ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ ಯತ್ನ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ತೀವ್ರ ವಾಗ್ವಾದ ನಡೆದು, ಆರು ತಿಂಗಳಲ್ಲಿ ಈ ಸರ್ಕಾರಕ್ಕೇ ಏನು ಮಾಡುತ್ತೇನೆ ನೋಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ ಘಟನೆ ನಡೆಯಿತು. 

ವಿಧಾನಸಭೆ (ಜು.07): ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ ಯತ್ನ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗಲೇ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ತೀವ್ರ ವಾಗ್ವಾದ ನಡೆದು, ಆರು ತಿಂಗಳಲ್ಲಿ ಈ ಸರ್ಕಾರಕ್ಕೇ ಏನು ಮಾಡುತ್ತೇನೆ ನೋಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ ಘಟನೆ ನಡೆಯಿತು. ಚಾಲಕ ಆತ್ಮಹತ್ಯೆ ಯತ್ನ ವಿಚಾರವಾಗಿ ತಮ್ಮ ಮೇಲಿನ ಆರೋಪಕ್ಕೆ ಸಚಿವ ಚೆಲುವರಾಯಸ್ವಾಮಿ ಉತ್ತರ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸನದ ಬಳಿ ತೆರಳಿ ಕೆಲ ವಿಚಾರವನ್ನು ವಿವರಿಸಿದರು. ಈ ವೇಳೆ ಸಿದ್ದರಾಮಯ್ಯ ಚೆಲುವರಾಯಸ್ವಾಮಿ ಅವರಿಗೆ ಹಸ್ತಲಾಘವ ನೀಡಿದರು.

Add Asianetnews Kannada as a Preferred SourcegooglePreferred

ಇದನ್ನು ಗಮನಿಸಿದ ಎಚ್‌.ಡಿ.ಕುಮಾರಸ್ವಾಮಿ, ಚೆಲುವರಾಯಸ್ವಾಮಿ ಅವರ ಉತ್ತರದ ಬಗ್ಗೆ ಸಿದ್ದರಾಮಯ್ಯ ಹುಸಿ ನಗೆ ನಕ್ಕು, ಹಸ್ತಲಾಘವ ನೀಡುತ್ತಿದ್ದಾರೆ. ಇದಕ್ಕೆಲ್ಲ ನಾವು ಕೇರ್‌ ಮಾಡಲ್ಲ ಎಂದು ಕುಟುಕಿದರು. ಅಲ್ಲಿಯವರೆಗೆ ಚರ್ಚೆಯನ್ನು ಆಲಿಸುತ್ತಾ ಸುಮ್ಮನೆ ಕುಳಿತಿದ್ದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಮಾತಿಗೆ ಏಕಾಏಕಿ ಸಿಟ್ಟಾಗಿ, ನೀವು ಕೇರ್‌ ಮಾಡದಿದ್ದರೆ, ಅವರಪ್ಪನಷ್ಟುನಾವೂ ಕೇರ್‌ ಮಾಡಲ್ಲ. ನಿಮ್ಮ ರೀತಿಯ ಬಹಳ ಜನರನ್ನು ನೋಡಿದ್ದೇನೆ. ನಿಮ್ಮನ್ನು ನೋಡಿ ಹೆದರುವವರು ಯಾರೂ ಇಲ್ಲಿಲ್ಲ. ನನಗೂ ಪ್ರಕರಣಕ್ಕೂ ಏನೂ ಸಂಬಂಧವಿಲ್ಲ. ಆದರೂ, ಸುಮ್ಮನೆ ಚರ್ಚೆ ಕೇಳುತ್ತಾ ಕುಳಿತಿದ್ದೇನೆ. 

ಹೊಲ ಉತ್ತಿ, ಬೀಜ ಬಿತ್ತಿ, ಬೆವರು ಹೊಳೆ ಹರಿಸಿ ಡಿಕೆಶಿ 'ಲುಲುಮಾಲ್' ಕಟ್ಟಿದ್ರಾ?: ಎಚ್‌.ಡಿ.ಕುಮಾರಸ್ವಾಮಿ

ನನ್ನ ಸಚಿವರಿಗೆ ಹಸ್ತಲಾಘವ ನೀಡುವುದಕ್ಕೂ ನಿಮ್ಮನ್ನು ಕೇಳಬೇಕೆ ಎಂದು ಗಟ್ಟಿಧ್ವನಿಯಲ್ಲಿ ರೇಗಿದರು. ಆಗ ಕುಮಾರಸ್ವಾಮಿ, ಇನ್ನು 6 ತಿಂಗಳಲ್ಲಿ ಏನಾಗುತ್ತದೆ ನೋಡುತ್ತಿರಿ. ನಮ್ಮಲ್ಲಿ ಬೆಳೆದು, ನಮ್ಮ ಕುತ್ತಿಗೆ ಕೊಯ್ದವರನ್ನು ಜತೆಯಲ್ಲಿಟ್ಟುಕೊಂಡು ಆಟ ಆಡುತ್ತಿದ್ದೀರಿ. ನಾನೂ ಆಟ ಆಡ್ತೀನಿ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ನ ಬಾಲಕೃಷ್ಣ ಎದ್ದು ನಿಂತು, 6 ತಿಂಗಳಲ್ಲಿ ಏನಾಗುತ್ತದೆ ಎಂಬ ಭವಿಷ್ಯವನ್ನು ಈಗಲೇ ಹೇಳಿ. ಸುಮ್ಮನೆ ಇಲ್ಲದ್ದನ್ನೆಲ್ಲ ಹೇಳಬೇಡಿ ಎಂದು ಹೇಳಿದರು. ಕೊನೆಗೆ ಸ್ಪೀಕರ್‌ ಯು.ಟಿ.ಖಾದರ್‌ ಮಧ್ಯಪ್ರವೇಶಿಸಿ, ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ. ಯಾವ ವಿಚಾರವಾಗಿ ಚರ್ಚೆಯಾಗುತ್ತಿದೆಯೋ ಅದರ ಬಗ್ಗೆ ಮಾತನಾಡಿ ಎಂದು ಹೇಳಿ ಎಲ್ಲರನ್ನೂ ಸಮಾಧಾನಪಡಿಸಿದರು.

ಅಧಿಕಾರವಿಲ್ಲದೆ ಎಚ್‌ಡಿಕೆ ಹತಾಶ: ‘ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ. ಅವರ ಆರೋಪಗಳು ಹಿಟ್‌ ಅಂಡ್‌ ರನ್‌ ಇದ್ದಂತೆ. ಹೀಗಾಗಿ ಕುಮಾರಸ್ವಾಮಿ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅಲ್ಲದೆ, ಅವರು ತಮ್ಮ ರಾಜಕೀಯ ಜೀವನದಲ್ಲಿ ಈವರೆಗೆ ಮಾಡಿರುವ ಯಾವುದೇ ಒಂದು ಆರೋಪವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿಲ್ಲ. ನಾನು ಮುಖ್ಯಮಂತ್ರಿ ಆಗಿರುವ ಕಾರಣಕ್ಕೆ ನನ್ನ ಪುತ್ರ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎನ್ನುವುದಾದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕುಟುಂಬ ಸದಸ್ಯರೆಲ್ಲರೂ ಭ್ರಷ್ಟಾಚಾರ ಮಾಡುತ್ತಿದ್ದರೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನನ್ನ ಆಸ್ತಿ ತನಿಖೆ ಮಾಡಲಿ: ಕಾಂಗ್ರೆಸ್‌ಗೆ ಎಚ್‌.ಡಿ.ಕುಮಾರಸ್ವಾಮಿ ಸವಾಲು

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದ ಮಾತ್ರಕ್ಕೆ ನನ್ನ ಪುತ್ರ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎನ್ನುವುದು ಕುಮಾರಸ್ವಾಮಿ ಅವರ ಕಲ್ಪನಾ ವಿಲಾಸ. ಇದೇ ವಾದವನ್ನು ಅವರಿಗೆ ಮತ್ತು ಅವರ ಕುಟುಂಬಕ್ಕೆ ಅನ್ವಯಿಸಬಹುದಾ? ಕುಮಾರಸ್ವಾಮಿ ಅವರ ಅಣ್ಣ ಸಚಿವರಾಗಿದ್ದರು, ಈಗ ಶಾಸಕ. ಕುಮಾರಸ್ವಾಮಿ ಪತ್ನಿ ಶಾಸಕಿಯಾಗಿದ್ದರು, ತಂದೆ ಪ್ರಧಾನಮಂತ್ರಿಗಳಾಗಿದ್ದರು. ಅಣ್ಣನ ಮಗ ಸಂಸದರಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅವರ ಕುಟುಂಬದ ಸದಸ್ಯರೆಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.