‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧರಾಗಿದ್ದೇವೆ. ನಾನು ನನ್ನ ಅವಕಾಶ ಬಿಟ್ಟುಕೊಟ್ಟು ಅವರ ಕೆಳಗೆ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಬೆಂಗಳೂರು (ಏ.09): ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧರಾಗಿದ್ದೇವೆ. ನಾನು ನನ್ನ ಅವಕಾಶ ಬಿಟ್ಟುಕೊಟ್ಟು ಅವರ ಕೆಳಗೆ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್‌ನ ಸರ್ವೋಚ್ಚ ಹುದ್ದೆಯಾದ ಎಐಸಿಸಿ ಅಧ್ಯಕ್ಷರಾದವರು ಮಲ್ಲಿಕಾರ್ಜುನ ಖರ್ಗೆ. ಯಾವ ಹಂತದಲ್ಲೂ ಅವರು ತಮ್ಮ ಪಕ್ಷ ನಿಷ್ಠೆಯನ್ನು ಬಿಟ್ಟಿಲ್ಲ. 

Add Asianetnews Kannada as a Preferred SourcegooglePreferred

ಅವರ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಪಾಲಿಸಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದರು. ‘ಖರ್ಗೆ ಅವರು ನಮ್ಮ ಪಕ್ಷದ ಆಸ್ತಿ. ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಅವರು ನನಗಿಂತ ರಾಜಕೀಯದಲ್ಲಿ ದೊಡ್ಡವರು. ರಾಜ್ಯದಲ್ಲಿ 1972ರಿಂದ ಕಾಂಗ್ರೆಸ್‌ ಕಟ್ಟಿದವರು. ನಾನು 1985ರಲ್ಲಿ ಕಾಂಗ್ರೆಸ್‌ ಒಡನಾಟಕ್ಕೆ ಬಂದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕ ಖರ್ಗೆ. ಪಕ್ಷಕ್ಕೆ ಅವರ ಕೊಡುಗೆ ಜಾಸ್ತಿ ಇದೆ’ ಎಂದರು. ‘ನನಗಿಂತಲೂ 20 ವರ್ಷಗಳ ಕಾಲ ಹಿರಿಯ ರಾಜಕಾರಣಿ. ಪಕ್ಷ ಸೂಚಿಸಿದೆ ಎಂಬ ಕಾರಣಕ್ಕೆ ಅರ್ಧ ರಾತ್ರಿಯಲ್ಲಿ ಶಾಸಕಾಂಗ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋದರು. 

ಅಮುಲ್‌ VS ನಂದಿನಿ ಫೈಟ್‌: ಗುಜರಾತ್‌ ಕಂಪನಿ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ

ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಅವರ ವಿಚಾರದಲ್ಲಿ ಯಾವ ತೀರ್ಮಾನ ನೀಡುತ್ತದೆಯೋ ಅದಕ್ಕೆ ನಾನು ಬದ್ಧ. ಖರ್ಗೆ ಅವರು ಬಯಸಿದರೆ ನನ್ನ ಅವಕಾಶ ಬಿಟ್ಟುಕೊಡುತ್ತೇನೆ. ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

8ನೇ ಬಾರಿ ಪ್ರಧಾನಿ ಮೋದಿ ಮೈಸೂರಿಗೆ: ಬಂಡೀಪುರದಲ್ಲಿಂದು ಟೈಗರ್ ಸಫಾರಿ

ಡಿಕೆಶಿ ಹೇಳಿದ್ದೇನು?
- ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಹುದ್ದೆವರೆಗೆ ಹೋದ ನಾಯಕ ಖರ್ಗೆ
- ಅವರು ಯಾವತ್ತೂ ಪಕ್ಷ ನಿಷ್ಠೆ ಬಿಟ್ಟಿಲ್ಲ, ನಮ್ಮ ಪಕ್ಷದ ಆಸ್ತಿ. ರಾಜ್ಯಕ್ಕೆ ಅವರ ಸೇವೆ ಬೇಕು
- ಅವರ ವಿಚಾರದಲ್ಲಿ ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಪಾಲಿಸಲು ಸಿದ್ಧ