ನನ್ನ ತೇಜೋವಧೆ ಮಾಡಲು ಬಿಜೆಪಿ ಪುಸ್ತಕ: ಸಿದ್ದು ಆಕ್ರೋಶ
ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಮಾಧ್ಯಮಗಳ ಮೂಲಕ ವಿಚಾರ ತಿಳಿದುಕೊಂಡೆ. ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡುವುದಕ್ಕೆ ಆಗುತ್ತದೆಯೋ ಅದನ್ನು ಮಾಡುತ್ತೇವೆ: ಸಿದ್ದರಾಮಯ್ಯ
ಬೆಂಗಳೂರು(ಜ.10): ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ನನ್ನ ಬಗ್ಗೆ ಪುಸ್ತಕ ಹೊರತರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟಿಪ್ಪು ವೇಷ ಹಾಕಿದಾಗ ಇವರೆಲ್ಲಾ ಯಾಕೆ ಮಾತನಾಡಲಿಲ್ಲ? ಶೇಖ್ ಅಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನ ತಮ್ಮ ಅಧಿಕೃತ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಶೋಭಾ ಕರಂದ್ಲಾಜೆ ಹಾಗೂ ಬಿ.ಎಸ್. ಯಡಿಯೂರಪ್ಪ ಟಿಪ್ಪು ವೇಷ ಹಾಕಿಕೊಂಡು ಖಡ್ಗ ಹಿಡಿದು ಪೋಸು ಕೊಟ್ಟಿದ್ದರು. ಪ್ರೊ. ಶೇಖ್ ಅಲಿ ಅವರು ಟಿಪ್ಪು ಬಗ್ಗೆ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ಲವೇ? ಎಂದು ಪ್ರಶ್ನಿಸಿದರು.
Tipu Sultan: ಟಿಪ್ಪು ಬಗ್ಗೆ ಸುಳ್ಳು ಹೇಳಿ 'ಕಾರ್ನಾಡ್' ಇತಿಹಾಸವನ್ನು ತಿರುಚಿದ್ದಾರೆ: ಅಡ್ಡಂಡ ಕಾರ್ಯಪ್ಪ
ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಮಾಧ್ಯಮಗಳ ಮೂಲಕ ವಿಚಾರ ತಿಳಿದುಕೊಂಡೆ. ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡುವುದಕ್ಕೆ ಆಗುತ್ತದೆಯೋ ಅದನ್ನು ಮಾಡುತ್ತೇವೆ. ಜನರು ಬಿಜೆಪಿಯ ಕೀಳು ಮಟ್ಟದ ರಾಜಕೀಯವನ್ನು ನೋಡುತ್ತಿದ್ದಾರೆ. ಜನರೇ ಇದಕ್ಕೆಲ್ಲಾ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.