ರೇಪಿಸ್ಟ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ. ಅತ್ಯಾಚಾರ, ಕೊಲೆ ತಡೆಗೆ ಕಠಿಣ ಕಾನೂನು ಬಳಸಲು ಬಿಜೆಪಿ ಸರ್ಕಾರ ವಿಫಲ: ಯಾಸ್ಮಿನ್‌ ಫಾರೂಕಿ

ಬೆಂಗಳೂರು (ಆ.23) : ದೇಶದಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಸಂಖ್ಯೆ ಏರಿಕೆಯಾಗುತ್ತಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಅತ್ಯಾಚಾರಿಗಳು ಮತ್ತು ಕೊಲೆಗಡುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗಗಳಿಗೆ ರಕ್ಷಣೆ ನೀಡಬೇಕೆಂದು ಎಸ್‌ಡಿಪಿಐ ಒತ್ತಾಯಿಸಿದೆ. ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್‌ ಫಾರೂಕಿ, ಬಿಜೆಪಿ ಸರ್ಕಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತಡೆಗೆ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲವಾಗುತ್ತಿದೆ. ಗುಜರಾತ್‌ನಲ್ಲಿ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಜನಾಕ್ರೋಶಕ್ಕೆ ಬಿಜೆಪಿ ಸರ್ಕಾರ ಗುರಿಯಾಗಿದೆ ಎಂದು ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪ್ರಾಪ್ತೆ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ, ನೋಡಿ ಖುಷಿ ಪಟ್ಟ ಮಹಿಳೆ!

ಹಾಗೆಯೇ ಉತ್ತರ ಪ್ರದೇಶ(Uttarapadesh )ದ ಘಾಜಿಯಾಬಾದ್‌ನಲ್ಲಿ ಆ.18ರಂದು ಒಂಬತ್ತು ಮತ್ತು ಐದು ವರ್ಷದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿದ್ದು ಈ ಪೈಕಿ ಒಂದು ಮಗುವನ್ನು ಕೊಲೆ ಮಾಡಲಾಗಿದೆ. ಘಾಜಿಯಾಬಾದ್‌ನ ಮೋದಿ ನಗರದ ನಿವಾಸಿ ಕಪಿಲ್‌ ಕಶ್ಯಪ್‌ (25) ಆರೋಪಿಯಾಗಿದ್ದಾನೆ. ಈ ಎರಡು ಪ್ರಕರಣಗಳು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಏರುಗತಿಯಲ್ಲಿ ಇರುವುದಕ್ಕೆ ತಾಜಾ ಉದಾಹರಣೆಗಳಾಗಿವೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಜನರನ್ನು ಆತಂಕಕ್ಕೆ ದೂಡಿವೆ. ಇದು ಬಿಜೆಪಿಯ ಬೇಟಿ ಬಚಾವೋ, ಬೇಟಿ ಪಢಾವೋ (ಹೆಣ್ಣು ಮಕ್ಕಳನ್ನು ಕಾಪಾಡಿ, ಹೆಣ್ಣು ಮಕ್ಕಳನ್ನು ಓದಿಸಿ) ಎಂಬ ಘೋಷಣೆ ಕೇವಲ ಬೂಟಾಟಿಕೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತಿನ ಬಿಲ್ಕಿಸ್‌ ಬಾನು ಪ್ರಕರಣವನ್ನೇ ನೋಡಿದಾಗ, ಅತ್ಯಾಚಾರದಂತಹ ಕ್ರೂರ ಕೃತ್ಯದ ಜೊತೆಗೆ ಮೂರು ವರ್ಷದ ಮಗು ಸೇರಿದಂತೆ ಹಲವರ ಕೊಲೆಯೂ ನಡೆದಿದ್ದ ಪ್ರಕರಣದಲ್ಲಿ ಎಲ್ಲ ಅಪರಾಧಗಳು ನ್ಯಾಯಾಲಯದಲ್ಲಿ ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದವರ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಅವರು ಜೈಲಿನಿಂದ ಹೊರ ಬಂದಾಗ ವಿಶ್ವ ಹಿಂದೂ ಪರಿಷತ್‌ ಆ ಅಪರಾಧಿಗಳನ್ನು ಸ್ವಾಗತಿಸುವುದು ಮಾತ್ರವಲ್ಲದೆ ಅವರಿಗೆ ಸಿಹಿ ತಿನಿಸಿ ಹೊರಜಗತ್ತಿಗೆ ಸ್ವಾಗತಿಸಿದೆ. ಇಂತಹ ನಾಚಿಕೆಗೇಡಿನ ಪ್ರಕರಣಗಳಿಂದ ಅಪರಾಧಿಗಳಲ್ಲಿ ಕಾನೂನಿನ ಮೇಲೆ ಭಯ ಇಲ್ಲದಂತಾಗಿದೆ ಎಂದು ಹರಿಹಾಯ್ದಿದ್ದಾರೆ.

ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

ಘಾಜಿಯಾಬಾದ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು. ಗುಜರಾತ್‌ನ ಬಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳಿಗೆ ಸನ್ನಡತೆ ಆಧಾರದಲ್ಲಿ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆ ಮಾಡಿರುವುದನ್ನು ರದ್ದು ಪಡಿಸಿ ಪುನಃ ಜೈಲಿಗೆ ಕಳುಹಿಸಬೇಕು. ಈ ಮೂಲಕ ಅಮಾಯಕ ಹೆಣ್ಣು ಮಕ್ಕಳು, ಮಹಿಳೆಯರಿಗೆ ನ್ಯಾಯ ಒದಗಿಸಬೆಕು ಎಂದು ಯಾಸ್ಮಿನ್‌ ಫಾರೂಕಿ ಒತ್ತಾಯಿಸಿದ್ದಾರೆ.