Asianet Suvarna News Asianet Suvarna News

ಬದಲಾದ ಅಭ್ಯರ್ಥಿ ಬೆನ್ನಲ್ಲೇ ಶಿಗ್ಗಾವಿ ಕಾಂಗ್ರೆಸ್ಸಿನಲ್ಲಿ ಬಂಡಾಯ!

: ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬದಲಾಯಿಸಿದ ಬೆನ್ನಲ್ಲೆ ಬಂಡಾಯ ಎದ್ದಿದ್ದು, ಕೈ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಶಿಧರ ಯಲಿಗಾರ ಕಾಂಗ್ರೆಸ್‌ ತೊರೆದು ಜೆಡಿಎಸ್‌ನಿಂದ ಸಿ ಫಾರಂ ಪಡೆದು ಕಣಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲದಲ್ಲಿದ್ದ ಕಾಂಗ್ರೆಸ್ಸಿಗೆ ಈಗ ಬಂಡಾಯದ ಬಿಸಿ ಶಮನವೇ ಸವಾಲಾಗಿ ಪರಿಣಮಿಸಿದೆ.

Rebellion in Shiggavi Congress after the change of candidate at haveri rav
Author
First Published Apr 21, 2023, 11:23 AM IST

ಹಾವೇರಿ (ಏ.21) : ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬದಲಾಯಿಸಿದ ಬೆನ್ನಲ್ಲೆ ಬಂಡಾಯ ಎದ್ದಿದ್ದು, ಕೈ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಶಿಧರ ಯಲಿಗಾರ ಕಾಂಗ್ರೆಸ್‌ ತೊರೆದು ಜೆಡಿಎಸ್‌ನಿಂದ ಸಿ ಫಾರಂ ಪಡೆದು ಕಣಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲದಲ್ಲಿದ್ದ ಕಾಂಗ್ರೆಸ್ಸಿಗೆ ಈಗ ಬಂಡಾಯದ ಬಿಸಿ ಶಮನವೇ ಸವಾಲಾಗಿ ಪರಿಣಮಿಸಿದೆ.

ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ(CM Basavaraj Bommai) ಅವರನ್ನು ಕಟ್ಟಿಹಾಕಬೇಕು ಎಂಬ ಕೈ ನಾಯಕರ(Congress Leaders) ಲೆಕ್ಕಾಚಾರಗಳು ತಲೆಕೆಳಗಾಗುತ್ತಿದೆ. ಆರಂಭದಿಂದಲೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲೇ ಇದ್ದ ಕೈ ನಾಯಕರು, ಒಬ್ಬರ ಹೆಸರನ್ನೂ ಮುಂಚೂಣಿಗೆ ತರುವಲ್ಲಿ ಯಶಸ್ಸು ಕಾಣಲಿಲ್ಲ. ಬದಲಾಗಿ ವಿನಯ ಕುಲಕರ್ಣಿ, ಅಜ್ಜಂಪೀರ್‌ ಖಾದ್ರಿ, ಸಲೀಂ ಅಹ್ಮದ್‌ ಹೀಗೆ ಒಂದೊಂದೇ ಹೆಸರನ್ನು ತಂದು ಗೊಂದಲ ಮೂಡಿಸಿತು. ಕನಕಪುರ, ವರುಣದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ವಿರುದ್ಧ ಪ್ರಬಲರನ್ನು ಬಿಜೆಪಿ ಕಣಕ್ಕಿಳಿಸಿದ್ದಕ್ಕೆ ಪ್ರತಿಯಾಗಿ ಶಿಗ್ಗಾವಿಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ಸಿನವರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ನಡೆದಿತ್ತು. ಆದರೆ, ಯೂಸುಫ್‌ ಸವಣೂರ ಅವರಿಗೆ ಮೊದಲು ಟಿಕೆಟ್‌ ನೀಡಿ, ಆನಂತರ ಯಾಸೀರ್‌ ಖಾನ್‌ ಪಠಾಣಗೆ ಟಿಕೆಟ್‌ ನೀಡಿತು. ಇದಾದ ಬೆನ್ನಲ್ಲೇ ಪಕ್ಷದಲ್ಲಿ ಬಂಡಾಯ ಮತ್ತಷ್ಟುಭುಗಿಲೆದ್ದಿದೆ.

'ನನಗೆ ಅವಿರೋಧ ಆಯ್ಕೆ ಬೇಡ ಕುಸ್ತಿ ಬೇಕು; ಕಣಕ್ಕೆ ಯಾರು ಬರ್ತಿರೋ ಬನ್ನಿ': ಕಾಂಗ್ರೆಸ್‌ಗೆ  ಸಿಎಂ ಪಂಥಾಹ್ವಾನ 

ಯಲಿಗಾರ ಜೆಡಿಎಸ್‌ಗೆ:

ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ 14 ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದರು. ಬೊಮ್ಮಾಯಿ ವಿರುದ್ಧ ಮೂರು ಚುನಾವಣೆಗಳಲ್ಲಿ ಸೋತಿರುವ ಕಾರಣಕ್ಕಾಗಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಅವರಿಗೆ ಮೊದಲೇ ಟಿಕೆಟ್‌ ನಿರಾಕರಣೆ ಮಾಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಖಾದ್ರಿ, ಪಕ್ಷದ ನಾಯಕರ ವಿರುದ್ಧ ಹರಿಹಾಯುತ್ತಲೇ ಬಂದಿದ್ದರು. ಯಾಸೀರ್‌ಖಾನ್‌ ಪಠಾಣ ನಾಮಪತ್ರ ಸಲ್ಲಿಕೆಗೂ ಖಾದ್ರಿ ಆಗಮಿಸದಿರುವುದು ಅವರ ಮುನಿಸು ಇನ್ನೂ ಶಮನವಾಗಿಲ್ಲ ಎಂಬುದನ್ನು ತೋರಿಸುತ್ತಿದೆ.

ಈಗ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಶಶಿಧರ ಯಲಿಗಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದ್ದಾರೆ. ಗುರುವಾರ ಜೆಡಿಎಸ್‌ನಿಂದ ಸಿ ಫಾರಂ ತಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಜೆಡಿಎಸ್‌ ಯೂಸುಫ್‌ ಪಠಾಣ ಅವರಿಗೆ ಟಿಕೆಟ್‌ ನೀಡಿತ್ತು. ಕಾಂಗ್ರೆಸ್‌ನಂತೆಯೇ ಜೆಡಿಎಸ್‌ ಕೂಡ ಅಂತಿಮ ಗಳಿಗೆಯಲ್ಲಿ ಅಭ್ಯರ್ಥಿ ಬದಲಿಸಿತು.

ಸಿಎಂ ತವರಿನಲ್ಲಿ ನಾಮಿನೇಷನ್‌ ಜಾತ್ರೆ,ಶಿಗ್ಗಾವಿಯಲ್ಲಿ ಬೊಮ್ಮಾಯಿ ಶಕ್ತಿ ಪ್ರದರ್ಶನ

ಪಠಾಣಗಿದೆ ಸವಾಲು:

ಕೊನೆ ಗಳಿಗೆಯಲ್ಲಿ ಕೈ ಟಿಕೆಟ್‌ ಪಡೆದು ಕಣಕ್ಕಿಳಿದಿರುವ ಯಾಸೀರ್‌ ಖಾನ್‌ ಪಠಾಣ ಮೇಲೆ ಜವಾಬ್ದಾರಿ ಹೆಚ್ಚಿದೆ. ಖಾದ್ರಿ ನಾಲ್ಕು ಬಾರಿ ಸೋತರೂ ಕಡಿಮೆ ಅಂತರದಲ್ಲಿ ಎಂಬುದು ಗಮನಾರ್ಹ. ಆದರೆ, ಅಲ್ಪಸಂಖ್ಯಾತರಿಗೇ ಮತ್ತೊಮ್ಮೆ ಟಿಕೆಟ್‌ ನೀಡಿದ್ದು, ಅದನ್ನು ಯಾವ ರೀತಿ ಪಠಾಣ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈಗ ಎದ್ದಿರುವ ಬಂಡಾಯ ಶಮನದೊಂದಿಗೆ ಮುಖ್ಯಮಂತ್ರಿಗಳ ಎದುರು ಯಾವ ಮಟ್ಟದಲ್ಲಿ ಸೆಣಸಲಿದ್ದಾರೆ ಎಂಬುದೂ ಕುತೂಹಲ ಕೆರಳಿಸಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದವರೆಲ್ಲರೂ ಪಠಾಣ ಪರ ನಿಲ್ಲುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸಿನ ಯಾಸೀರಖಾನ್‌ ಪಠಾಣ, ಜೆಡಿಎಸ್‌ನ ಶಶಿಧರ ಯಲಿಗಾರ ನಡುವೆ ಫೈಟ್‌ ನಿಶ್ಚಿತವಾದಂತಾಗಿದೆ. ಏ. 24ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, ಅಲ್ಲಿಂದ ಅಖಾಡ ಫಿಕ್ಸ್‌ ಆಗಲಿದೆ.

Follow Us:
Download App:
  • android
  • ios