ಬೆಂಗಳೂರು ಸಭೆಗೂ ಮುನ್ನ ವಿಪಕ್ಷ ಮೈತ್ರಿ ಛಿದ್ರ? ಪವಾರ್ ಬೆನ್ನಲ್ಲೇ ಬೆಜಿಪಿಯತ್ತ ಆರ್ಎಲ್ಡಿ ಪಕ್ಷ!
ವಿಪಕ್ಷಗಳ ಮೈತ್ರಿಗೆ ಅಜಿತ್ ಪವಾರ್ ನಿರ್ಧಾರ ಅತೀ ದೊಡ್ಡ ಹೊಡೆತ ನೀಡಿದೆ. ಅಜಿತ್ ಪವಾರ್ ಸೇರಿದಂತೆ 9 ಎನ್ಸಿಪಿ ನಾಯಕರು ಮಹಾರಾಷ್ಟ್ರದಲ್ಲಿ ಎನ್ಡಿಎ ಬೆಂಬಲ ಸೂಚಿಸಿರುವು ವಿಪಕ್ಷಗಳಿಗೆ ಅತೀ ದೊಡ್ಡ ಹಿನ್ನಡೆಯಾಗಿದೆ. ಈ ಶಾಕ್ನಿಂದ ಚೇತರಿಸಿಕೊಳ್ಳುವ ಮುನ್ನವೇ ವಿಪಕ್ಷದ ಮತ್ತೊಂದು ವಿಕೆಟ್ ಪತನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೀಗ ಆರ್ಎಲ್ಡಿ ಪಕ್ಷ ಬಿಜೆಪಿಗೆ ಬೆಂಬಲ ಸೂಚಿಸಲು ನಿರ್ಧರಿಸಿದೆ.
ಭೋಪಾಲ್(ಜು.03) ಮಹಾರಾಷ್ಟ್ರದಲ್ಲಿ ನಡೆದ ರಾಜೀಕಯ ಕ್ಷಿಪ್ರ ಬೆಳವಣಿಗೆ 2024ರ ಲೋಕಸಭೆಗೆ ವಿಪಕ್ಷ ಮೈತ್ರಿಗೆ ಭಾರಿ ಹೊಡೆತ ನೀಡಿದೆ. ವಿಪಕ್ಷಗಳ ಮುಂದಾಳತ್ವದಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪ್ರಮುಖ ಪಕ್ಷವಾಗಿತ್ತು. ಆದರೆ ಅಜಿತ್ ಪವಾರ್ ಸೇರಿ 9 ನಾಯಕರು ಎನ್ಡಿಎಗೆ ಬೆಂಬಲ ಸೂಚಿಸಿದ ಕಾರಣ ಎನ್ಸಿಪಿ ಒಡದು ಹೋಳಾಗಿದೆ. ಅಜಿತ್ ಪವಾರ್ ಶಿಂಧೆ-ಫಡ್ನವಿಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹೊಡೆತದಿಂದ ಚೇತರಿಸಿಕೊಳ್ಳುವ ಮೂದಲೇ ಇದೀಗ ವಿಪಕ್ಷ ಮೈತ್ರಿಯಿಂದ ಮತ್ತೊಂದು ವಿಕೆಟ್ ಪತನಗೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ರಾಷ್ಟ್ರೀಯ ಲೋಕ ದಳ ಪಕ್ಷ ಇದೀಗ ಸಮಾಜವಾದಿ ಪಾರ್ಟಿ ಮೈತ್ರಿ ಮುರಿದು ಬಿಜೆಪಿಗೆ ಕೂಟಕ್ಕೆ ಬೆಂಬಲ ನೀಡಲು ಮುಂದಾಗಿದೆ. ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ, ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸಚಿವ ರಾಮದಾಸ್ ಅಠವಾಳೆ ಜುಲೈ 2 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಯಂತ್ ಚೌಧರಿ ಸತತ 2 ಗಂಟೆಗೂ ಹೆಚ್ಚು ಕಾಲ ಅಠವಾಳೆ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿರುವ ಅಠವಾಳೆ, ಶೀಘ್ರದಲ್ಲೇ ಜಯಂತ್ ಚೌಧರಿ ನೇತೃತ್ವದ ಆರ್ಎಲ್ಡಿ ಎನ್ಡಿಗೆ ಬೆಂಬಲ ಸೂಚಿಸಲಿದ್ದಾರೆ ಎಂದಿದ್ದಾರೆ. ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಮಹಾ ಮೈತ್ರಿ ಸಭೆಯಿಂದ ಆರ್ಎಲ್ಡಿ ಪಕ್ಷ ಹೊರಗುಳಿದಿತ್ತು. ಕಾರಣ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ವಿರುದ್ಧ ಮುನಿಸಿಕೊಂಡಿರುವ ಆರ್ಎಲ್ಡಿ ಯುಪಿಎ ಕೂಟದಿಂದ ಹೊರಬಂದು ಎನ್ಡಿಎಗೆ ಬೆಂಬಲ ಸೂಚಿಲಿದ್ದಾರೆ ಎಂದು ಅಠವಾಳೆ ಹೇಳಿದ್ದಾರೆ.
ವಿಪಕ್ಷಗಳ ಮೈತ್ರಿ ಸಭೆಗೆ ಮತ್ತೊಂದು ವಿಘ್ನ, ಬೆಂಗಳೂರು ಮೀಟಿಂಗ್ ಮುಂದೂಡಿಕೆ!
ಸದ್ಯ ಯುಪಿಎ ಕೂಟದ ಮೈತ್ರಿಯಲ್ಲಿರುವ ಆರ್ಎಲ್ಡಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯನ್ನು ಬೆಂಬಲಿಸುತ್ತಿದೆ. ಆದರೆ ಸಮಾಜವಾದಿ ನಡೆಯಿಂದ ಬೇಸತ್ತಿರುವ ಆರ್ಎಲ್ಡಿ ಇದೀಗ ಮತ್ತೆ ಎನ್ಡಿಎ ಕೂಟದತ್ತ ಮುಖ ಮಾಡಿದೆ. 2019ರ ಲೋಕಸಭೆ ಚುನಾವಣೆಯಿಂದ ಆರ್ಎಲ್ಡಿ ಹಾಗೂ ಸಮಾಜವಾದಿ ಪಾರ್ಟಿ ಮೈತ್ರಿಯಲ್ಲಿದೆ. ಆದರೆ ಕಳೆದ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧೆ ಮಾಡಿತ್ತು. ಇಷ್ಟೇ ಅಲ್ಲ ಹೀನಾಯ ಸೋಲು ಕಂಡಿತ್ತು. ಟಿಕೆಟ್ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಆರ್ಎಲ್ಡಿ ಮಾತು ಧಿಕ್ಕಿರಿಸಿದ್ದ ಸಮಾಜವಾದಿ ವಿರುದ್ದ ಆಕ್ರೋಶ ಹೆಚ್ಚಾಗಿತ್ತು.
ಇದೀಗ ಆರ್ಎಲ್ಡಿ ಪಕ್ಷ ಬಿಜೆಪಿಗೆ ಬೆಂಬಲ ಸೂಚಿಸಿದರೆ ವಿಪಕ್ಷಗಳ ಮೈತ್ರಿ ಸಭೆ ಬಳಿಕ ಇದೀಗ ಎನ್ಸಿಪಿ ಒಡದು ಹೋಳಾಗಿ ಎನ್ಡಿಎಗೆ ಬೆಂಬಲ ಸೂಚಿಸಿದರೆ, ಇತ್ತ ಆರ್ಎಲ್ಡಿ ಬಿಜೆಪಿಯತ್ತ ಮುಖ ಮಾಡಿದೆ. ಆರ್ಎಲ್ಡಿ ಅಧಿಕೃತ ಘೋಷಣೆ ಮಾಡಿದರೆ ಅತ್ಯಲ್ಪ ದಿನದಲ್ಲಿ ವಿಪಕ್ಷ ಸಿಗುವ ಎರಡನೇ ಹೊಡೆತವಾಗಿದೆ.
ಕೇಂದ್ರ ಸಚಿವರ ಜೊತೆ ಆರ್ಎಲ್ಡಿ ಯಾವುದೇ ಮಾತುಕತೆ ನಡೆಸಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಆದರೆ ಮಾತುಕತೆ ನಡೆದಿದೆ ಎಂದು ಮೂಲಗಳು ಹೇಳುತ್ತಿದೆ. ಇತ್ತ ಸಮಾಜವಾದಿ ಪಾರ್ಟಿ ಜೊತೆ ಮುನಿಸಿಕೊಂಡಿರುವುದು ಸ್ಪಷ್ಟ. ಹೀಗಾಗಿಯೇ ಕೊನೆಯ ಕ್ಷಣದಲ್ಲಿ ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ಆರ್ಎಲ್ಡಿ ಹೊರಗುಳಿದಿತ್ತು.