ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಒಬ್ಬರು ಹೋರಾಟ ಮಾಡಿದರೆ, ಕುರ್ಚಿಯನ್ನು ಪಡೆದು ಸಿಎಂ ಆಗುವ ಆಟದಲ್ಲಿ ಮತ್ತೊಬ್ಬರು ತೊಡಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಗೌರಿಬಿದನೂರು (ನ.05): ಕಾಂಗ್ರೆಸ್ ಸರ್ಕಾರಕ್ಕೆ ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೂ ಸಂಬಳ ನೀಡಲು ಹಣವಿಲ್ಲ, ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಜೀರ್ಣೋದ್ದಾರ ಮಾಡಿರುವ ಚೆನ್ನಕೇಶವ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕಾರಂದ್ಲಾಜೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Add Asianetnews Kannada as a Preferred SourcegooglePreferred

ಖುರ್ಚಿ ಉಳಿಸಿಕೊಳ್ಳಲು ಹೋರಾಟ: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಒಬ್ಬರು ಹೋರಾಟ ಮಾಡಿದರೆ, ಕುರ್ಚಿಯನ್ನು ಪಡೆದು ಸಿಎಂ ಆಗುವ ಆಟದಲ್ಲಿ ಮತ್ತೊಬ್ಬರು ತೊಡಗಿದ್ದಾರೆ. ಇದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಗಮನ ನೀಡಬೇಕು. ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ, ಕೆಲವೆಡೆ ನೆರೆ ಹಾವಳಿ ಬಂದಿದೆ, ಎಲ್ಲಾ ಕಡೆ ರಸ್ತೆಗಳು ಗುಂಡಿಗಳು ಬಿದ್ದಿವೆ ಈ ಬಗ್ಗೆ ಗಮನಹರಿಸಬೇಕು ಎಂದರು. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎಲ್ಲೆಡೆ ಸಂಬಳಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೂ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲ, ಸ್ಮಶಾನದಲ್ಲಿ ಕೆಲಸ ಮಾಡುವವರು ನನ್ನ ಬಳಿ ಬಂದು ಮೂರು ತಿಂಗಳಿನಿಂದ ಸಂಬಳ ಬಂದಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ ಎಂದು ದೂರಿದರು

ಅಭಿವೃದ್ಧಿಗೆ ಗಮನಹರಿಸಲಿ: ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರಕ್ಕೆ 135ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಸ್ಪಷ್ಟ ಬಹುಮತದಿಂದ ಗೆಲ್ಲಿಸಿದ್ದಾರೆ, ಅವರು ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗಿದೆ, ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಮಠ ಮಂದಿರ ಮತ್ತು ದೇವಸ್ಥಾನಗಳಿಗೆ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಇಂದು ಅಭಿವೃದ್ಧಿ ಕುಂಟಿತವಾಗಿದೆ, ರಾಜ್ಯದಲ್ಲಿರುವ ಕುಕ್ಕೆ ಸುಬ್ರಮಣ್ಯ, ನಂಜುಂಡೇಶ್ವರ, ಚಾಮುಂಡೇಶ್ವರಿಯಂತಹ ದೊಡ್ಡ ದೇವಸ್ಥಾನಗಳಲ್ಲಿ ಬರುವ ಹಣವನ್ನು ಹಳ್ಳಿಗಳಲ್ಲಿರುವ ಗ್ರೇಡ್ 1 ಮತ್ತು ಗ್ರೇಡ್ 2 ದೇವಸ್ಥಾನಗಳಿಗೆ ನೀಡಿದರೆ, ಹಳ್ಳಿಗಳಲ್ಲಿರುವ ದೇವಸ್ಥಾನಗಳನ್ನು ಸಹ ಜೀರ್ಣೋದ್ದಾರ ಮಾಡಿ ಅಭಿವೃದ್ಧಿ ಮಾಡಬಹುದು, ಸರ್ಕಾರ ಈ ಬಗ್ಗೆ ಯೋಚನೆ ಮತ್ತು ಯೋಜನೆ ಮಾಡುವಂತಾಗಲಿ ಎಂದು ತಿಳಿಸಿದರು.

ಸುರಂಗ ರಸ್ತೆಗೆ ಅಧ್ಯಯನ ನಡೆಸಿ

ಬೇರೆ ದೇಶಗಳಲ್ಲಿ ಮೆಟ್ರೋ ಮತ್ತು ರಸ್ತೆಗಳೆಲ್ಲಾ ಭೂಮಿಯ ಒಳಗಡೆ ನಿರ್ಮಾಣ ಮಾಡಿರುತ್ತಾರೆ, ಬೆಂಗಳೂರಿನಲ್ಲಿ ಸಹ ಸುರಂಗ ರಸ್ತೆಗಳನ್ನು ನಿರ್ಮಿಸಲು ಸಂಬಂದಪಟ್ಟ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ಜೊತೆಗೆ ಕಾರ್ಯಸಾಧ್ಯತೆಯ ಅಧ್ಯಯನ ಮಾಡಿಸಿ, ಅದರ ಸಾಧಕ ಬಾಧಕಗಳ ಬಗ್ಗೆ ವರದಿ ತಯಾರಿಸಿದ ನಂತರ ಈ ಬಗ್ಗೆ ಯೋಚನೆ ಮಾಡಬಹುದು ಎಂದು ತಿಳಿಸಿದರು.