Asianet Suvarna News Asianet Suvarna News

'ಪತಿ ಹೆಸರು ನಾನೆಲ್ಲೂ ಬಳಸಲ್ಲ: ರವಿ ತಾಯಿ ಆಶೀರ್ವಾದ ನನಗಿದೆ'

ರವಿ ತಾಯಿ ಆಶೀರ್ವಾದ ನನ್ನ ಮೇಲೆ ಇದೆ. ಆದರೆ ರವಿ ಹೆಸರನ್ನು ನಾನೆಲ್ಲೂ ಬಳಸುವುದಿಲ್ಲ ಎಂದು ಡಿಕೆ ರವಿ ಪತ್ನಿ ಕುಸುಮಾ ಹೇಳಿದ್ದಾರೆ

Ravi Mother Blessing With Me Says RR Nagar Congress Candidate Kusuma  snr
Author
Bengaluru, First Published Oct 9, 2020, 8:34 AM IST

ಬೆಂಗಳೂರು (ಅ.09):  ‘ಚುನಾವಣಾ ಪ್ರಚಾರದ ವೇಳೆ ನಾನು ಎಲ್ಲೂ ಕೂಡ ನನ್ನ ಪತಿ ಡಿ.ಕೆ.ರವಿ ಅವರ ಹೆಸರು ಬಳಸಿಕೊಳ್ಳುವುದಿಲ್ಲ. ಈ ಹಿಂದೆಯೂ ರವಿ ಅವರ ಹೆಸರು ಬಳಸಿಕೊಂಡು ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಕಾಂಗ್ರೆಸ್‌ ಸಿದ್ಧಾಂತದ ಮೇಲೆ ಪ್ರಚಾರ ನಡೆಸುತ್ತೇನೆ’ ಎಂದು ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ.

ಉಪಚುನಾವಣೆಗೆ ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಕುಸುಮಾ ಅವರು, ಸಿದ್ದರಾಮಯ್ಯ ಅವರ ಅನುಪಸ್ಥಿತಿಯಿಂದಾಗಿ ವಾಪಸ್‌ ತೆರಳಿದರು.

ಸಿದ್ದರಾಮಯ್ಯನವರ ಮೊರೆ ಹೋದ ಆರ್‌.ಆರ್‌. ನಗರ ಬೈ ಎಲೆಕ್ಷನ್ ಅಭ್ಯರ್ಥಿ..! .

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ರವಿ ಅವರ ತಾಯಿ ಗೌರಮ್ಮ ಅವರು ಚುನಾವಣೆಯಲ್ಲಿ ತಮ್ಮ ಪುತ್ರನ ಹೆಸರು ಬಳಸಿಕೊಳ್ಳದಂತೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ‘ರವಿ ಅವರ ತಾಯಿ ದೊಡ್ಡವರು, ಅವರಿಗೆ ಹೇಳುವ ಅಧಿಕಾರ ಇದೆ ಹೇಳಿದ್ದಾರೆ. ದೊಡ್ಡವರು ಹೇಳಿದ್ದನ್ನು ಕೇಳುವುದು ನನ್ನ ಧರ್ಮ. ಅವರು ಹೇಳಿಕೆ ನನಗೆ ಆಶೀರ್ವಾದ ಎಂದು ತಿಳಿಯುತ್ತೇನೆ. ಉಪ ಚುನಾವಣೆಯಲ್ಲಿ ರವಿ ಅವರ ಹೆಸರು ಬಳಸುವುದಿಲ್ಲ. ನಾನು ಯಾರ ಹೆಸರನ್ನೂ ಬಳಸಿಕೊಂಡು ಪ್ರಚಾರ ಮಾಡುತ್ತಿಲ್ಲ’ ಎಂದರು.

‘ಕಾಂಗ್ರೆಸ್‌ ಸಿದ್ಧಾಂತದ ಮೇಲೆ ನಾನು ಪ್ರಚಾರ ನಡೆಸುತ್ತೇನೆ. ಈ ಹಿಂದೆಯೂ ರವಿ ಅವರ ಹೆಸರು ಬಳಸಿಕೊಂಡು ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ನಾನು ಬಿಜೆಪಿ, ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ನನಗೆ ಬೇಕಿಲ್ಲ. ಯಾರೇ ಸ್ಪರ್ಧಿಸಿದರೂ ಆ ಪಕ್ಷಗಳ ಅಭ್ಯರ್ಥಿಗಳು ಎಂದಷ್ಟೇ ನಾನು ಎದುರಿಸುತ್ತೇನೆ’ ಎಂದು ತಿಳಿಸಿದರು.

‘ರಾಜರಾಜೇಶ್ವರಿ ನಗರ ಕ್ಷೇತ್ರ ದೊಡ್ಡದಿರಬಹುದು. ಆದರೆ ರಾಜಕೀಯ ನಮಗೆ ಹೊಸದಲ್ಲ. ನನ್ನ ತಂದೆ ರಾಜಕೀಯದಲ್ಲಿದ್ದವರು. ನನ್ನಂತ ವಿದ್ಯಾವಂತ ಮಹಿಳೆ ರಾಜಕೀಯ ಪ್ರವೇಶ ಮಾಡೋದು ಒಳ್ಳೆಯದು. ಎಲ್ಲ ಹೆಣ್ಣುಮಕ್ಕಳ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ನನಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿದೆ.ನಾನು ನನ್ನದೇ ಆದ ಕನಸು ಕಟ್ಟಿಕೊಂಡಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ನನಗೆ ಟಿಕೆಟ್‌ ಸಿಕ್ಕಿದ್ದರಿಂದ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದೆ. ಅವರು ಈಗ ತಮ್ಮ ನಿವಾಸದಲ್ಲಿ ಇಲ್ಲ ಎಂದು ಗೊತ್ತಾಯಿತು. ಮತ್ತೆ ಭೇಟಿ ಆಗಿ ಆಶೀರ್ವಾದ ಪಡೆಯುತ್ತೇನೆ’ ಎಂದರು.

ಈ ವೇಳೆ ಉಪಸ್ಥಿತರಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ‘ಕಾಂಗ್ರೆಸ್‌ ಹೊಸ ಪಕ್ಷವಲ್ಲ. ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ ಹೋರಾಟದ ಹಾದಿಯಲ್ಲೇ ನಡೆದುಬಂದಿದೆ. ಜಾತ್ಯಾತೀತ ತತ್ವವನ್ನು ಪಾಲಿಸುತ್ತಿರುವುದು ಕಾಂಗ್ರೆಸ್‌ ಮಾತ್ರ. ರಾಜರಾಜೇಶ್ವರಿ ನಗರ ಅಭ್ಯರ್ಥಿಯಾಗಿ ಕುಸುಮಾ ಅವರಿಗೆ ಟಿಕೆಟ್‌ ಸಿಕ್ಕಿದೆ. ಸೂಕ್ತ ಅಭ್ಯರ್ಥಿಯನ್ನ ಪಕ್ಷ ಕಣಕ್ಕಿಳಿಸಿದೆ. ಎಲ್ಲ ಅರ್ಹತೆ ಕುಸುಮಾ ಅವರಿಗಿದೆ. ಅವರ ತಂದೆ 2008ರಲ್ಲಿ ಚುನಾವಣೆಗೆ ನಿಂತಿದ್ದರು. ಕ್ಷೇತ್ರದ ಸಂಪೂರ್ಣ ಮಾಹಿತಿ ಅವರಿಗಿದೆ’ ಎಂದರು.

Follow Us:
Download App:
  • android
  • ios