ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ, ಸೋಶಿಯಲ್‌ ಮೀಡಿಯಾದಲ್ಲಿ ಮತ್ತೊಮ್ಮೆ ಫುಲ್‌ ಆಕ್ಟೀವ್‌ ಆಗಿದ್ದಾರೆ. ಬುಧವಾರ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತ್ತೀಚೆಗೆ ಗಮನಸೆಳೆದ ಎಲ್ಲಾ ವಿದ್ಯಮಾನಗಳಿಗೆ ಒಂದೇ ಟ್ವೀಟ್‌ನಲ್ಲಿ ಹೋಲ್‌ಸೇಲ್‌ ಆಗಿ ಶುಭಾಶಯ ಕೋರಿದ್ದಾರೆ. 

ಬೆಂಗಳೂರು (ಅ.26): ಮೋಹಕತಾರೆ ರಮ್ಯಾ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರೋದನ್ನ ನೋಡಿದರೆ, ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಕ್ರಿಯ ರಾಜಕಾರಣಕ್ಕೆ ಮುಖ ಮಾಡಬಹುದು ಎನ್ನುವ ಸೂಚನೆ ನೀಡಿದೆ. ಇತ್ತೀಚೆಗೆ ಅವರು ತಮ್ಮದೇ ಸಂಸ್ಥೆಯ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಲೀಡ್‌ ರೋಲ್‌ನಿಂದ ಹಿಂದೆ ಸರಿದು ಆ ಪಾತ್ರವನ್ನು ಸಿರಿ ಅವರಿಗೆ ನೀಡಿದ್ದರು. ಆ ಬಳಿಕ, ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿಯ ಜೊತೆ ರಾಯಚೂರಿನಲ್ಲಿ ಹೆಜ್ಜೆ ಹಾಕಿದ್ದರು. ಇವೆಲ್ಲದರ ನಡುವೆ ಅವರ ಟ್ವಿಟರ್‌ ಪುಟದಲ್ಲಿ ಸಾಕಷ್ಟು ದಿನಗಳಿಂದ ಮರೆಯಾಗಿದ್ದ ರಾಜಕೀಯದ ಟ್ವೀಟ್‌ಗಳು ಮತ್ತೆ ಬರಲಾರಂಭಿಸಿದೆ. ಮಂಗಳವಾರ ಸೋನಿಯಾ ಗಾಂಧಿಯ ಕುರಿತಾಗಿ ಟ್ವೀಟ್‌ ಮಾಡಿದ್ದ, ರಮ್ಯಾ ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಕೋರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯ ಕುರಿತಾಗಿ ಬಹುಶಃ ರಮ್ಯಾ ಮಾಡಿರುವ ಏಕೈಕ ಟ್ವೀಟ್‌ ಕೂಡ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ರಾಜ್ಯ ರಾಜಕೀಯದಲ್ಲಿ ಏನಾದರೂ ಸ್ಥಾನ ಗಿಟ್ಟಿಸಿಕೊಳ್ಳುವ ಹಂಬಲದಲ್ಲಿಯೇ ರಮ್ಯಾ ಅವರು ಮತ್ತೆ ಆಕ್ಟೋವ್‌ ಮೋಡ್‌ಗೆ ವಾಪಸಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಬುಧವಾರ ತಮ್ಮ ಟ್ವಿಟರ್‌ ಪುಟದಲ್ಲಿ ಬರೆದುಕೊಂಡಿರುವ ರಮ್ಯಾ, 'ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಾರ್ದಿಕ ಅಭಿನಂದನೆಗಳು ಅದರೊಂದಿಗೆ ಬಿಸಿಸಿಐ ಅಧ್ಯಕ್ಷರು, ಬ್ರಿಟಿಷ್‌ ಪ್ರಧಾನಿ (ಅವರನ್ನು ಕರ್ನಾಟಕದ ಅಳಿಯ ಎಂದು ಕರೆಯುತ್ತಿದ್ದಾರೆ) ಮತ್ತು ಬಾಕ್ಸ್ಆಫೀಸ್‌ ರೂಲ್‌ ಮಾಡುತ್ತಿರುವ ಕಾಂತಾರ ಟೀಮ್‌ಗೆ ಅಭಿನಂದನೆಗಳು. ಕನ್ನಡಿಗರು ಹಾಗೂ ಕರ್ನಾಟಕದ ಬಾವುಟ ಎತ್ತರದಲ್ಲಿ ಹಾರುತ್ತಿದೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅವರು ಹೇಳಿರುವ ಟ್ವೀಟ್‌ನ ಅರ್ಥದಂತೆ, ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್‌ ಅಧ್ಯಕ್ಷ (Congress President) ಚುನಾವಣೆಯಲ್ಲಿ ಶಶಿ ತರೂರ್‌ ಅವರನ್ನು ಸೋಲಿಸಿ ಕಳೆದ ಹಲವು ದಶಕಗಳ ಬಳಿಕ ಅಧ್ಯಕ್ಷ ಪದಕವಿಗೇರಿದ ಮೊದಲ ಗಾಂಧಿಯೇತರ ವ್ಯಕ್ತಿ ಎನಿಸಿದ್ದಾರೆ. ಇನ್ನು ಬಿಸಿಸಿಐನಲ್ಲಿ ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಢಿಯಾ ಮಾಜಿ ಆಲ್ರೌಂಡರ್‌ ರೋಜರ್‌ ಬಿನ್ನಿ(Roger Binny) ಅವರ ಅಧ್ಯಕ್ಷ ಅವಧಿ ಆರಂಭವಾಗಿದೆ. ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್‌ (Rishi Sunak), ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನು ಅವರು ಹೇಳಿದ ಹಾಗೆ ಕಾಂತಾರ (Kantara) ಚಿತ್ರದ ಬಾಕ್ಸಾಫೀಸ್‌ ಯಶಸ್ಸು ದೊಡ್ಡ ಮಟ್ಟದಲ್ಲಿ ಇನ್ನೂ ಮುಂದುವರಿದಿದೆ. ಕರ್ನಾಟಕದ ವ್ಯಕ್ತಿಗಳು ಹಾಗೂ ಕರ್ನಾಟಕದ ಧ್ವಜ ಬಾನೆತ್ತರದಲ್ಲಿ ಹಾರುತ್ತಿದೆ. ಈ ಎಲ್ಲವನ್ನೂ ಸೇರಿ ರಮ್ಯಾ ಕ್ರಿಯೇಟಿವ್‌ ಆಗಿ ಶುಭ ಕೋರಿದ್ದಾರೆ.

'ಸೋನಿಯಾ ಜಿ ಇಟಲಿಯವರು ಇರಬಹುದು..' ಮೋಹಕತಾರೆಯ 'ಪಾಲಿಟಿಕ್ಸ್‌' ಟ್ವೀಟ್‌!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವು ಅಭಿಮಾನಿಗಳು, 'ಸದಾ ಆಳ್ವಿಕೆ ನಡೆಸುತ್ತಿದ್ದೀರಿ, ನೀವು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತೀರಿ ಎಂದು ಕಾಯುತ್ತಿದ್ದೇನೆ' ಎಂದು ಬರೆದಿದ್ದಾರೆ. 'ಎಲ್ಲಿಂದ ಎಲ್ಲಿಗೆ ಹೋಲಿಕೆ!! ಜನರೇನು ಮೂರ್ಖರಲ್ಲ. ರಾಜಕೀಯ ಅಂದ್ರೆ , ಮೂರು ಘಂಟೆಯ ಚಿತ್ರಕ್ಕೆ ಹೋಲಿಕೆ ಯ ?' ಎಂದು ಪ್ರವೀಣ್‌ ಆಚಾರ್ಯ ಎನ್ನುವ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಬಹುಶಃ ಕನ್ನಡ ರಾಜ್ಯೋತ್ಸವ ಹತ್ತಿರ ಬಂದಿರುವುದು ನಿಮಗೆ ನೆನಪಾಗಿರಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ.

ಚಂದನಾ- ವಾಸುಕಿ ದೀಪಾವಳಿ: ಅಯ್ಯೋ ಇದು ಎಂಗೇಜ್‌ಮೆಂಟ್‌ ಫೋಟೋ ಅಂದ್ಕೊಂಡೆ ಎಂದ ನಟಿ ರಮ್ಯಾ

ಗಾಂಧಿಯ ಕುಟುಂಬಕ್ಕೆ ಗುಲಾಮನಾಗುವುದು ಹೆಮ್ಮೆಯಲ್ಲ, ಬಹುಶಃ ಕಾಂತಾರ ಒಂದೇ ಹೆಮ್ಮೆಯ ವಿಚಾರ ಎಂದು ಇನ್ನೊಬ್ಬರು ಬರೆದಿದ್ದಾರೆ. 'ಬಹುಶಃ ರಮ್ಯಾ ಅವರ ಮಸಾಲಾ ಟ್ವೀಟ್‌ ಇದು' ಎಂದು ಮಂಜುನಾಥ್‌ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. 'ಹಾಗಾದರೆ ಈಗ ಖರ್ಗೆಯವರಂತಹ ರಾಜಕಾರಣಿಯನ್ನು ಕನ್ನಡಿಗನೆಂದು ಮೆಚ್ಚಬೇಕೇ? ಅವರು ಭಾರತದ ಅಧ್ಯಕ್ಷರಲ್ಲ, ಅವರು ಕೇವಲ ಪಕ್ಷಪಾತದ ರಾಜಕಾರಣ ಮಾಡಿಕೊಂಡು ಬಂದ ರಾಜಕೀಯ ಪಕ್ಷವೊಂದರ ಅಧ್ಯಕ್ಷರು. ಭಾರತ ಮತ್ತು ಕಾಂಗ್ರೆಸ್‌ ಅನ್ನು ಒಂದಾಗಿ ಸಮೀಕರಿಸಬೇಡಿ' ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ.