ಬಸ್ಗೂ ಮುನ್ನ ಸಿದ್ದು, ಡಿಕೆಶಿ ಕಾಪ್ಟರ್ ಯಾತ್ರೆ..!
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಜೊತೆಗೂಡಿ ಜ. 9 ರಿಂದ 25 ರವರೆಗೂ ಹೆಲಿಕಾಪ್ಟರ್ ಮೂಲಕ 20 ಜಿಲ್ಲೆಯ ಜಿಲ್ಲಾ ಕೇಂದ್ರಗಳಿಗೆ ತೆರಳಿ 150 ವಿಧಾನಸಭಾ ಕ್ಷೇತ್ರಗಳ ಸಮಾವೇಶ ನಡೆಸಲು ತೀರ್ಮಾನ.
ಬೆಂಗಳೂರು(ಡಿ.14): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಬಸ್ ಯಾತ್ರೆಗೂ ಮೊದಲು ಹೆಲಿಕಾಪ್ಟರ್ ಯಾತ್ರೆ ಆರಂಭವಾಗಲಿದೆ. ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಬಸ್ ಯಾತ್ರೆ ನಡೆಸಿ ಪಕ್ಷ ಸಂಘಟನೆ ಮಾಡಲು ಸಜ್ಜಾಗಿದ್ದರು. ಆದರೆ, ಒಗ್ಗಟ್ಟಾಗಿ ಯಾತ್ರೆ ಮಾಡುವಂತೆ ಹೈಕಮಾಂಡ್ ಸ್ಪಷ್ಟಸೂಚನೆ ನೀಡಿರುವ ಹಿನ್ನಲೆಯಲ್ಲಿ ಬಸ್ ಯಾತ್ರೆಗೂ ಮೊದಲು ಹೆಲಿಕಾಪ್ಟರ್ ಯಾತ್ರೆ ಆರಂಭಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಜೊತೆಗೂಡಿ ಜ. 9 ರಿಂದ 25 ರವರೆಗೂ ಹೆಲಿಕಾಪ್ಟರ್ ಮೂಲಕ 20 ಜಿಲ್ಲೆಯ ಜಿಲ್ಲಾ ಕೇಂದ್ರಗಳಿಗೆ ತೆರಳಿ 150 ವಿಧಾನಸಭಾ ಕ್ಷೇತ್ರಗಳ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ನಿತ್ಯ ಎರಡು ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಬೇಕಾಗಿರುವುದರಿಂದ ಬಸ್ನಲ್ಲಿ ಸಂಚಾರ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಹೆಲಿಕಾಪ್ಟರ್ ಮೂಲಕ ಸಂಚರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗ ನೀಡಿದೆ ಎಂದು ಮೂಲಗಳು ಇಳಿಸಿವೆ.
ಬಿಜೆಪಿಯದ್ದು ಒಡೆದಾಳುವ ನೀತಿ: ಮಧು ಬಂಗಾರಪ್ಪ
ಜ.30 ರಿಂದ ಬಸ್ ಯಾತ್ರೆ:
ಈ ಹೆಲಿಕಾಪ್ಟರ್ ಯಾತ್ರೆ ನಂತರ ಪ್ರತ್ಯೇಕ ಬಸ್ ಯಾತ್ರೆ ನಡೆಸುವ ಉದ್ದೇಶವಿದೆ. ಮೂಲಗಳ ಪ್ರಕಾರ ಜ. 30ರಂದು ಸಿದ್ದರಾಮಯ್ಯ ಅವರು ಬಸವಕಲ್ಯಾಣದಿಂದ ಉತ್ತರ ಕರ್ನಾಟಕದಲ್ಲಿ ಯಾತ್ರೆ ನಡೆಸಲು ಹಾಗೂ ಡಿ.ಕೆ. ಶಿವಕುಮಾರ್ ಅವರು ಹಳೆ ಮೈಸೂರಿನಲ್ಲಿ ಬಸ್ ಪ್ರವಾಸ ನಡೆಸಲಿದ್ದಾರೆ. ಈ ಬಗ್ಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಡಿ.15 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.