'ಯಡಿಯೂರಪ್ಪ ಏಟು ತಿನ್ನಲ್ಲ, ಕೇಸು ಹಾಕಿಸಿಕೊಳ್ಳಲ್ಲ, ನಾವು ಏಟು ತಿಂದು-ಕೇಸು ಹಾಕಿಸಿಕೊಂಡಿದ್ದೇವೆ'
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯ ಆರಂಭದಲ್ಲಿ ಬಿಜೆಪಿ ಅಸಮಾಧಾನ ಸ್ಫೋಟಗೊಂಡಿದ್ದು, ಮೂಲ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಬೆಂಗಳೂರು, (ಅ.14): ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರಿತ್ತಿದೆ. ಆದ್ರೆ, ಬಿಜೆಪಿತಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಹೌದು...ಮುನಿರತ್ನ ಅವರಗೆ ಟಿಕೆಟ್ ನೀಡಿದಕ್ಕೆ ಮೂಲ ಬಿಜೆಪಿಗರು ಆಶ್ರೋಶಗೊಂಡಿದ್ದು, ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಗೌಡಗೆ ಟಿಕೆಟ್ ನಿರಾಕರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಸುತ್ತಿದ್ದಂತೆ, ಬಿಜೆಪಿಯಲ್ಲಿ ಭಿನ್ನಮತದ ಕಟ್ಟೆಯೊಡೆದು, ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಬೆಂಬಲಿಸಿ ಎಂದಂತ ಬಿಜೆಪಿ ನಾಯಕರ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಕಿಡಿ ಕಾರಿದ್ದಾರೆ.
ಬೋಲೋ ಭಾರತ್ ಮಾತಾ ಕೀ ಜೈ ಹೆಸರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ಈ ವೇಳೆ ಮತನಾಡಿದ ಕಾರ್ಯಕರ್ತರು, ಯಡಿಯೂರಪ್ಪ ಏಟು ತಿನ್ನಲ್ಲ. ಯಡಿಯೂರಪ್ಪ ಕೇಸು ಹಾಕಿಸಿಕೊಳ್ಳಲ್ಲ. ನಾವು ಏಟು ತಿಂದು ಕೇಸು ಹಾಕಿಸಿಕೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
RR ನಗರ ಬೈ ಎಲೆಕ್ಷನ್ ಟಿಕೆಟ್: ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ, ರಾಜೀನಾಮೆ ಸಲ್ಲಿಕೆ
ನಾವು ಮೋದಿ ತತ್ವ ಪಾಲನೆ ಮಾಡಬೇಕೇ ಹೊರತು ಬಿನ್ ಲಾಡೆನ್ ತತ್ವ ಅಲ್ಲ. ಮಹಿಳಾ ಕಾರ್ಪೋರೇಟರ್ ಮೇಲೆ ಹಲ್ಲೆ ಮಾಡಿದವರನ್ನು ಒಪ್ಪಿಕೊಳ್ಳಬೇಕಾ....? ನೀವು ಹೇಳುವುದನ್ನು ಕೇಳಲು ನಾವು ಬಂದಿಲ್ಲ. ನಾವು ಹೇಳುವುದನ್ನು ಕೇಳಬೇಕು. ಮುನಿರತ್ನ ಸೇರ್ಪಡೆ ಮಾಡುವಾಗ ಯಾಕೆ ಕೇಳಲಿಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್ ಸಮ್ಮುಖದಲ್ಲೇ ಕಾರ್ಯಕರ್ತರು ಕಿಡಿಕಾರಿದರು.
ಮತ್ತೊಂದು ಸಭೆಯಲ್ಲಿ ಮುನಿರತ್ನಗೆ ದಿಕ್ಕಾರ
ಹೌದು...ಮತ್ತೊಂದೆಡೆ ಮಲ್ಲತ್ತಹಳ್ಳಿಯ ಕೆಂಗುಂಟೆಯಲ್ಲಿ ನಡೆದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಸಭೆಯಲ್ಲೂ ಸಹ ಬಿಜೆಪಿ ನಾಯಕರುಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಮುನಿರತ್ನ ವಿರುದ್ಧ ಧಿಕ್ಕಾರ ಕೂಗುತ್ತಲೇ ಸಭೆಯಿಂದ ಹೊರ ನಡೆದರು. ಇದರಿಂದ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಅಭ್ಯರ್ಥಿ ಮುನಿರತ್ನ ಮತ್ತು ಕಾರ್ಯಕರ್ತರನ್ನು ಕೂರಿಸಿ ಸಂಧಾನ ಮಾಡುವ ಭರವಸೆ ನೀಡಿದ್ದಾರೆ.
ರಾಜ್ಯಾಧ್ಯಕ್ಷರ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮ್ಮುಖದಲ್ಲಿ ಸಭೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸದ್ಯ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯ ಕಾರ್ಯಕರ್ತರು ಮುನಿರತ್ನ ಅವರಿಗೆ ಟಿಕೆಟ್ ನಿಡಿದ್ದಕ್ಕೆ ಫುಲ್ ಗರಂ ಆಗಿದ್ದರು, ಬಂಡಾಯ ಸಾರುವ ಎಲ್ಲಾ ಮುನ್ಸೂಚನೆಗಳಿವೆ.
ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ....