ವರುಣದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಸಾಧ್ಯತೆ
ಈ ಬಾರಿಯ ಚುನಾವಣೆಗೆ ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಹುಲ್ ಗಾಂಧಿ ನೀಡಿರುವ ಸೂಚನೆಗೆ ಅನುಗುಣವಾಗಿ ತಕ್ಕಮಟ್ಟಿಗೆ ಸುರಕ್ಷಿತ ಎನಿಸಲಾದ ವರುಣ ಕ್ಷೇತ್ರ ಆಯ್ಕೆಯಾಗಿದೆ ಎನ್ನಲಾಗಿದೆ.
ಬೆಂಗಳೂರು(ಮಾ.22): ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಹುತೇಕ ಮೈಸೂರು ಬಳಿಯ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆಯಿದ್ದು, ಗುರುವಾರ ಪ್ರಕಟವಾಗಲಿರುವ ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಈ ಘೋಷಣೆ ಹೊರ ಬೀಳಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.
ರಿಸ್ಕ್ ಇಲ್ಲದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಖುದ್ದು ರಾಹುಲ್ ಗಾಂಧಿ ಅವರು ನೀಡಿದ ಸಲಹೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಬಗ್ಗೆ ವದಂತಿಗಳು ಹಾಗೂ ರಾಜಕೀಯ ವಲಯದಲ್ಲಿ ತೀವ್ರ ನಕಾರಾತ್ಮಕ ಚರ್ಚೆಗಳು ನಡೆಯದಂತೆ ತಡೆಯಲು ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರದ ಹೆಸರನ್ನು ಮೊದಲ ಪಟ್ಟಿಯಲ್ಲೇ ಪ್ರಕಟಿಸಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.
ಇನ್ನು, ಈ ಬಾರಿಯ ಚುನಾವಣೆಗೆ ಹೆಚ್ಚೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಅನುವಾಗುವಂತೆ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ರಾಹುಲ್ ಗಾಂಧಿ ನೀಡಿರುವ ಸೂಚನೆಗೆ ಅನುಗುಣವಾಗಿ ತಕ್ಕಮಟ್ಟಿಗೆ ಸುರಕ್ಷಿತ ಎನಿಸಲಾದ ವರುಣ ಕ್ಷೇತ್ರ ಆಯ್ಕೆಯಾಗಿದೆ ಎನ್ನಲಾಗಿದೆ.
ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ
ಕೋಲಾರ ಏಕಿಲ್ಲ?:
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲ್ಲುವ ಸಾಧ್ಯತೆಯೇ ಇದೆ. ಆದರೆ, ಆ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ಸಿದ್ದರಾಮಯ್ಯ ಅವರು ಕನಿಷ್ಟ10 ದಿನ ಕ್ಷೇತ್ರದಲ್ಲೇ ಬೀಡುಬಿಡಬೇಕು. ಸಿದ್ದರಾಮಯ್ಯ ಈ ಕ್ಷೇತ್ರದಲ್ಲೇ ನೆಲೆನಿಂತು ಇತರೆಡೆ ಪ್ರಚಾರಕ್ಕೆ ತೆರಳದಂತೆ ಮಾಡಲು ಪ್ರತಿಪಕ್ಷಗಳು ಸಹ ತಂತ್ರಗಾರಿಕೆ ಮಾಡುತ್ತಿವೆ ಎಂಬ ಮಾಹಿತಿ ಹೈಕಮಾಂಡ್ಗೆ ಲಭ್ಯವಾಗಿದೆ.
ಇದಲ್ಲದೆ, ಸುನೀಲ್ ಕಾನುಗೋಲು ಸಹ ಸಿದ್ದರಾಮಯ್ಯ ಅವರಿಗೆ ಕೋಲಾರ ಅಷ್ಟೇನೂ ಸುರಕ್ಷಿತ ಕ್ಷೇತ್ರವಲ್ಲ ಎಂದೇ ತನ್ನ ಸರ್ವೇ ವರದಿಯಲ್ಲಿ ತಿಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೋಲಾರ ಕ್ಷೇತ್ರದ ಬಗ್ಗೆ ಮರು ಚಿಂತನೆ ನಡೆಸಿದ ಸಿದ್ದರಾಮಯ್ಯ ಅವರು ಅಂತಿಮವಾಗಿ ವರುಣ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.