Asianet Suvarna News Asianet Suvarna News

ಬೆಂಗಳೂರಿನ ಜಲಾವೃತ ಪ್ರದೇಶಕ್ಕೆ ಸಿದ್ದು ಭೇಟಿ, ಸರ್ಕಾರದ ವಿರುದ್ಧ ಕೆಂಡಾಮಂಡಲ

ಭಾರೀ ಮಳೆಯಿಂದಾಗಿ ಜಲಾವೃತವಾದ ಬೆಂಗಳೂರಿನ ಕೆಲ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದರು. ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದರು.

Siddaramaiah hits out Karnataka BJP Govt Over Bengaluru Flood rbj
Author
First Published Sep 8, 2022, 1:53 PM IST

ಬೆಂಗಳೂರು, (ಸೆಪ್ಟೆಂಬರ್.08): ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಇನ್ನು ಮುಳುಗಡೆಯಾದ ಪ್ರದೇಶಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಳೆ ನೀರಿನಿಂದ ಮುಳುಗಡೆಯಾದ  ಯಮಲೂರಿನ ಎಪ್ಸಿಲಾನ್ ಲೇಔಟ್‌ಗೆ ಬೋಟ್‌ ಮೂಲಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದರು. ಅಲ್ಲದೇ ಇದೇ ವೇಳೆ ಸ್ಥಳೀಯರು ಸಿದ್ದರಾಮಯ್ಯನವರ ಮುಂದೆ ತಮ್ಮ ಗೋಳು ತೋಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸೋಮವಾರ ಹಾಗೂ ಮಂಗಳವಾರ ಜಾಸ್ತಿ ಮಳೆ ಬಂದಿದೆ. ಅನೇಕ ಬಡವಣೆಗಳಿಗೆ ನೀರು ತುಂಬಿಕೊಂಡು ಬೋಟ್‌ನಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬೋಟ್‌ನಲ್ಲಿ  ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ರಸ್ತೆಗಳಲ್ಲಿ, ಮನೆಗಳಲ್ಲಿ ನೀರು ತುಂಬಿಕೊಂಡಿದೆ ಸುಮಾರು  12 ಅಡಿ ನೀರು ಇತ್ತು. ಈಗ 4 ಅಡಿ ನೀರು ಇದೆ ಎಂದರು.

Bengaluru rain : ಬೊಮ್ಮನಹಳ್ಳಿಯಲ್ಲಿ 2000 ಜನ ಸಂಕಷ್ಟದಲ್ಲಿ!

ಮನೆಯಲ್ಲ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಿದ್ದಾರೆ. ಕೆಲವರು ಹೋಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಇರುವಾಗ ರಾಜಕಾಲುವೆಗಳನ್ನು ತೆರವುಗೊಳಿಸುವ ಕ್ರಮ ಕೈಗೊಂಡಿದ್ದೇವೆ. ಈಗಿನ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ನಮ್ಮ ಕಾಲದಲ್ಲಿ ರಾಜುಕಾಲುವೆ ಒತ್ತುವರಿ ತೆರವು ಮಾಡುವ ಕ್ರಮ ವಹಿಸಿದ್ವಿ. 1953 ಒತ್ತುವರಿ ಗುರುತು ಮಾಡಿದ್ದೇವೆ. ಅದರಲ್ಲಿ 1300 ಒತ್ತುವರಿ ತೆರವುಗೊಳಿಸಿದ್ವಿ. 600 ಒತ್ತುವರಿದಾರರಿಗೆ ಹಾಗೇ ಇತ್ತು. ಅದನ್ನು ತೆರವು ಮಾಡಿದ್ದರೆ ಹೀಗೆ ಆಗ್ತಾ ಇರಲಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.

ಅಕ್ರಮವಾಗಿ ಮನೆ ಕಟ್ಟಿರುವವರ ವಿರುದ್ಧ ಕ್ರಮ ಆಗಿದ್ದರೆ ಹೀಗೆ ಆಗುತ್ತಿರಲಿಲ್ಲ. ಸಿಎಂ ಹೇಳ್ತಾರೆ ಹಿಂದಿನ ಸರ್ಕಾರದ್ದೇ ಕಾರಣ ಅಂತ. ಅವರೇನು ಮಾಡಿದ್ದಾರೆ ಅಂತ ಹೇಳಬೇಕಲ್ವಾ/ ಅದನ್ನು ಹೇಳೊಲ್ಲ ಅವರು ಹಿಂದಿನ ಸರ್ಕಾರ ಕಾರಣ ಅಂತ ಹೇಳ್ತಾರೆ. ಬಹಳ ಸುಲಭ ಜವಾಬ್ದಾರಿಯಿಂದ ನುಣುಚಿಕೊಳ್ಳೋದು. ಇದು ಉತ್ತರ ಅಲ್ಲ. ನಾವೇನು ಮಾಡಿದ್ದೇವೆ ಅಂತ ಜನರಿಗೆ ಹೇಳಬೇಕಲ್ವಾ ಎಂದು ವಾಗ್ದಾಳಿ ನಡೆಸಿದರು.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ಬೆಂಗಳೂರನ್ನ ಅನಗತ್ಯವಾಗಿ 800 ಚದರ ಕಿ.ಲೋ ಮೀಟರ್ ಹೆಚ್ಚು ಮಾಡಿದ್ರು. ಇದು ಕೂಡ ಒಂದು ಸಮಸ್ಯೆಯಾಗಿದೆ. ಇದಕ್ಕೆ ಒಬ್ಬ ಕಮಿಷನರ್ ಮಾತ್ರ ಇರೋದು. ಒತ್ತುವರಿ ತೆರವಿಗೂ ಕೂಡ ವಿರೋಧ ಮಾಡಿದ್ದರು ಇವರು. ನಿಮ್ಮ ಕೆಲಸ ಮಾಡದೇ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ನಮ್ಮ ಸರ್ಕಾರದ ಮೇಲೆ ಹೇಳೋದು ಸರಿಯಲ್ಲ ಇಲ್ಲಿನ ಎಮ್ ಎಲ್ ಎ ಎಷ್ಟು ವರ್ಷದಿಂದ ಇದಾರೆ. ಅವರು ಏನು ಮಾಡುತ್ತಿದ್ದಾರೆ. ಇದಕ್ಕೆ ಜವಾಬ್ದಾರಿ ಬಿಜೆಪಿ ಅಲ್ವಾ. ಅವರು ಮೂರು ವರ್ಷದಿಂದ ಏನೂ ಮಾಡಿಲ್ಲ. ಅದಕ್ಕೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಒತ್ತುವರಿ ಮಾಡಲು ಯಾರು ಕಾರಣ. ನಾನು ಅಧಿವೇಶನದಲ್ಲಿ ಇದನ್ನು ಪ್ರಸ್ತಾಪ ಮಾಡ್ತೀನಿ. ಯಾರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳ್ತೀನಿ. ಇದರಿಂದ ಬ್ರಾಂಡ್ ಬೆಂಗಳೂರಿಗೆ ಇದು ಎಫೆಕ್ಟ್ ಆಗಿದೆ. ಇದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಐಟಿ ಬಿಟಿ ಸಿಟಿ ಅಂತ ಹೇಳ್ತೀವಿ. ಇದೇ ತರ ಮುಂದುವರೆದರೆ ನಾವು ಬಿಡ್ತೀವಿ ಅಂತ ಹೇಳಿದ್ದಾರೆ ಐಟಿ ಬಿಟಿಯವರು. ನಷ್ಟ ಮಾಡಿಕೊಂಡು ಅವರು ಯಾಕೆ ಇರ್ತಾರೆ. ಒತ್ತುವರಿ ತೆರವು ಮಾಡೋದಕ್ಕೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳುವಂತೆ ನಾನು ಸರ್ಕಾರಕ್ಕೆ ಹೇಳ್ತೀನಿ ಎಂದು ತಿಳಿಸಿದರು.

Follow Us:
Download App:
  • android
  • ios