29ರಂದು ನಾಮಪತ್ರ ಸಲ್ಲಿಕೆಗೆ ನಿರ್ಧಾರ| ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಬಹಳಷ್ಟಿವೆ| ಯಮಕನಮರಡಿಯಲ್ಲಿ ಬೆಂಬಲಿಗರ ಸಭೆ ನಡೆಸಿ ಉಪಚುನಾವಣೆ ಸ್ಪರ್ಧೆಗೆ ಅಭಿಪ್ರಾಯ ಸಂಗ್ರಹ| ಸಂಘಟನೆ ದೃಷ್ಟಿಯಿಂದ ನನ್ನ ಸ್ಪರ್ಧೆ ಅನಿವಾರ್ಯ: ಜಾರಕಿಹೊಳಿ| 

ಬೆಳಗಾವಿ(ಮಾ.27): ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಸ್ಪರ್ಧೆಗೆ ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ನನಗೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿರುವುದಕ್ಕೆ ಖುಷಿಯಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆದೇಶವನ್ನು ನಾನು ಪಾಲನೆ ಮಾಡಬೇಕಾಗುತ್ತದೆ. ಪಕ್ಷದ ಹಿತದೃಷ್ಟಿ, ಸಂಘಟನೆ ದೃಷ್ಟಿಯಿಂದ ನನ್ನ ಸ್ಪರ್ಧೆ ಅನಿವಾರ್ಯವಾಗಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ 20 ವರ್ಷಗಳಿಂದ ಕಾಂಗ್ರೆಸ್‌ ಕೈಬಿಟ್ಟಿತ್ತು. ಈಗ ಮರಳಿ ಕಾಂಗ್ರೆಸ್‌ ತನ್ನ ಹಿಡಿತ ಸಾಧಿಸಬೇಕಿದೆ. ಇದೀಗ ನಮಗೆ ಸುವರ್ಣ ಅವಕಾಶ ಸಿಕ್ಕಿದ್ದು, ನಾವೆಲ್ಲರೂ ಸೇರಿ ಪ್ರಯತ್ನಿಸಬೇಕಿದೆ ಎಂದರು.

ಬೆಳಗಾವಿ ಉಪಕದನ: ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಘೋಷಿಸಿದ ಎಐಸಿಸಿ

29ಕ್ಕೆ ನಾಮಪತ್ರ ಸಲ್ಲಿಕೆ:

ಮಾ.29 ರಂದು ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಲಿದ್ದೇನೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮುಂಬೈ ಕರ್ನಾಟಕದ ಮುಖಂಡರು ಪಾಲ್ಗೊಳ್ಳುವರು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಬಹಳಷ್ಟಿವೆ ಎಂದರು. ಈ ಹಿಂದೆ ನನ್ನ ಸ್ಪರ್ಧೆಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಪಕ್ಷದ ಆದೇಶ ಪಾಲನೆ ಮಾಡಬೇಕಾಗುತ್ತದೆ ಎಂಬುದನ್ನು ನಾನು ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದೇನೆ ಎಂದರು. ಇದಕ್ಕೂ ಮುನ್ನ ಶುಕ್ರವಾರ ಯಮಕನಮರಡಿಯಲ್ಲಿ ಬೆಂಬಲಿಗರ ಸಭೆ ನಡೆಸಿ ಉಪಚುನಾವಣೆ ಸ್ಪರ್ಧೆಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.