1610 ಕೋಟಿ ರೂ.ಪ್ಯಾಕೇಜ್ಗೆ ನೆರೆ ಪರಿಹಾರ ಲಿಂಕ್ ಮಾಡಿ ಜಾಡಿಸಿದ ಎಚ್ಡಿಕೆ..!
ಕೊರೋನಾ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, (ಮೇ.10): ಕೊರೋನಾಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ 1610 ಕೋಟಿ ರೂ.ಪ್ಯಾಕೇಜ್ ಸಹ ನೆರೆ ಪರಿಹಾರದ ಪ್ಯಾಕೇಜ್ ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಇಂದು ರಾಜರಾಜೇಶ್ವರಿ ವಿಧಾನ ಸಭಾಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಜಿ.ಕೃಷ್ಣ ಮೂರ್ತಿ ಏರ್ಪಡಿಸಿದ್ದ ಸುಮಾರು 15 ಸಾವಿರ ಬಡವರಿಗೆ ಉಚಿತ ಆಹಾರ ಸಾಮಗ್ರಿಗಳ ವಿತರಣೆಗೆ ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ ಆ ವರ್ಗದ ಜನರನ್ನು ಗುರುತಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅಸಂಘಟಿತ ಕಾರ್ಮಿಕ ವರ್ಗದವರನ್ನ ಗುರುತಿಸುವ ಕೆಲಸ ಆಗಿದ್ಯಾ? ಅವರಿಗೆ ಪರಿಹಾರ ತಲುಪಿಸುತ್ತೀರಿ? ಎಂದು ಪ್ರಶ್ನಿಸಿದರು.
ಲಾಕ್ಡೌನ್ ಎಫೆಕ್ಟ್: ಸಂಕಷ್ಟದಲ್ಲಿರುವವರಿಗೆ ಸಿಎಂ ಸ್ಪಂದನೆ, ವಿಶೇಷ ಪ್ಯಾಕೇಜ್ ಘೋಷಣೆ
ಇವತ್ತು ದಾನಿಗಳಿಂದ ಬಡವರು ಉಳಿದಿದ್ದಾರೆಯೇ ಹೊರತು, ಸರ್ಕಾರಿಂದಲ್ಲ. ಜನರು ತುಂಬಾ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ನಿಲ್ಲಲಿ. ಈ ಸಂದರ್ಭದಲ್ಲಿ ಲೂಟಿ ಹೊಡೆಯೋ ಕೆಲಸ ಮಾಡಬೇಡಿ ಎಂದರು.
1600 ಕೋಟಿ ಪ್ಯಾಕೇಜ್ ಘೋಷಣೆ ಮುನ್ನ ಪೂರ್ವ ತಯಾರಿ ಮಡ್ಕೊಂಡಿದ್ದೀರಾ? ಇದು ಕೂಡ ನೆರೆ ಪರಿಹಾರದ ರೀತಿಯಲ್ಲೇ ಆಗುತ್ತೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡ್ತೀವಿ ಅಂದಿದ್ದರು. ಎಷ್ಟು ಜನರಿಗೆ ಕೊಟ್ಟಿದ್ದಾರೆ? ಅದೇ ರೀತಿ ವಿಶೇಷ ಪ್ಯಾಕೇಜ್ ಕೂಡ ಪ್ರಚಾರಕ್ಕೆ ಸೀಮಿತ ಆಗುತ್ತೆ ಅಷ್ಟೇ ಎಂದು ಹೇಳಿದರು.