ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಲ್ಪಸಂಖ್ಯಾತರು ಸೇರಿ 11 ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ದಾವಣಗೆರೆ : ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದ್ದು, ಅಲ್ಪಸಂಖ್ಯಾತರು ಸೇರಿ 11 ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮಧ್ಯೆ, ಪಕ್ಷ ನಾಯಕರ ಮನವೊಲಿಕೆಗೆ ಸೊಪ್ಪು ಹಾಕದ ಸಾದಿಕ್‌ ಪೈಲ್ವಾನ್‌, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದು, ಕಾಂಗ್ರೆಸ್‌ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದಾರೆ. ಜೊತೆಗೆ, ಕಣದಲ್ಲಿರುವ 25 ಪಕ್ಷೇತರ ಅಭ್ಯರ್ಥಿಗಳ ಪೈಕಿ, 14 ಮಂದಿ ಅಲ್ಪಸಂಖ್ಯಾತರಾಗಿದ್ದು, ಕಾಂಗ್ರೆಸ್‌ ನಾಯಕರಿಗೆ ತಲೆನೋವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾದಿಕ್‌ ಮನವೊಲಿಕೆ ವೇಳೆ ಹೈಡ್ರಾಮಾ:

ಈ ಮಧ್ಯೆ, ಗುರುವಾರ ದಿನವಿಡೀ ಸಾದಿಕ್‌ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರ ಯತ್ನ ಮುಂದುವರಿಯಿತು. ಬೆಳಗ್ಗೆ ಇಲ್ಲಿನ ವೆಂಕಾ ಭೋವಿ ಕಾಲನಿಯಲ್ಲಿರುವ ಸಾದಿಕ್ ನಿವಾಸಕ್ಕೆ ಸಾದಿಕ್‌ರ ಸಹೋದರ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಜೊತೆಗೆ ಜಿಲ್ಲಾ ಸಚಿವರ ಆಪ್ತ ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಎ.ನಾಗರಾಜ ಸೇರಿ ಅನೇಕರು ಭೇಟಿ ನೀಡಿ, ಮನವೊಲಿಕೆ ಯತ್ನ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಮುಸ್ಲಿಂ ಸಮುದಾಯದ ಯುವ ಮುಖಂಡರು, ಹಿರಿಯರು ಸಾದಿಕ್‌ರ ಮನೆ ಬಳಿ ಜಮಾಯಿಸಿ, ‘ಗೋ ಬ್ಯಾಕ್ ಕಾಂಗ್ರೆಸ್’ ಎಂಬ ಘೋಷಣೆ ಕೂಗತೊಡಗಿದರು.

ಈ ಮಧ್ಯೆ, ವಸತಿ ಸಚಿವ ಜಮೀರ್ ಅಹಮ್ಮದ್‌ಗೆ ದಾವಣಗೆರೆ ಮುಸ್ಲಿಂ ಸಮಾಜ ಅಭ್ಯರ್ಥಿಗಳ ಮನವೊಲಿಸುವ ಕೆಲಸವನ್ನು ಸಿಎಂ ವಹಿಸಿದ್ದರು. ಆದರೆ, ದಾವಣಗೆರೆಗೆ ಬರಬೇಕಿದ್ದ ಜಮೀರ್ ಇತ್ತ ಬಾರದೆ, ಕೇರಳ ಚುನಾವಣೆ ಕಾರ್ಯಕ್ಕೆಂದು ಅಲ್ಲಿಗೆ ಹೋದರೆಂಬ ಸುದ್ದಿ ಹರಿದಾಡಿತು. ಇದೇ ವೇಳೆ, ಸಿಎಂ ಸ್ವತಃ ಕರೆ ಮಾಡಿ ಸಾದಿಕ್‌ಗೆ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಪ್ರಯೋಜನವಾಗಲಿಲ್ಲ.

ಅಂತಿಮವಾಗಿ, ಬೆಂಗಳೂರಿನಿಂದ ಕೆಪಿಸಿಸಿ ಮುಖಂಡರಾದ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಅವರು ಸಾದಿಕ್ ಪೈಲ್ವಾನರ ಮನೆಗೆ ಧಾವಿಸಿದರಾದರೂ, ಅಷ್ಟರಲ್ಲಿ ನಾಮಪತ್ರ ಹಿಂಪಡೆಯಲು ನಿಗದಿಯಾಗಿದ್ದ 3 ಗಂಟೆ ಡೆಡ್ ಲೈನ್ ಮುಕ್ತಾಯವಾಗಿತ್ತು.

ರಣರಂಗದಲ್ಲೇ ಇರುವೆ:

ಈ ಮಧ್ಯೆ, ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾದಿಕ್‌, ನಾನು ರಣರಂಗದಲ್ಲಿ ಇರುತ್ತೇನೆ. ಚುನಾವಣೆಯನ್ನು ಮಾಡಿಯೇ ಮಾಡುತ್ತೇನೆ ಎಂದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಜಮೀರ್ ಫೋನ್ ಮಾಡಿದ್ದರು. ಆದರೆ, ಯಾರೂ ಇಲ್ಲಿಗೆ ಬರಲೇ ಇಲ್ಲ. ಬರೀ 10 ನಿಮಿಷ ಇಲ್ಲಿಗೆ ಬಂದು, ಜನರ ಮನವೊಲಿಸಿದ್ದರೆ ಸಾಕಿತ್ತು. ನಮ್ಮ ಮತದಾರರ ಬಳಿ ಬಂದು ಪಕ್ಷದ ಮುಖಂಡರು ಮಾತನಾಡಿದ್ದರೆ ಆಗುತ್ತಿತ್ತು. ಆದರೆ, ಅಂತಹ ಕೆಲಸವನ್ನು ಪಕ್ಷದವರು ಮಾಡಲಿಲ್ಲ. ಹಾಗಾಗಿ, ನಾನು ಚುನಾವಣೆಯಲ್ಲಿ ಇರುತ್ತೇನೆ. ಈವರೆಗೂ ಯಾರೂ ಬಂದು ಅಲ್ಪಸಂಖ್ಯಾತರ ಮನವೊಲಿಸಿಲ್ಲ. ಅಲ್ಪಸಂಖ್ಯಾತ ಸಮುದಾಯದವರನ್ನು ಕಡೆಗಣಿಸಿದ್ದಕ್ಕೆ ಮುಸ್ಲಿಂ ಸಮಾಜ ನನ್ನನ್ನು ಚುನಾವಣೆಗೆ ನಿಲ್ಲಿಸಿದೆ. ನನ್ನನ್ನು ಸೋಲಿಸಿದರೆ, ಅಹಿಂದ ಸಮಾಜವೇ ಸೋತಂತೆ. ನನ್ನನ್ನು ಗೆಲ್ಲಿಸಿದರೆ, ಇಡೀ ಅಹಿಂದ ವರ್ಗಗಳೇ ಗೆದ್ದಂತೆ ಎಂದರು.