ, ದುರಾಡಳಿತ, ಕೋಮು ಧ್ರುವೀಕರಣದ ಅಜೆಂಡಾ ವಿರುದ್ಧದ ಜನತೆಯ ಹೋರಾಟಕ್ಕೆ ಭಾರತ ಐಕ್ಯತಾ ಯಾತ್ರೆ ಸ್ಫೂರ್ತಿ ಕೊಟ್ಟಿದೆ. ನಮ್ಮ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಜನ-ಮನವನ್ನು ಇನ್ನಷ್ಟುಅರ್ಥ ಮಾಡಿಕೊಳ್ಳಲು ನೆರವಾಗಿದೆ. ರಾಹುಲ್‌ ಗಾಂಧಿ ನೇತೃತ್ವದ ಭಾರತ ಐಕ್ಯತಾ ಯಾತ್ರೆ ಕರ್ನಾಟಕದಿಂದ ನಿರ್ಗಮಿಸಿರಬಹುದು. ಆದರೆ ಯಾತ್ರೆ ಮೂಡಿಸಿದ ಜಾಗೃತಿ, ಹುಟ್ಟಿಸಿದ ಭರವಸೆ ಮತ್ತು ಸಾರಿದ ಐಕ್ಯತೆಯ ಸಂದೇಶದಿಂದ ಪ್ರೇರಣೆ ಪಡೆದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.